Triple Murder Case: ಕೊಲೆಯಾದ ರೌಡಿಶೀಟರ್ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ
Triple Murder Case: ಕಳೆದ ವರ್ಷ ನವೆಂಬರ್ 12ರಂದು ರೌಡಿಶೀಟರ್ ಸೋಮನ ಕೊಲೆಯಾಗಿತ್ತು. ಮೊನ್ನೆ ಕೊಲೆಯಾದ ಸಿದ್ದಾರೂಢ ಹಾಗೂ ಕುಟುಂಬಸ್ಥರು ಸೋಮನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಸೋಮು ಕೊಲೆ ಬಳಿಕ ಆತನ ಪತ್ನಿ ಭಾಗ್ಯಶ್ರೀ, ತನ್ನ ಗಂಡನ ಶವದ ಮುಂದೆ, ಗಂಡನ ಕೊಲೆಗೆ ಪ್ರತೀಕಾರ ತೀರುವ ತನಕ ತನ್ನ ಕೊರಳಿನಲ್ಲಿನ ಮಾಂಗಲ್ಯ ಸೂತ್ರ ತೆಗೆಯುವುದಿಲ್ಲ ಎಂದು ಶಪಥ ಮಾಡಿದ್ದಳು.

ಬಂಧಿತ ಭಾಗ್ಯಶ್ರೀ

ಕಲಬುರಗಿ: ಕಲಬುರಗಿಯ (Kalaburagi crime news) ಹೊರವಲಯದ ಪಟ್ಟಣ ಗ್ರಾಮದ ಬಳಿಯ ಡ್ರೈವರ್ ಡಾಬಾದಲ್ಲಿ ನಡೆದ ತ್ರಿಬಲ್ ಮರ್ಡರ್ (Triple Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಕೊಲೆಯಾದ ರೌಡಿಶೀಟರ್ ಸೋಮ ಎಂಬಾತನ ಪತ್ನಿಯ ಸೇಡಿನ ಶಪಥವೇ ಕೊಲೆಗೆ ಕಾರಣ ಎನ್ನುವುದು ಗೊತ್ತಾಗಿದೆ. ಗಂಡನ ಕೊಲೆಗೆ ಪ್ರತಿಕಾರ ತೆಗೆದುಕೊಳ್ಳುವವರೆಗೂ ತನ್ನ ಕೊರಳಲ್ಲಿದ್ದ ಮಾಂಗಲ್ಯ ಸೂತ್ರ ತೆಗೆಯುವುದಿಲ್ಲ ಎಂದು ಗಂಡನ ಶವದ ಮುಂದೆ ಈಕೆ ಶಪಥ ಮಾಡಿದ್ದಳು. ಆಕೆಯ ಶಪಥವೇ ತ್ರಿವಳಿ ಕೊಲೆಗೆ ಮುಖ್ಯ ಕಾರಣ ಎಂದು ಬಂಧಿತರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಕೆಲವೇ ಗಂಟೆಗಳಲ್ಲಿ ಕಲಬುರಗಿ ಪೊಲೀಸರು ಹತ್ತು ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪಟ್ಟಣ ಗ್ರಾಮದ ನಾಗರಾಜ ಬಿನ್ ಶಿವಪುತ್ರ ತಾಳಿಕೋಟಿ (23), ಈರಣ್ಣ ಬಿನ್ ಶಿವಪುತ್ರ ತಾಳಿಕೋಟಿ (27), ಭೀರಣ್ಯ ಬಿನ್ ಲಕ್ಷ್ಮಣ ಪೂಜಾರಿ (21), ಸಿದ್ದಾರೂಡ ಬಿನ್ ಕಲ್ಯಾಣ ಹತಗುಂದಿ (22), ನಾಗರಾಜ ಬಿನ್ ಶಶಿಧರ ಬಿಸಗೊಂಡ (17), ತಂಬಾಕವಾಡಿ ಗ್ರಾಮದ ಪೀರೇಶ ಬಿನ್ ಅಂಬಾರಾಯ ಹಡಪದ(35), ಪಟ್ಟಣ ಗ್ರಾಮದ ಸಾಗರ ಬಿನ್ ಲಕ್ಷ್ಮಿಕಾಂತ ಪಾಟೀಲ (24), ರಾಚಣ್ಯ ಅಲಿಯಾಸ್ ಗಿಲ್ಲಿ ಬಿನ್ ಬಸವರಾಜ ಮಾಲಿ ಪಾಟೀಲ (22), ಚಂದ್ರಕಾಂತ ಬಿನ್ ಶಾಂತಪ್ಪ ಪೂಜಾರಿ (30), ಸೋಮನ ಪತ್ನಿ ಭಾಗ್ಯಶ್ರೀ (30) ಎಂಬವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತ್ರಿವಳಿ ಕೊಲೆಗೆ ಅಸಲಿ ಕಾರಣ ಗೊತ್ತಾಗಿದೆ.
