ಕಲಬುರಗಿ: ನಿನ್ನೆ ಒಂದೇ ದಿನ ರಾಜ್ಯದಲ್ಲಿ ʼರೇಣುಕಾಸ್ವಾಮಿ ಮರ್ಡರ್ʼ ಮಾದರಿಯ (renukaswamy murder case) ಎರಡು ಶಾಕಿಂಗ್ ಘಟನೆಗಳು ವರದಿಯಾಗಿವೆ. ಒಂದು ಬೆಂಗಳೂರು (Bengaluru) ಗ್ರಾಮಾಂತರದ ನೆಲಮಂಗಲದಲ್ಲಿ ನಡೆದಿದ್ದು, ಯುವಕನ ಮೇಲಿನ ಹಲ್ಲೆಯ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಕಲಬುರಗಿ ಜಿಲ್ಲೆಯಲ್ಲಿಯೂ (Kalaburagi crime news) ರೇಣುಕಾಸ್ವಾಮಿಯನ್ನು ಡಿ ಬಾಸ್ ಗ್ಯಾಂಗ್ ಹತ್ಯೆ ಮಾಡಿದ ರೀತಿಯಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ವರದಿಯಾಗಿದೆ. 39 ವರ್ಷದ ರಾಘವೇಂದ್ರ ನಾಯಕ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮಾರ್ಚ್ 12ರಂದು ನಡೆದಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಶ್ವಿನಿ ಎಂಬಾಕೆಯ ಜೊತೆಗೆ ರಾಘವೇಂದ್ರ ನಾಯಕ್ ವಿವಾಹಿತನಾಗಿದ್ದರೂ ಸಹಜೀವನ ನಡೆಸುತ್ತಿದ್ದ. ಬಳಿಕ ರಾಘವೇಂದ್ರನ ಸಂಗ ತೊರೆದ ಅಶ್ವಿನಿ ಗುರುರಾಜ್ ಎಂಬಾತನ ಜೊತೆಗೆ ಸ್ನೇಹ ಬೆಳೆಸಿದ್ದಳು. ಇದರಿಂದ ಕೋಪಗೊಂಡ ರಾಘವೇಂದ್ರ ಅಶ್ವಿನಿ ಜೊತೆ ಜಗಳವಾಡಿದ್ದ. ಇದನ್ನು ಆಕೆ ಹಾಲಿ ಪ್ರಿಯಕರ ಗುರುರಾಜ್ಗೆ ತಿಳಿಸಿದ್ದಳು. ಕ್ರುದ್ಧಗೊಂಡ ಗುರುರಾಜ್ ಮತ್ತು ಗ್ಯಾಂಗ್ ರಾಘವೇಂದ್ರನನ್ನು ಕಿಡ್ನಾಪ್ ಮಾಡಿದೆ. ಕಿಡ್ನಾಪ್ ಮಾಡಿಕೊಂಡು ಸ್ಮಶಾನಕ್ಕೆ ಕರೆದೊಯ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಬಡಿಗೆಯಿಂದ ಹೊಡೆದು, ಗುಪ್ತಾಂಗಕ್ಕೆ ಒದ್ದು ಕೊಂದಿದ್ದಾರೆ. ಶವವನ್ನು ನದಿಗೆ ಎಸೆದಿದ್ದಾರೆ. ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಇನ್ನೊಂದು ಘಟನೆ ನಡೆದಿತ್ತು. ಮಾಜಿ ಪ್ರೇಯಸಿಗೆ ಮೆಸೇಜ್ ಮಾಡಿ ಕಿರುಕುಳ ಕೊಟ್ಟಿದ್ದ ಕುಶಾಲ್ ಎಂಬಾತನನನ್ನು ಯುವತಿಯ ಹಾಲಿ ಪ್ರಿಯಕರ ಸೇರಿದಂತೆ 8ರಿಂದ 10 ಜನ ದುಷ್ಕರ್ಮಿಗಳು ಅಪಹರಿಸಿ ಕ್ರೂರವಾಗಿ ಥಳಿಸಿದ್ದರು. ʼನೀನೂ ರೇಣುಕಾ ಸ್ವಾಮಿ ರೀತಿ ಸಾಯ್ತೀಯʼ ಎಂದು ಕೋಲುಗಳಿಂದ ಯುವಕನಿಗೆ ಮನಸೋ ಇಚ್ಛೆ ಥಳಿಸಿ, ಒದ್ದು, ಬೆತ್ತಲೆ ಮಾಡಿ ಮರ್ಮಾಂಗಕ್ಕೆ ತುಳಿದು ವಿಕೃತಿ ಮೆರೆದಿದ್ದರು. ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್ ಮತ್ತು ಶಶಾಂಕ್ ಗೌಡ ಬಂಧಿತ ಆರೋಪಿಗಳು.
ಇದನ್ನೂ ಓದಿ: Assault Case: ಯುವತಿಗೆ ಮೆಸೇಜ್; ಯುವಕನ ಬಟ್ಟೆ ಬಿಚ್ಚಿಸಿ, ಮರ್ಮಾಂಗಕ್ಕೆ ಒದ್ದು ರೇಣುಕಾಸ್ವಾಮಿ ಕೇಸ್ ಮಾದರಿಯಲ್ಲಿ ಹಲ್ಲೆ