ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆ ಕಾಟ; ʻಏನಾದ್ರೂ ಪರಿಹಾರ ಮಾಡಿʼ ಎಂಬ ಮನವಿಗೆ ಅಲೋಕ್​ಕುಮಾರ್ ಏನಂದ್ರು?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಸೊಳ್ಳೆ ಸಮಸ್ಯೆಗೆ ಪರಿಹಾರ ನೀಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಮ್ಯಾನ್ಯುಯಲ್ ನಿಯಮದಲ್ಲಿರುವುದಷ್ಟೇ ಒದಗಿಸಲು ಸಾಧ್ಯ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ತೂಗುದೀಪ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೊಳ್ಳೆ ಕಾಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಸ್ವಾರಸ್ಯಕರ ಪ್ರಸಂಗ ನಡೆದಿದೆ.

ಮ್ಯಾನ್ಯುಯಲ್‌ನಲ್ಲಿ ಇರುವುದಷ್ಟೇ ಸಾಧ್ಯ!

ಅಧಿಕಾರಿಗಳ ಭೇಟಿಯ ವೇಳೆ ನಟ ದರ್ಶನ್, "ಜೈಲಿನಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ, ದಯವಿಟ್ಟು ಇದಕ್ಕೆ ಏನಾದರೂ ಪರಿಹಾರ ಕಲ್ಪಿಸಿಕೊಡಿ ಸರ್..." ಎಂದು ಮನವಿ ಮಾಡಿಕೊಂಡರು. ಇದಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, "ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ. ಜೈಲಿನ ಮ್ಯಾನ್ಯುಯಲ್‌ನಲ್ಲಿ ನಿಯಮಾನುಸಾರ ಏನಿರುತ್ತದೆಯೋ ಅಷ್ಟನ್ನೇ ಒದಗಿಸಲು ಸಾಧ್ಯ. ಮ್ಯಾನ್ಯುಯಲ್ ಪ್ರಕಾರ ಏನಾದರೂ ಅಗತ್ಯವಿದ್ದರೆ ಕೇಳಿ, ಸೊಳ್ಳೆ ವಿಚಾರದಲ್ಲಿ ನಾವೇನೂ ಮಾಡಲು ಆಗುವುದಿಲ್ಲ" ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

Vijayalakshmi Darshan: ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಪ್ರಕರಣ; 4ನೇ ಆರೋಪಿಗೆ ಜಾಮೀನು ಮಂಜೂರು

ಮದುವೆ ಮನೆಯಲ್ಲಿ ಜೈಕಾರ; ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಕಿವಿಮಾತು

ಇನ್ನೊಂದೆಡೆ, ನಟ ದರ್ಶನ್ ಕುಟುಂಬಕ್ಕೆ ಆಪ್ತರಾದ ಜೈಕಂಠ ಶೇಖರ್ ಎಂಬ ಅಭಿಮಾನಿಯ ವಿವಾಹ ಸಮಾರಂಭಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಹಾಜರಾಗಿದ್ದರು. ನವಜೋಡಿಗೆ ಆಶೀರ್ವದಿಸಿ ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ಅಭಿಮಾನಿಗಳು ಒಟ್ಟಾಗಿ "ಡಿ ಬಾಸ್‌ಗೆ ಜೈ" ಎಂದು ಜೋರಾಗಿ ಕೂಗಲಾರಂಭಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಪರಿಸ್ಥಿತಿಯ ಗಂಭೀರತೆ ಅರಿತ ವಿಜಯಲಕ್ಷ್ಮಿ ಅವರು ತಕ್ಷಣವೇ ಪ್ರತಿಕ್ರಿಯಿಸಿ, "ಇದು ಮದುವೆ ಮನೆ, ಇಲ್ಲಿಯೂ ಇದು ಬೇಕಾ? ಎಲ್ಲಾ ಕಡೆಯೂ ಇದೇ ತೊಂದರೆ ಆಗ್ತಿರೋದು, ದಯವಿಟ್ಟು ಇದನ್ನು ನಿಲ್ಲಿಸಿ" ಎಂದು ಪ್ರೀತಿಯಿಂದಲೇ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಅತ್ತಿಗೆ ಹೇಳಿದ್ದು ಸರಿಯಾಗಿದೆ, ಬಾಸ್ ಹೊರಬರುವವರೆಗೂ ನಾವೆಲ್ಲರೂ ಶಾಂತರಾಗಿರಬೇಕು" ಎಂದು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಒಪ್ಪಿಕೊಂಡಿದ್ದಾರೆ.