ಕಳೆದ ವರ್ಷ ನವೆಂಬರ್ 12ರಂದು ರೌಡಿಶೀಟರ್ ಸೋಮನ ಕೊಲೆಯಾಗಿತ್ತು. ಮೊನ್ನೆ ಕೊಲೆಯಾದ ಸಿದ್ದಾರೂಢ ಹಾಗೂ ಕುಟುಂಬಸ್ಥರು ಸೋಮನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಸೋಮು ಕೊಲೆ ಬಳಿಕ ಆತನ ಪತ್ನಿ ಭಾಗ್ಯಶ್ರೀ, ತನ್ನ ಗಂಡನ ಶವದ ಮುಂದೆ ಶಪಥ ಮಾಡಿದ್ದಳು. ಗಂಡನ ಕೊಲೆಗೆ ಪ್ರತೀಕಾರ ತೀರುವ ತನಕ ತನ್ನ ಕೊರಳಿನಲ್ಲಿನ ಮಾಂಗಲ್ಯ ಸೂತ್ರ ತೆಗೆಯುವುದಿಲ್ಲ ಎಂದು ಆಣೆ ಮಾಡಿದ್ದಳು. ಭಾಗ್ಯಶ್ರೀಯ ಈ ಶಪಥ ಹಾಗೂ ತಮ್ಮನ ಕೊಲೆಯ ಸೇಡು ತೀರಿಸಲು ಕೊಲೆಯಾದ ಸೋಮನ ಸಹೋದರ ಈರಣ್ಣ, ನಾಗರಾಜ್ ಮತ್ತು ಗ್ಯಾಂಗ್ ಕಾಯುತ್ತಿದ್ದರು.
ಸೋಮನ ಕೊಲೆ ಪ್ರಕರಣದ ಆರೋಪಿ ಸಿದ್ದಾರೂಢ ತುಗದಿ, ಜಗದೀಶ್ ಹಾಗೂ ಅಣ್ಣಪ್ಪ ಬೇಲ್ ಮೇಲೆ ಬಿಡುಗಡೆಯಾದ ಬಳಿಕ ಪ್ರತೀಕಾರಕ್ಕೆ ಸೋಮನ ಸಹೋದರರು ಹೊಂಚು ಹಾಕಿದ್ದರು. ಅದರಂತೆ ಜೂನ್ 24ರ ಮಂಗಳವಾರ ಮಧ್ಯರಾತ್ರಿ ತಮ್ಮದೇ ಡಾಬಾದಲ್ಲಿ ಸಿದ್ದಾರೂಢ, ಜಗದೀಶ್ ಮತ್ತು ಅಣ್ಣಪ್ಪ ಇರುವ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಸಿದ್ದಾರೂಢ, ಜಗದೀಶ್ ಹಾಗೂ ಕೆಲಸಗಾರ ರಾಮುನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಮೂರನೇ ಶವ ಪತ್ತೆ ಹಚ್ಚಿದ ನಾಯಿ
ಢಾಬಾದಲ್ಲಿ ಕೊಲೆಯಾದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಎರಡು ಶವ ಸಿಕ್ಕಿತ್ತು. ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಬಲ್ ಮರ್ಡರ್ ಆಗಿದೆ ಎಂದೇ ಮಾಹಿತಿ ಕೊಟ್ಟಿದ್ದರು. ಬಳಿಕ ಸ್ಥಳಕ್ಕೆ ಬಂದ ಡಾಗ್ ಸ್ಕ್ವಾಡ್, ಅಲ್ಲಿನ ರಕ್ತದ ಕಲೆಗಳ ಜಾಡು ಹಿಡಿದು ಢಾಬಾದ ಹಿಂದಿರುವ ಹೊಲಕ್ಕೆ ಹೋಗಿದೆ. ಹೊಲದಲ್ಲಿ ಮತ್ತೊಬ್ಬ ವ್ಯಕ್ತಿ, ಢಾಬಾದಲ್ಲಿ ಕೆಲಸಗಾರನಾಗಿದ್ದ ರಾಮಚಂದ್ರನ ಶವ ಕಂಡುಬಂದಿದೆ.
ದುರಂತ ಎಂದರೆ ಹಂತಕರ ಟಾರ್ಗೆಟ್ ಆಗಿದ್ದುದು ರಾಮಚಂದ್ರ ಅಲ್ಲ, ಬದಲಿಗೆ ಅಣ್ಣಾರಾಯ ತುಗದಿ. ಅಮವಾಸ್ಯೆ ಕತ್ತಲಲ್ಲಿ ತಪ್ಪಿಸಿಕೊಂಡು ಹೊಲದಲ್ಲಿ ಓಡಿ ಹೋಗುತ್ತಿದ್ದ ಅಣ್ಣಾರಾಯ ಮತ್ತು ರಾಮಚಂದ್ರರನ್ನು ಹಂತಕರು ಬೆನ್ನಟ್ಟಿದ್ದಾರೆ. ಕತ್ತಲಲ್ಲಿ ರಾಮಚಂದ್ರನನ್ನೇ ಅಣ್ಣಾರಾಯ ಎಂದುಕೊಂಡು ಮನಸೋ ಇಚ್ಚೆ ಮಚ್ಚು ಬೀಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಸದ್ಯ ತ್ರಿಬಲ್ ಮರ್ಡರ್ ಕೊಲೆ ಪ್ರಕರಣ ಸಂಬಂಧ 10 ಜನ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಇದನ್ನೂ ಓದಿ: Triple Murder Case: ಕಲಬುರಗಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ, ಅಮಾನುಷವಾಗಿ ಕೊಚ್ಚಿ ಮೂವರ ಕೊಲೆ