ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinay Rajkumar: ಎಲ್ಲರ ಗಮನಸೆಳೆದ ʻಗ್ರಾಮಾಯಣʼ ಟ್ರೇಲರ್;‌ ಇದು ಅಗಲಿದ ನಿರೂಪಕಿ ಅಪರ್ಣಾ ನಟನೆಯ ಕೊನೇ ಸಿನಿಮಾ!

ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ಅದ್ದೂರಿ ಟ್ರೇಲರ್ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಎರಡು ವರ್ಷ ಅಗಲಿದ ನಿರೂಪಕಿ ಅಪರ್ಣಾ ಅವರ ಕೊನೆಯ ಚಿತ್ರ ಇದಾಗಿದ್ದು, ಅವರ ಪತಿ ನಾಗರಾಜ್ ವಸ್ತಾರೆ ಟ್ರೇಲರ್ ಅನಾವರಣಗೊಳಿಸಿದರು. ಈ ಸಿನಿಮಾ ಜುಲೈ 3 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ನಟ ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಜೋಡಿಯಾಗಿ ನಟಿಸಿರುವ, ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಗ್ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಪ್ರೀ-ರಿಲೀಸ್ ಹಾಗೂ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ಗಣ್ಯರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ದುನಿಯಾ ವಿಜಯ್ ಹಾಗೂ ಖ್ಯಾತ ನಟಿ, ನಿರೂಪಕಿ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು ಜಂಟಿಯಾಗಿ ಚಿತ್ರದ ಅಧಿಕೃತ ಟ್ರೇಲರ್ ಅನ್ನು ಅನಾವರಣಗೊಳಿಸಿದರು. ಸದ್ಯ ರಿಲೀಸ್‌ ಆಗಿರುವ ಟ್ರೇಲರ್‌ ಸಖತ್‌ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.

ಭಾವುಕರಾದ ನಾಗರಾಜ್ ವಸ್ತಾರೆ

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಾಗರಾಜ್ ವಸ್ತಾರೆ, "ಗ್ರಾಮಾಯಣ ಚಿತ್ರದ ಶೂಟಿಂಗ್ ಮುಗಿಸಿ ಬಂದಾಗ ಅಪರ್ಣಾ ಅಲ್ಲಿನ ಹಳ್ಳಿ ವಾತಾವರಣ ಮತ್ತು ಶೂಟಿಂಗ್ ಅನುಭವಗಳನ್ನು ನನ್ನೊಂದಿಗೆ ಖುಷಿಯಿಂದ ಹಂಚಿಕೊಳ್ಳುತ್ತಿದ್ದರು. ಇಂದು ಅವರಿಲ್ಲದೆ ಅವರ ನಟನೆಯ ಕೊನೆಯ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಸಿನಿಮಾ ದೊಡ್ಡ ಯಶಸ್ಸು ಕಾಣಲಿ" ಎಂದು ಭಾವುಕರಾದರು.

Gramayana Movie: ವಿನಯ್​, ಮೇಘಾ ಶೆಟ್ಟಿ ʻಗ್ರಾಮಾಯಣʼಮೂವಿ ಸಾಂಗ್‌ ಔಟ್‌: ಶಿವರಾಜ್‌ಕುಮಾರ್‌ ಸಾಥ್‌

ನಟ ದುನಿಯಾ ವಿಜಯ್ ಮಾತನಾಡಿ, "ನನಗೆ ವಿನಯ್ ರಾಜ್‌ಕುಮಾರ್ ಅಂದರೆ ತುಂಬಾ ಇಷ್ಟ. ಟ್ರೇಲರ್ ಅದ್ಭುತವಾಗಿ ಮೂಡಿಬಂದಿದೆ. ನಿರ್ದೇಶಕ ದೇವನೂರು ಚಂದ್ರು ಅವರನ್ನು ನಾನು ‘ಎರಡನೇ ಸೂರಿ’ ಅಂತಲೇ ಕರೆಯುತ್ತೇನೆ. ಲಹರಿ ಸಂಸ್ಥೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ಹಾರೈಸಿದರು.

ಲಹರಿ ಸಂಸ್ಥೆಗೆ 9 ಲಕ್ಕಿ ನಂಬರ್‌

'ಗ್ರಾಮಾಯಣ' ಚಿತ್ರವನ್ನು ಪ್ರತಿಷ್ಠಿತ ಲಹರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ನವೀನ್ ಮನೋಹರ್, "ಇದು ನಮ್ಮ ಲಹರಿ ಸಂಸ್ಥೆಯ 9ನೇ ಚಿತ್ರ ಹಾಗೂ ನಾಯಕ ವಿನಯ್ ರಾಜ್‌ಕುಮಾರ್ ಅವರ ಕೆರಿಯರ್‌ನ 9ನೇ ಸಿನಿಮಾ. ಹೀಗಾಗಿ ‘9’ ನಮ್ಮ ಪಾಲಿಗೆ ಅತ್ಯಂತ ಅದೃಷ್ಟದ ಸಂಖ್ಯೆಯಾಗಿದೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

OLC Movie: 'ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ಬಜಾರಿ ಹುಡುಗಿಯಾದ ʻಜೊತೆ ಜೊತೆಯಲಿʼ ಖ್ಯಾತಿಯ ಮೇಘಾ ಶೆಟ್ಟಿ; ರಿಲೀಸ್‌ ಅಪ್‌ಡೇಟ್‌ ಇಲ್ಲಿದೆ

ನಾಯಕ ವಿನಯ್ ರಾಜ್‌ಕುಮಾರ್ ಮಾತನಾಡಿ, "ಈ ಸಿನಿಮಾ ಆರಂಭವಾಗಿ ಹಲವು ವರ್ಷಗಳೇ ಸಂದವು. ಆದರೆ ಎಲ್ಲದಕ್ಕೂ ಒಂದು ಸಮಯ ಕೂಡಿಬರಬೇಕು. ಈ ಚಿತ್ರದಲ್ಲಿ ನಾನು ಇದುವರೆಗೆ ಮಾಡಿರದ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ" ಎಂದರು. ಭಾವುಕರಾಗಿ ಮಾತನಾಡಿದ ನಿರ್ದೇಶಕ ದೇವನೂರು ಚಂದ್ರು, "ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಖಂಡಿತಾ ಮೋಸವಾಗದ ಸಿನಿಮಾ ಇದಾಗಿದೆ" ಎಂದು ಭರವಸೆ ನೀಡಿದರು.

ಜುಲೈ 3ಕ್ಕೆ ತೆರೆಗೆ ಬರಲಿದೆ ಈ ಸಿನಿಮಾ

ಸಮಾರಂಭದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಮಂಗಳಾ ರಾಘವೇಂದ್ರ, ಯುವ ರಾಜ್‌ಕುಮಾರ್, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಟ ನವೀನ್ ಶಂಕರ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿರ್ದೇಶಕ ಸುನಿ ಸಿನಿಮಾದ ಮೊದಲ ಶೋಗೆ ತಾವೇ ಒಂದು ಇಡೀ ಥಿಯೇಟರ್ ಬುಕ್ ಮಾಡುವುದಾಗಿ ಘೋಷಿಸಿದರು.

ವಿನಯ್ ರಾಜ್‌ಕುಮಾರ್, ಮೇಘಾ ಶೆಟ್ಟಿ ಜೊತೆಗೆ ಲೂಸ್ ಮಾದ ಯೋಗೀಶ್, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣಾ ವಸ್ತಾರೆ, ಸೀತಾ ಕೋಟೆ, ಬಲ ರಾಜವಾಡಿ ಮುಂತಾದವರಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ‘ಗ್ರಾಮಾಯಣ’ ಸಿನಿಮಾ ಜುಲೈ 3ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.