ನವದೆಹಲಿ: ಹರಿಯಾಣದ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಭಾನುವಾರ(ಜ.19) ದಂದು ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅವಳಿ ಒಲಿಂಪಿಕ್ ಕಂಚಿನ ಪದಕ ವಿಜೇತೆ ಮನು ಭಾಕರ್ ಅವರ ಚಿಕ್ಕಪ್ಪ ಮತ್ತು ಅಜ್ಜಿ ಮೃತಪಟ್ಟಿದ್ದಾರೆ.
ಮನು ಅವರ ಚಿಕ್ಕಪ್ಪ ಮತ್ತು ಅಜ್ಜಿ ಬೈಕ್ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಘಟನೆಯ ನಂತರ ಕಾರು ಚಾಲಕ ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಎಎಸ್ಐ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಮನು ಭಾಕರ್ ಮೃತ ಚಿಕ್ಕಪ್ಪ ಮತ್ತು ಅಜ್ಜಿಯ ಮನೆಗೆ ಧಾವಿಸಿದ್ದಾರೆ. 2 ದಿನಗಳ ಹಿಂದಷ್ಟೇ ಮನು ಅವರು ದೇಶದ ಪ್ರತಿಷ್ಠಿತ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಸ್ವೀಕರಿಸಿದ್ದರು. ಈ ಸಂತಸದಲ್ಲಿರುವಾಗಲೇ ಅಜ್ಜಿ ಮತ್ತು ಚಿಕ್ಕಪ್ಪನ ಸಾವು ಅವರ ಕುಟುಂಬಕ್ಕೆ ಬರಸಿಡಿಲು ಬಡಿದಿದೆ.