ಪ್ರಸಿದ್ಧ ರಿಯಾಲಿಟಿ ಶೋ 'ಲಾಕ್ ಅಪ್: ಸಚ್ ಯಾ ಸಜಾ' ಸೀಸನ್ 2ರಲ್ಲಿ ವಿವಾದಗಳ ಸರಣಿ ಮುಂದುವರಿದಿದೆ. ಹಿರಿಯ ನಟ ರಾಮ್ ಕಪೂರ್ ಅವರು ಅನುಮತಿಯಿಲ್ಲದೆ ತಮಗೆ ಮುತ್ತು ನೀಡಿದ್ದಾರೆ ಹಾಗೂ ಅನಗತ್ಯವಾಗಿ ಹತ್ತಿರ ಬಂದು ವರ್ತಿಸಿದ್ದಾರೆ ಎಂದು ಸಹ-ಸ್ಪರ್ಧಿ ಶ್ರೇಯಾ ಕಾಲ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ರಾಮ್ ಕಪೂರ್ ಪತ್ನಿ ಗೌತಮಿ ಕಪೂರ್ ತಮ್ಮ ಪತಿಯ ಬೆಂಬಲಕ್ಕೆ ನಿಂತಿದ್ದಾರೆ.
ಶ್ರೇಯಾ ಕಾಲ್ರಾ ಮಾಡಿದ ಆರೋಪಗಳೇನು?
ಇತ್ತೀಚಿನ ಟಾಸ್ಕ್ ಒಂದರ ವೇಳೆ ರಾಮ್ ಕಪೂರ್ ನಡೆದುಕೊಂಡ ರೀತಿಯ ಬಗ್ಗೆ ಸ್ಪರ್ಧಿ ಶಿಲ್ಪಾ ಶಿಂದೆ ಅವರೊಂದಿಗೆ ಶ್ರೇಯಾ ಕಾಲ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಾಸ್ಕ್ ಸಮಯದಲ್ಲಿ ರಾಮ್ ಕಪೂರ್ ಅವರು ಸ್ಪರ್ಧಿ ಶಿವಾಂಗಿ ಜೋಶಿ ಅವರ ಮುಖದ ತೀರಾ ಹತ್ತಿರ ಬಂದಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಹರ್ಷದ್ ಚೋಪ್ರಾ 'ಸ್ವಲ್ಪ ಜಾಗ ಬಿಟ್ಟು ನಿಲ್ಲುವಂತೆ' ಕೇಳಿಕೊಂಡರೂ, ತಕ್ಷಣವೇ ರಾಮ್ ಅವರಲ್ಲಿ ಕ್ಷಮೆ ಯಾಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೇಯಾ, "ಮಾತನಾಡುವಾಗ ಉಗುಳು ಚಿಮ್ಮುವ ವ್ಯಕ್ತಿಗೆ ಕ್ಷಮೆ ಕೇಳುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸಿದ್ದಾರೆ.
ರಾಮ್ ಕಪೂರ್ ಅವರು ತಮಗೆ ನೀಡಿದ ಅನಗತ್ಯ ಮುತ್ತನ್ನು ನೆನಪಿಸಿಕೊಂಡ ಶ್ರೇಯಾ, "ಇನ್ನೊಮ್ಮೆ ಅವರು ನನಗೆ ಮುತ್ತು ಕೊಡಲು ಯತ್ನಿಸಿದರೆ, 'ನನ್ನ ತಂದೆಯೇ ನನಗೆ ಇಷ್ಟೊಂದು ಮುತ್ತು ಕೊಡುವುದಿಲ್ಲ' ಎಂದು ಅವರ ಬಾಯಿಯನ್ನು ಹಿಡಿದು ತಡೆಯುತ್ತೇನೆ. ಚಿತ್ರರಂಗದಲ್ಲಿ ಹಿರಿತನವಿರುವ ಅವರು ತಮ್ಮ ಮಿತಿಗಳನ್ನು ಕಾಯ್ದುಕೊಳ್ಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಶ್ರೇಯಾ.
ಪತಿ ರಾಮ್ ಕಪೂರ್ ಪರ ನಿಂತ ಪತ್ನಿ ಗೌತಮಿ
ಈ ವಿವಾದ ಭುಗಿಲೆದ್ದ ಬೆನ್ನಲ್ಲೇ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಮ್ ಕಪೂರ್ ಪತ್ನಿ ಹಾಗೂ ನಟಿ ಗೌತಮಿ ಕಪೂರ್, ತಮ್ಮ ಪತಿಯ ವಿರುದ್ಧ ಕೇಳಿಬರುತ್ತಿರುವ ಕಠಿಣ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. "ಸಾಕಷ್ಟು ಜನರು ಅವರನ್ನು ಕಾಮುಕ ಅಥವಾ ವೃದ್ಧ ಎಂದು ಕರೆಯುತ್ತಿದ್ದಾರೆ. ಆದರೆ ರಾಮ್ ಅಂಥವರಲ್ಲ, ಅವರು ಸಂಪೂರ್ಣವಾಗಿ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ಅವರು ಸ್ವಭಾವತಃ ಪ್ರೀತಿ ತೋರಿಸುವ ಗುಣದವರಷ್ಟೇ. ಅವರ ವರ್ತನೆ ಅಸಭ್ಯವಾಗಿದ್ದರೆ ಮೊದಲ ಕೆಲ ವಾರಗಳಲ್ಲಿ ಯಾರೂ ಏಕೆ ಪ್ರಶ್ನಿಸಲಿಲ್ಲ? ಶ್ರೇಯಾ ಅವರನ್ನು ರಾಮ್ 'ಗ್ಯಾಂಗ್ ಲೀಡರ್' ಆಗಿ ಬೆಂಬಲಿಸದಿದ್ದಕ್ಕೇ ಈ ವಿವಾದ ಶುರುವಾಗಿರುವಂತೆ ತೋರುತ್ತಿದೆ" ಎಂದು ಗೌತಮಿ ಕಪೂರ್ ಹೇಳಿದ್ದಾರೆ.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ರಿಯಾಲಿಟಿ ಶೋಗಳಲ್ಲಿ ಎಡಿಟ್ ಮಾಡಿದ ಭಾಗಗಳನ್ನು ಮಾತ್ರ ತೋರಿಸಲಾಗುತ್ತದೆ. ಹೀಗಾಗಿ ಆನ್ಲೈನ್ನಲ್ಲಿ ಕೆಟ್ಟ ಕಾಮೆಂಟ್ಗಳನ್ನು ಮಾಡುವ ಮುನ್ನ ಕುಟುಂಬದ ಮೇಲಾಗುವ ಪರಿಣಾಮವನ್ನು ಯೋಚಿಸಿ ಸ್ವಲ್ಪ ಸಹಾನುಭೂತಿ ತೋರಿಸಿ ಎಂದು ವೀಕ್ಷಕರಲ್ಲಿ ಗೌತಮಿ ವಿನಂತಿಸಿದ್ದಾರೆ.
ಶೋನಲ್ಲಿ ಮುಂದುವರಿದ ರೋಚಕತೆ
ಫರಾ ಖಾನ್ ಮತ್ತು ರಿತೇಶ್ ದೇಶ್ಮುಖ್ ನಿರೂಪಣೆಯ ಈ ಶೋನಲ್ಲಿ ಸ್ಪರ್ಧಿಗಳು ಜೈಲಿನಂತಹ ವಾತಾವರಣದಲ್ಲಿದ್ದು, ತಮ್ಮ ಮೂರು ವೈಯಕ್ತಿಕ ರಹಸ್ಯಗಳನ್ನು ಅಡಗಿಸಿಟ್ಟುಕೊಂಡು ಆಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ಯೋಗೇಶ್ ರಾವತ್ ಎಲಿಮಿನೇಟ್ ಆಗಿದ್ದು, 'ದಿ ರೆಬೆಲ್ ಕಿಡ್' ಎಂದೇ ಖ್ಯಾತರಾದ ಅಪೂರ್ವ ಮುಖರ್ಜಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಲಿದ್ದಾರೆ. ಪ್ರಸ್ತುತ ಹರ್ಷದ್ ಚೋಪ್ರಾ, ಧೀರಜ್ ಧೂಪರ್, ಶಿವಾಂಗಿ ಜೋಶಿ, ಶಿಲ್ಪಾ ಶಿಂದೆ ಸೇರಿದಂತೆ ಹಲವು ಸ್ಪರ್ಧಿಗಳ ನಡುವೆ ಆಟ ತೀವ್ರಗೊಂಡಿದೆ.