ಪ್ರಯಾಗ್ರಾಜ್: ಮಹಾಕುಂಭ ಮೇಳದಲ್ಲಿ(Mahakumbh 2025) ಸಂಭವಿಸಿದ್ದ ಭೀಕರ ಕಾಲ್ತುಳಿತದ(Kumbhamela Stampede) ಬೆನ್ನಲ್ಲೇ ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಅವರು ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಅವರು, ವದಂತಿಗಳಿಗೆ ಗಮನ ಕೊಡಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ. ಭಕ್ತರಿಗಾಗಿ ಸ್ನಾನ ಮಾಡಲು ಅನೇಕ ಘಾಟ್ಗಳನ್ನು ನಿರ್ಮಿಸಲಾಗಿದೆ. ಜನರು ಆಡಳಿತದ ಸೂಚನೆಗಳನ್ನು ಪಾಲಿಸಬೇಕು ಮತ್ತು ವ್ಯವಸ್ಥೆಗಳನ್ನು ಮಾಡುವಲ್ಲಿ ಸಹಕರಿಸಬೇಕು ಮನವಿ ಮಾಡಿದ್ದಾರೆ.
ಬೆಳಗ್ಗಿನಿಂದ ಮೂರು ಕೋಟಿ ಜನ ಅಮೃತ ಸ್ನಾನ ಮಾಡಿದ್ದಾರೆ. ಪ್ರಸ್ತುತ 10ಕೋಟಿ ಭಕ್ತರು ಕುಂಭಮೇಳದಲ್ಲಿದ್ದಾರೆ. ಸಂಭವಿಸಿದ್ದ ಕಾಲ್ತುಳಿತದ ಬಗ್ಗೆ ಅನೇಕ ಜನ ಸತ್ತಿರುವ ಬಗ್ಗೆ ವದಂತಿ ಹಬ್ಬುತ್ತಿದೆ. ಅಂತಹ ವದಂತಿ ಕಿವಿಗೊಡಬೇಡಿ. ಭದ್ರತಾ ಸಿಬ್ಬಂದಿ ಜತೆ ಭಕ್ತರು ಸಹಕರಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಮತ್ತೊಂದೆಡೆ ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತ ನಡೆದ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್ ತುರ್ತು ಸಭೆ ಕರೆದಿದ್ದಾರೆ. ದುರಂತದ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಇನ್ನು ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಮಾತನಾಡಿ, ಪ್ರಸ್ತುತ ಪ್ರಯಾಗರಾಜ್ನಲ್ಲಿ 12 ಕೋಟಿಗೂ ಹೆಚ್ಚು ಭಕ್ತರಿದ್ದಾರೆ. ಇಷ್ಟೊಂದು ದೊಡ್ಡ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟ. ನಮ್ಮೊಂದಿಗೆ ಲಕ್ಷಾಂತರ ಸಂತರ ಗುಂಪಿದೆ. ಭಕ್ತರ ಸುರಕ್ಷತೆ ನಮಗೆ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh 2025: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ; ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ
ರೈಲು ಸಂಚಾರ ಬಂದ್
ಕಾಲ್ತುಳಿತದ ಬೆನ್ನಲ್ಲೇ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, 50 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ಬಂದ್ ಮಾಡಲಾಗಿದೆ.