ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಡೆತಡೆಗಳನ್ನು ದಾಟಿ ಥಿಯೇಟರ್‌ಗೆ ಬಂದ ʻಕರುಪ್ಪುʼ ಸಿನಿಮಾ; ನಿರ್ಮಾಪಕರ ಪಾಲಿಗೆ ಕರ್ಣನಾದ ನಟ ಸೂರ್ಯ!

ತಮಿಳು ನಟ ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಒಂದು ದಿನ ವಿಳಂಬವಾಗಿ ಮೇ 15ರಂದು ಬಿಡುಗಡೆಯಾಗಿದೆ. ನಿರ್ಮಾಪಕರು ಹೊಂದಿದ್ದ‌ ಆರ್ಥಿಕ ಸಂಕಷ್ಟವನ್ನು ಸ್ವತಃ ನಟ ಸೂರ್ಯ ಅವರೇ ಮುಂದೆ ನಿಂತು ನಿವಾರಿಸಿದ್ದಾರೆ.

ತಮಿಳು ನಟ ಸೂರ್ಯ ಅಭಿನಯದ 'ಕರುಪ್ಪು' ಚಿತ್ರವು ಸಿನಿಮಾ ಮೇ 14ರಂದು ಬಿಡುಗಡೆ ಆಗಬೇಕಿತ್ತು. ಅದಕ್ಕೆ ತಕ್ಕಂತೆ ಬುಕಿಂಗ್‌ ಕೂಡ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಹಣಕಾಸಿನ ಬಿಕ್ಕಟ್ಟಿನಿಂದಾಗಿ ʻಕರುಪ್ಪುʼ ಸಿನಿಮಾ ರಿಲೀಸ್‌ ಆಗಲಿಲ್ಲ. ಕರುಪ್ಪು ನಿರ್ಮಾಪಕರು ಸುಮಾರು 50 ಕೋಟಿ ರೂ. ಹಣವನ್ನು ಬಾಕಿ ಉಳಿಸಿಕೊಂಡಿದ್ದರಿಂದ ಈ ಅಡಚಣೆ ಉಂಟಾಗಿತ್ತು. ಸದ್ಯ ನಟ ಸೂರ್ಯ ಅವರು ಮುಂದೆ ನಿಂತು ಎಲ್ಲವನ್ನು ಬಗೆಹರಿಸಿದ್ದಾರೆ. ಮೇ 15ರಂದು ಈ ಚಿತ್ರವು ವಿಶ್ವಾದ್ಯಂತ ರಿಲೀಸ್‌ ಆಗಿದೆ.

ಅದಕ್ಕೂ ಮುನ್ನ ಸ್ವತಃ ಸೂರ್ಯ ಅವರೇ, "ಮೇ 15 ರಂದು ನಮ್ಮ ಸಿನಿಮಾ ಬಿಡುಗಡೆಯಾಗಲಿದೆ. ನಮ್ಮೊಂದಿಗೆ ಇದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು! ಇಂದಿನಿಂದ ಕರುಪ್ಪು ಸಿನಿಮಾ ನಿಮ್ಮ ಮುಂದೆ.." ಎಂದು ಬರೆದುಕೊಂಡಿದ್ದರು.

Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌!

