Raichur News: ಫೋಟೋ ತೆಗೆಯುವ ನೆವದಲ್ಲಿ ಪತಿಯನ್ನು ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ?
Raichur News: ದಂಪತಿ ರಾಯಚೂರಿನ ಶಕ್ತಿನಗರ ಮೂಲದ ಯುವಕ ತಾತಪ್ಪ ಹಾಗೂ ಯಾದಗಿರಿಯ ವಡಗೆರಾ ತಾಲೂಕಿನ ಗದ್ದೆಮ್ಮ ನಡುವೆ ಗಲಾಟೆ ಎನ್ನಲಾಗಿದೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೂಲಕ ಬೈಕ್ ಮೇಲೆ ಹೊರಟಿದ್ದ ದಂಪತಿ, ಬ್ಯಾರೇಜ್ ಬಳಿ ನದಿಯಲ್ಲಿ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆದುಕೊಳ್ಳುವಾಗ ಘಟನೆ ನಡೆದಿದೆ.


ರಾಯಚೂರು: ಫೋಟೋ (Photo) ತೆಗೆಯುವ ನೆಪದಲ್ಲಿ ಪತ್ನಿಯೊಬ್ಬಳು (wife) ಪತಿಯನ್ನೇ (Husband) ನದಿಗೆ ತಳ್ಳಿದಳೆಂದು ಹೇಳಲಾದ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಬದುಕಿ ಬಂದಿರುವ ಪತಿ, ಪತ್ನಿಯೇ ತನ್ನನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾಳೆ (murder attempt) ಎಂದು ಆಪಾದಿಸಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಯಾವುದೇ ದೂರು ದಾಖಲಾಗಿಲ್ಲ. ಪತಿಯನ್ನು ನದಿಯಿಂದ ರಕ್ಷಿಸಿದವರು ಇಡೀ ಘಟನೆಯನ್ನು ವಿಡಿಯೋ ಮಾಡಿಕೊಂಡು, ವೈರಲ್ ಮಾಡಿದ್ದಾರೆ.
ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಘಟನೆ ನಡೆದಿದೆ. ದಂಪತಿ ರಾಯಚೂರಿನ ಶಕ್ತಿನಗರ ಮೂಲದ ಯುವಕ ತಾತಪ್ಪ ಹಾಗೂ ಯಾದಗಿರಿಯ ವಡಗೆರಾ ತಾಲೂಕಿನ ಗದ್ದೆಮ್ಮ ನಡುವೆ ಗಲಾಟೆ ಎನ್ನಲಾಗಿದೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೂಲಕ ಬೈಕ್ ಮೇಲೆ ಹೊರಟಿದ್ದ ದಂಪತಿ, ಬ್ಯಾರೇಜ್ ಬಳಿ ನದಿಯಲ್ಲಿ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆದುಕೊಳ್ಳುವಾಗ ಘಟನೆ ನಡೆದಿದೆ.
ಪತಿ ಸೇತುವೆಯ ಆಚೆಗೆ ನಿಂತು ಪತ್ನಿಯ ಬಳಿ ಫೋಟೋ ತೆಗೆಯಲು ಹೇಳಿದ್ದು, ಈ ಸಂದರ್ಭದಲ್ಲಿ ಆಕೆ ನನ್ನನ್ನು ಕೆಳಗೆ ತಳ್ಳಿದ್ದಾಳೆ ಎಂದು ಪತಿ ಆಪಾದಿಸಿದ್ದಾನೆ. ಯುವಕನಿಗೆ ಈಜು ಬರುತ್ತಿದ್ದುದರಿಂದ ನದಿಯಲ್ಲಿ ಈಜಿಕೊಂಡು ಹೋಗಿ ನದಿಯ ನಡುವೆ ಇದ್ದ ಕಲ್ಲುಬಂಡೆಯನ್ನು ಹತ್ತಿ ಕುಳಿತಿದ್ದ. ಜೊತೆಗೆ ʼಕಾಪಾಡಿ ಬ್ರೋ, ಅವಳನ್ನ ಹಿಡಿರಿ ಬ್ರೋ, ಯಾರಿಗಾದ್ರೂ ಫೋನ್ ಮಾಡಿ ಬ್ರೋʼ ಎಂದು ಕಲ್ಲು ಬಂಡೆಯ ಮೇಲೆ ನಿಂತು ಕೂಗಾಡಿದ್ದ.
ಸೇತುವೆ ಮೇಲೆ ಹೋಗುತ್ತಿದ್ದ ಕೆಲವು ವಾಹನ ಸವಾರರು ಇದನ್ನು ಗಮನಿಸಿ ವಾಹನ ನಿಲ್ಲಿಸಿ ಸಹಾಯಕ್ಕೆ ಬಂದಿದ್ದಾರೆ. ಬುಲೆರೋ ವಾಹನ ಸವಾರರು ಹಾಗೂ ಕೆಬಿಜೆಎನ್ಎಲ್ ಸಿಬ್ಬಂದಿ ಸೇತುವೆಗೆ ಹಗ್ಗ ಕಟ್ಟಿ ಅದನ್ನು ಯುವಕನತ್ತ ಎಸೆದು ಆತನನ್ನು ಕಾಪಾಡಿದ್ದಾರೆ. ಘಟನೆಯ ಬಳಿಕ ಪತ್ನಿ ತನ್ನನ್ನು ತಳ್ಳಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ಪತಿ ಕಾಲು ಜಾರಿ ಬಿದ್ದಿದ್ದಾನೆ, ನಾನು ತಳ್ಳಿಲ್ಲ ಎಂದು ಪತ್ನಿ ವಾದಿಸಿದ್ದಾಳೆ. ನಂತರ ಇಬ್ಬರೂ ಒಟ್ಟಾಗಿಯೇ ಬೈಕ್ನಲ್ಲಿ ಸ್ಥಳದಿಂದ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: Actress Manjula: ಕಿರುತೆರೆ ನಟಿ ಮಂಜುಳಾಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಗಂಡ