ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಅವರ ಹತ್ಯೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಸಿಯಾ ಗೋಯಲ್ (Siya Goyal) ವಿಚಾರಣೆಯಲ್ಲಿ ಪ್ರಮುಖ ವಂಶಗಳು ಬಯಲಾಗಿವೆ. ಸಿಯಾ ಗೋಯಲ್, ಈ ಹಿಂದೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ರಾಜಾ ರಘುವಂಶಿ (Sonam Raghuvanshi) ಕೊಲೆ ಪ್ರಕರಣವನ್ನು ಇಂಟರ್ನೆಟ್ನಲ್ಲಿ ಸಂಪೂರ್ಣವಾಗಿ ಸಂಶೋಧನೆ ನಡೆಸಿ, ಅದರಿಂದಲೇ ಕೇತನ್ ಕೊಲ್ಲಲು ಸ್ಕೆಚ್ ಹಾಕಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಪತ್ನಿ ಸೋನಮ್ ಆತನನ್ನು ಕಂದಕಕ್ಕೆ ತಳ್ಳಿ ಕಿಡ್ನಾಪ್ ನಾಟಕವಾಡಿದ್ದಳು. ಇದರಿಂದ ಪ್ರೇರೇಪಿತರಾಗಿದ್ದ ಸಿಯಾ ಹಾಗೂ ಕೇತನ್ ಅದೇ ರೀತಿಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಸೋನಮ್ ಮಾಡಿದ್ದ ಕೆಲ ತಪ್ಪನ್ನು ಗುರುತಿಸದ್ದ ಅವರು ಆ ತಪ್ಪುಗಳನ್ನು ತಪ್ಪಿಸಲು, ಸುಮಾರು ಒಂದು ತಿಂಗಳಿನ ಸಂಚು ರೂಪಿಸಿದ್ದರು ಎನ್ನಲಾಗಿದೆ. ಪೊಲೀಸರು ಸಿಯಾ ಗೋಯಲ್ ಫೋನ್ ವಶಪಡಿಸಿಕೊಂಡು ಅದರ ಬ್ರೌಸಿಂಗ್ ಹಿಸ್ಟರಿ ಪರಿಶೀಲಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಸಿಯಾ, ರಾಜಾ ರಘುವಂಶಿ ಕೊಲೆ ಪ್ರಕರಣದ ಪ್ರತಿಯೊಂದು ಸುದ್ದಿ ವರದಿಗಳನ್ನು ಓದಿದ್ದಳು. ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯರನ್ನು ಥಳಿಸಲಾಗುತ್ತದೆಯೇ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದ್ದಳು. ಮಹಿಳಾ ಕೈದಿಗಳ ಕಾನೂನು ಹಕ್ಕುಗಳ ಕುರಿತು ಜಾಲಾಡಿದ್ದಳು. ಪ್ರಿಯಕರ ಚೇತನ್ ಚೌಧರಿ ಜೊತೆಗೂಡಿ ಲೋಹಗಡ್ ಕೋಟೆಗೆ ಚಾರಣದ ನೆಪದಲ್ಲಿ ಕೇತನ್ನನ್ನು ಕರೆದೊಯ್ದಿದ್ದಳು. ಸಿಯಾ ಒಬ್ಬಳೇ ತಳ್ಳಿದರೆ ಕೇತನ್ ಬಂಡೆಯಿಂದ ಕೆಳಗೆ ಬೀಳದೆ ಬದುಕಿ ಉಳಿಯಬಹುದು ಎಂಬ ಭಯದಿಂದ, ಸಿಯಾ ಮತ್ತು ಪ್ರಿಯಕರ ಚೇತನ್ ಇಬ್ಬರೂ ಸೇರಿ ಒಟ್ಟಿಗೆ ಕೇತನ್ನನ್ನು ಪ್ರಪಾತಕ್ಕೆ ತಳ್ಳಿದ್ದರು.
ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಇಬ್ಬರೂ ಯತ್ನಿಸಿದ್ದರು. ಆದರೆ, ಕೇತನ್ ಬಿದ್ದ ಲೋಹಗಡ್ ಕೋಟೆಯ ಆ ನಿರ್ದಿಷ್ಟ ಜಾಗವು ಅಷ್ಟೇನೂ ಅಪಾಯಕಾರಿಯಾಗಿರಲಿಲ್ಲ. ಆದರೂ ಕೇತನ್ ಅಲ್ಲಿಂದ ಬಿದ್ದಿದ್ದು ಹೇಗೆ ಎಂಬ ತನಿಖೆಯಿಂದ ತಿಳಿದು ಬಂದಿದೆ.