ಕ್ಷಮೆ ಕೇಳಿದ್ದ ಚಿತ್ರತಂಡ

ಅಂದುಕೊಂಡ ಸಮಯಕ್ಕೆ ಸಿನಿಮಾವನ್ನು ಬಿಡುಗಡೆ ಮಾಡದೇ ಇರುವುದಕ್ಕೆ ಕ್ಷಮೆಯಾಚಿಸಿದ್ದ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ, "ಕೆಲವು ಪ್ರಯಾಣಗಳು ಕೇವಲ ಸಮಯವನ್ನು ಮಾತ್ರವಲ್ಲದೆ ಹೃದಯವನ್ನೂ ಪರೀಕ್ಷಿಸುತ್ತವೆ. ಕರುಪ್ಪು ಚಿತ್ರಕ್ಕಾಗಿ ಕಾಯುತ್ತಿದ್ದ, ಚಿತ್ರದ ಬಗ್ಗೆ ವಿಚಾರಿಸುತ್ತಿದ್ದ ಮತ್ತು ವಿಳಂಬದ ನಡುವೆಯೂ ನಮ್ಮನ್ನು ನಂಬಿದ ಪ್ರತಿಯೊಬ್ಬರಿಗೂ ನಾವು ಕ್ಷಮೆಯಾಚಿಸುತ್ತೇವೆ. ಅಷ್ಟೇ ಅಲ್ಲದೆ, ನಮ್ಮ ಆಳವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಕಾಯುವಿಕೆಯು ನಿಮಗೆ ನೋವುಂಟು ಮಾಡಿದೆ ಎಂದು ನಮಗೆ ತಿಳಿದಿದೆ. ಈ ಚಿತ್ರವು ನಮ್ಮ ರಕ್ತ, ಬೆವರು, ನಿದ್ದೆಯಿಲ್ಲದ ರಾತ್ರಿಗಳು ಮತ್ತು ಹೋರಾಟಗಳನ್ನು ಒಳಗೊಂಡಿದೆ. ಇದು ಇನ್ನು ಕೇವಲ ನಮ್ಮ ಕಥೆಯಲ್ಲ, ಇದು ನಿಮ್ಮೆಲ್ಲರದು" ಎಂದು ಹೇಳಿತ್ತು.

ಚಿತ್ರತಂಡದ ಪಾಲಿಗೆ ಕರ್ಣನಂತಾದ ಸೂರ್ಯ

ನಿರ್ಮಾಪರು ಅಷ್ಟೊಂದು ದೊಡ್ಡಮೊತ್ತದ ಸಾಲದ ಸುಳಿಗೆ ಸಿಲುಕಿರುವಾಗ ನಟ ಸೂರ್ಯ ಅವರು ಮುಂದೆಬಂದು ಎಲ್ಲವನ್ನು ನಿವಾರಿಸಿದ್ದಾರೆ. 'ಕರುಪ್ಪು' ಚಿತ್ರದ ನಿರ್ಮಾಪಕರಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಂತಿಮವಾಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂರ್ಯ ಅವರ ಮೇಲೆಯೇ ಅವಲಂಬಿತರಾಗಬೇಕಾಯಿತು. ಸೂರ್ಯ ಅವರ ಮಾರುಕಟ್ಟೆ ಮೌಲ್ಯ ಏನೇ ಇರಲಿ, ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಅವರು ಸ್ವತಃ ತಮ್ಮ ಜೇಬಿನಿಂದ ಹಣ ವ್ಯಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ, 'ಕಂಗುವ' ಮತ್ತು 'ಕರುಪ್ಪು' ಚಿತ್ರಗಳನ್ನು ಚಿತ್ರಮಂದಿರಕ್ಕೆ ತರಲು ಸೂರ್ಯ ಭಾರಿ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಚಿತ್ರಗಳಿಗಾಗಿ ತಮಗೆ ಬರಬೇಕಿದ್ದ ಸಂಭಾವನೆಯ ಬಹುಭಾಗವನ್ನು ಅವರು ಮರಳಿ ನೀಡಿದ್ದು, ನಿರ್ಮಾಪಕರನ್ನು ಬೆಂಬಲಿಸುವ ಸೂರ್ಯ ಅವರ ಈ ನಿರ್ಧಾರ ಶ್ಲಾಘನೀಯವಾದರೂ, ಇದರಿಂದ ಅವರಿಗೆ ವೈಯಕ್ತಿಕವಾಗಿ ಭಾರಿ ಆರ್ಥಿಕ ನಷ್ಟವಾಗುತ್ತಿದೆ ಎಂಬುದು ಚಿತ್ರರಂಗದ ಮಾತು.

ಸದ್ಯ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡಿರುವ 'ಕರುಪ್ಪು' ಚಿತ್ರವು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ. ಕರುಪ್ಪು ಚಿತ್ರವನ್ನು ಆರ್‌ಜೆ ಬಾಲಾಜಿ ನಿರ್ದೇಶಿಸಿದ್ದು, ತ್ರಿಶಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.