Mahakumbh 2025: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ; ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಲಖನೌ: ಇಂದು (ಜ. 29) ಮೌನಿ ಅಮಾವಾಸ್ಯೆ (Mauni Amavasya) ಹಿನ್ನೆಲೆಯಲ್ಲಿ ʼಶಾಹಿ ಸ್ನಾನʼ ಮಾಡಲು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಜನಪ್ರವಾಹವೇ ಹರಿದು ಬಂದಿದ್ದು, ಕಾಲ್ತುಳಿತ (Stampede) ಸಂಭವಿಸಿದೆ (Mahakumbh 2025). ಘಟನೆಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಿಗಿಸಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಇನ್ನು ಜನಸಂದಣಿಯಿಂದಾಗಿ ಆಂಬ್ಯುಲೆನ್ಸ್ ಸಂಚಾರಕ್ಕೂ ತೊಂದರೆಯಾಗಿದೆ. ʼʼಎಲ್ಲ ರಸ್ತೆಗಳಲ್ಲೂ ಜನಜಂಗುಳಿ ಕಾಣಿಸುತ್ತಿದೆ. ಸ್ನಾನಘಟ್ಟದ ಬಳಿ ನೆರೆದಿದ್ದ ಜನಜಂಗುಳಿಯಿಂದ ಕೆಲ ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮಹಾಕುಂಭದಲ್ಲಿ ನೆರೆದಿದ್ದ ಅಪಾರ ಭಕ್ತರಿಂದಾಗಿ ಪರಿಸ್ಥಿತಿ ಹತೋಟಿ ತಪ್ಪಿದೆ. ಕೆಲವರು ಬ್ಯಾರಿಕೇಡ್ ಮುರಿದು ಒಮ್ಮೆಲೆ ಒಳನುಗ್ಗಿದ್ದರಿಂದ ಮುಂಜಾನೆ 2.30ರ ವೇಳೆಗೆ ಕಾಲ್ತುಳಿತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿವೆ.
PM Modi has spoken to UP CM Yogi Adityanath second time in an hour. He is continuously monitoring the situation at Mahakumbh. https://t.co/ZQ5Zo3srna
— ANI (@ANI) January 29, 2025
ಪರಿಸ್ಥಿತಿಯನ್ನು ನಿಯಂತ್ರಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಿಂದ ಹಿಂದೆ ಸರಿಯುವಂತೆ ಸ್ಥಳೀಯ ಆಡಳಿತವು ಭಕ್ತರಲ್ಲಿ ಮನವಿ ಮಾಡಿದೆ. ದುರಂತದ ಹಿನ್ನೆಲೆಯಲ್ಲಿ ಶ್ರೀಗಳು ಮೌನಿ ಅಮಾವಾಸ್ಯೆ ಸ್ನಾನವನ್ನು ರದ್ದುಗೊಳಿಸಿದ್ದಾರೆ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಪಿಟಿಐಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Maha Kumbh 2025: ಮಹಾಕುಂಭ ಮೇಳದಲ್ಲಿ ಭಾರೀ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವು
ಮೌನಿ ಅಮಾವಾಸ್ಯೆಯಂದು ನಡೆಯುವ ಶಾಹಿ ಸ್ನಾನವು ಮಹಾ ಕುಂಭಮೇಳದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಪ್ರತಿ 144 ವರ್ಷಗಳಿಗೊಮ್ಮೆ ಸಂಭವಿಸುವ 'ತ್ರಿವೇಣಿ ಯೋಗ' ಎಂದು ಕರೆಯಲ್ಪಡುವ ಅಪರೂಪದ ವಿದ್ಯಾಮಾನ ಈ ಬಾರಿ ಸಂಭವಿಸುತ್ತಿದ್ದು, ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸಿದ್ದಾರೆ. ಬುಧವಾರ ಅಂದಾಜು 10 ಕೋಟಿ ಭಕ್ತರು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾ ಕುಂಭಮೇಳ ಆರಂಭವಾದ 17 ದಿನಗಳಲ್ಲಿ ಈಗಾಗಲೇ 15 ಕೋಟಿಗೂ ಹೆಚ್ಚು ಭಕ್ತರು ಸಂಗಮ ಮತ್ತು ಘಾಟ್ಗಳಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಂಗಳವಾರ (ಜ. 28) ಒಂದೇ ದಿನ 4.8 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ. ಇದು ಮಕರ ಸಂಕ್ರಾಂತಿಯಂದು 3.5 ಕೋಟಿ ಮಂದಿ ಅಮೃತ ಸ್ನಾನ ಮಾಡಿದ್ದರು. ಇದು ಅದಕ್ಕಿಂತಲೂ ಹೆಚ್ಚು ಎಂದು ವರದಿ ತಿಳಿಸಿದೆ. ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ‘ಪವಿತ್ರ’ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ.