ನವದೆಹಲಿ: ಭಗವದ್ಗೀತೆ(Bhagavad Gita) ಮತ್ತು ಭರತ ಮುನಿಯವರ ನಾಟ್ಯಶಾಸ್ತ್ರದ(Natyashashtra) ಹಸ್ತಪ್ರತಿಗಳನ್ನು ಯುನೆಸ್ಕೋದ ವಿಶ್ವ ಸ್ಮರಣೆ(UNESCO)ನೋಂದಣಿಗೆ ಸೇರ್ಪಡೆ ಮಾಡಲಾಗಿದೆ. ಇದು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ದೊರೆತಿರುವ ಜಾಗತಿಕ ಮನ್ನಣೆಯನ್ನು ಸೂಚಿಸುತ್ತದೆ. ಈ ಹೆಮ್ಮೆಯ ಕ್ಷಣವನ್ನು ಹಂಚಿಕೊಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಯುನೆಸ್ಕೋದ ವಿಶ್ವ ಸ್ಮರಣೆ ನೋಂದಣಿಯಲ್ಲಿ ಗೀತೆ ಮತ್ತು ನಾಟ್ಯಶಾಸ್ತ್ರವನ್ನು ಸೇರಿಸುವುದು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ಅವರು, ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ! ಯುನೆಸ್ಕೋದ ವಿಶ್ವ ಸ್ಮರಣೆ ನೋಂದಣಿಯಲ್ಲಿ ಗೀತೆ ಮತ್ತು ನಾಟ್ಯಶಾಸ್ತ್ರ ಸೇರ್ಪಡೆಗೊಂಡಿರುವುದು ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆಯನ್ನು ಪೋಷಿಸಿವೆ. ಅವರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದಿದ್ದಾರೆ.
ಭರತ ಮುನಿ ಭಾರತದ ಖ್ಯಾತ ನಾಟ್ಯಶಾಸ್ತ್ರಜ್ಞ. ಇವರನ್ನು ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು. ಇವರು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ, ಇಡೀ ನಾಟಕ ಕಲೆಯ ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶವಾಗಿದೆ. ಇಂತಹ ಮಹತ್ವದ ಗ್ರಂಥವನ್ನು ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ʼನಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದು ಅತ್ಯುತ್ತಮ ಮೌಲ್ಯದ ಸಾಕ್ಷ್ಯಚಿತ್ರ ಪರಂಪರೆಯನ್ನು ಸಂರಕ್ಷಿಸುವ ಜಾಗತಿಕ ಉಪ್ರಕಮವೂ ಇದಾಗಿದೆ.
ಈ ಸುದ್ದಿಯನ್ನೂ ಓದಿ:Modi Thailand Visit : ಬ್ಯಾಂಕಾಕ್ ನೆಲದಲ್ಲಿ ಥಾಯ್ ವರ್ಶನ್ ರಾಮಾಯಣ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ಇನ್ನು ಈ ಬಗ್ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಇದು ಭಾರತದ ವಿಶ್ವದೃಷ್ಟಿಕೋನ, ನಾವು ಯೋಚಿಸುವ, ಅನುಭವಿಸುವ, ಬದುಕುವ ತಾತ್ವಿಕ ಮತ್ತು ಸೌಂದರ್ಯಕ್ಕೆ ಅಡಿಪಾಯಗಳಾಗಿವೆ. ನಾವೀಗ ಅಂತಾರಾಷ್ಟ್ರೀಯ ನೋಂದಣಿಯಲ್ಲಿ ನಮ್ಮ ದೇಶದಿಂದ 14 ಶಾಸನಗಳನ್ನು ಹೊಂದಿದ್ದೇವೆ ಎಂದು ಮಾಹಿತಿಯನ್ನೂ ನೀಡಿದ್ದಾರೆ.