ನವದೆಹಲಿ: ರಾಷ್ಟ್ರೀಯ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮತ್ತೆ ದೇಸಿ ಕ್ರಿಕೆಟ್ ಆಡಿ ಬನ್ನಿ ಎಂದು ಬಿಸಿಸಿಐ ಆದೇಶಕ್ಕೆ ಓಗೊಟ್ಟು ತಾರಾ ಕ್ರಿಕೆಟಿಗರು ರಣಜಿ ಕಡೆ ಮುಖ ಮಾಡಿದ್ದಾರೆ. ಆದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಕುತ್ತಿಗೆ ನೋವಿನಿಂದ ರಣಜಿ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಕೊಹ್ಲಿ ಮಾತ್ರವಲ್ಲದೆ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಕರ್ನಾಟಕ ತಂಡದ ಪರ ಪಂದ್ಯವನ್ನಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಈಗಾಗಲೇ ಪ್ರಕಟವಾಗಿರುವ ದೆಹಲಿ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ 2012ರಲ್ಲಿ ಕೊನೆಯದಾಗಿ ರಣಜಿಯಲ್ಲಿ ಆಡಿದ್ದರು. ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ದೆಹಲಿ ತಂಡದಲ್ಲಿ ಸ್ಥಾನ ಪಡೆದಿದ್ದು, 7 ವರ್ಷಗಳ ಬಳಿಕ ರಣಜಿಯಲ್ಲಿ ಆಡಲಿದ್ದಾರೆ. ಆದರೆ ಅವರು ನಾಯಕತ್ವ ನಿರಾಕರಿಸಿರುವುದರಿಂದ ಆಯುಷ್ ಬಡೋನಿ ನಾಯಕರಾಗಿ ಮುಂದುವರಿದಿದ್ದಾರೆ. ಪಂತ್ ವಿಕೆಟ್ ಕೀಪರ್ ಆಗಿ ಪಂದ್ಯ ಆಡಲಿದ್ದಾರೆ.
ಕರ್ನಾಟಕ ವಿರುದ್ಧ ಜ.23ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ ರಣಜಿ ಪಂದ್ಯದಲ್ಲಿ ಶುಭ್ಮನ್ ಗಿಲ್ ಪಂಜಾಬ್ ಪರ ಆಡುವ ಸಾಧ್ಯತೆಯಿದೆ. ತಮ್ಮ ಲಭ್ಯತೆ ಬಗ್ಗೆ ಈಗಾಗಲೇ ಅವರು ಪಂಜಾಬ್ ಕ್ರಿಕೆಟ್ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಈಗಾಗಲೇ ಮುಂಬೈ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ.ಯಶಸ್ವಿ ಜೈಸ್ವಾಲ್ ಕೂಡಾ ರಣಜಿಗೆ ಮರಳುತ್ತಿದ್ದು, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯದಲ್ಲಿ ಮುಂಬೈ ತಂಡದ ಆಯ್ಕೆ ಲಭ್ಯವಿದ್ದಾರೆ. ರವೀಂದ್ರ ಜಡೇಜಾ ಸೌರಾಷ್ಟ್ರ ಪರ ಆಡಲಿದ್ದಾರೆ.