ಕಾರವಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ; ಐಎನ್ಎಸ್ ವಾಗ್ಶೀರ್ ಸಬ್ ಮೆರಿನ್ನಲ್ಲಿ ಸಂಚಾರ
ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐಎನ್ಎಸ್ ವಾಗ್ಶೀರ್ ಸಬ್ ಮೇರಿನ್ನಲ್ಲಿ ನೌಕಾಪಡೆ ಮುಖ್ಯಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಂಚರಿಸಿದರು. ದ್ರೌಪದಿ ಮುರ್ಮು ಅವರು ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದಾರೆ.
ಕಾರವಾರದಲ್ಲಿ ಐಎನ್ಎಸ್ ವಾಗ್ಶೀರ್ ಸಬ್ ಮೆರಿನ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು. -
ಶಿರಸಿ: ಕಾರವಾರದ ಕದಂಬ ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಭೇಟಿ ನೀಡಿದ್ದು, ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮoಕಾಳ ಎಸ್ ವೈದ್ಯ ಅವರು ಸ್ವಾಗತಿಸಿದರು. ಗೋವಾದಿಂದ ಬೆಳಗ್ಗೆ 9 ಗಂಟೆಗೆ ನೌಕಾದಳ ವಿಶೇಷ ಹೆಲಿಕಾಪ್ಟರ್ನಲ್ಲಿ ಕದಂಬ ನೌಕಾನೆಲೆಗೆ ರಾಷ್ಟ್ರಪತಿಗಳು ಆಗಮಿಸಿದರು.
ಈ ವೇಳೆ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ. ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ. ಎನ್. ಹಾಗೂ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಕಾರವಾರ ನೆವಲ್ ಬೇಸ್ನ ಫ್ಲಾಗ್ ಆಫೀಸರ್ ಕಮಾಂಡಿoಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ನೌಕಾಪಡೆಯ ಹಿರಿಯ ಅಧಿಕಾರಿಗಳು ಇದ್ದರು.

ನಂತರ ರಾಷ್ಟ್ರಪತಿ ಮುರ್ಮು ಅವರು ಐಎನ್ಎಸ್ ವಾಗ್ಶೀರ್ ಸಬ್ ಮೆರಿನ್ನಲ್ಲಿ ನೌಕಾಪಡೆ ಮುಖ್ಯಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಂಚರಿಸಿದರು. ದ್ರೌಪದಿ ಮುರ್ಮು ಅವರು ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದಾರೆ. ಈ ಹಿಂದೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಸಬ್ ಮೆರಿನ್ನಲ್ಲಿ ಸಂಚರಿಸಿದ್ದರು.

ಐಎನ್ಎಸ್ ವಾಗ್ಶೀರ್, ಕಲ್ವರಿ ಶ್ರೇಣಿಯ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಯಾಗಿದೆ. ಇದು ಫ್ರೆಂಚ್ ಸ್ಕಾರ್ಪಿನ್ ವಿನ್ಯಾಸದಲ್ಲಿ ಮುಂಬೈನ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ನಲ್ಲಿ ಸಂಪೂರ್ಣವಾಗಿ ಸ್ವದೇಶಿಯಾಗಿ ನಿರ್ಮಾಣಗೊಂಡ ಅತ್ಯಾಧುನಿಕ ಸಬ್ ಮೆರಿನ್ ಆಗಿದೆ.

ರಾಷ್ಟ್ರಪತಿ ಮುರ್ಮು ಒಪ್ಪಿಗೆ; ಕಾನೂನಾಗಿ ಮಾರ್ಪಟ್ಟ ವಿಬಿ-ಜಿ ರಾಮ್ ಜಿ 2025 ಮಸೂದೆ
ಈ ಸಬ್ ಮೆರಿನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2025ರ ಜನವರಿ 15ರಂದು ಲೋಕಾರ್ಪಣೆ ಮಾಡಿದ್ದರು. ಸಮುದ್ರದ ಆಳದಲ್ಲಿ ಗಂಟೆಗೆ ಗರಿಷ್ಠ 37 ಕಿ.ಮೀ (20 ನಾಟ್ಸ್) ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 350 ಮೀಟರ್ ಆಳದಲ್ಲಿ ಸಂಚರಿಸಬಲ್ಲದು.