ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಾಯಿ ಬರೆದ ಕಥೆಗೆ ಮಗನೇ ಹೀರೋ; 'ಪ್ರೇಮಿ'ಗಾಗಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ!

Premi Kannada Movie: ಎಸ್. ಪ್ರದೀಪ್ ವರ್ಮ ನಿರ್ದೇಶನದ 'ಪ್ರೇಮಿ' ಚಿತ್ರದ "ಮನಸ್ಸು ಏನೋ ಕಾಡಿದೆ" ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಅದ್ವಿಕ್ ಈ ಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ನಟಿ ಸಾತ್ವಿಕಾ (ಶ್ರಾವ್ಯಾ ರಾವ್) ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಶ್ರೀ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ ಸಿದ್ದಲಿಂಗಯ್ಯ ಅವರು ನಿರ್ಮಿಸುತ್ತಿರುವ ಹಾಗೂ ಎಸ್ ಪ್ರದೀಪ್ ವರ್ಮ ಅವರು ನಿರ್ದೇಶಿಸುತ್ತಿರುವ 'ಪ್ರೇಮಿ' ಚಿತ್ರದ ಹಾಡೊಂದು ರಿಲೀಸ್‌ ಆಗಿದೆ. ನಿಖಿಲ್‌ ರಾಜ್ ಶೆಟ್ಟಿ ಬರೆದಿರುವ, ಚೇತನ್ ಗಂಧರ್ವ ಹಾಡಿರುವ ಹಾಗೂ ಪ್ರದೀಪ್ ವರ್ಮ ಸಂಗೀತ ನೀಡಿರುವ "ಮನಸ್ಸು ಏನೋ ಕಾಡಿದೆ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸುಮಧುರ ಗೀತೆಗೆ ಮೆಚ್ಚುಗೆ ಹರಿದು ಬರುತ್ತಿದೆ. ಚಿಂತಲಪಲ್ಲಿ ಶ್ರೀನಿವಾಸ ಅವರು ಹಾಡು ಬಿಡುಗಡೆ ಮಾಡಿ, ಚಿತ್ರವು ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

ಈ ಚಿತ್ರದ ಮೂಲಕ ಅದ್ವಿಕ್‌ ಅವರು ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ವಿಶೇಷವೆಂದರೆ, ಅವರಿಗೆ ನಾಯಕಿಯಾಗಿ ಸಾತ್ವಿಕಾ (ಶ್ರಾವ್ಯಾ ರಾವ್)‌ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. "ಈ ಸಿನಿಮಾದಲ್ಲಿ ನನ್ನ ಪಾತ್ರವು ಚೆನ್ನಾಗಿದ್ದು, ಹಳ್ಳಿ ಹುಡುಗಿಯಾಗಿ ನಾನು ನಟಿಸುತ್ತಿದ್ದೇನೆ" ಎನ್ನುತ್ತಾರೆ ಸಾತ್ವಿಕಾ.

Roopa Gururaj Column: ಪ್ರಾಮಾಣಿಕತೆ ಕೊಡುವ ಸಾತ್ವಿಕ ಗತ್ತು

ಮಗನಿಗೆ ಸಾಥ್ ನೀಡಿದ ಪೋಷಕರು

ನಟನೆ ಬಗ್ಗೆ ಆಸಕ್ತಿಯುಳ್ಳ ಅದ್ವಿಕ್‌ಗೆ ಅವರ ಪೋಷಕರೇ ಸಾಥ್‌ ನೀಡಿದ್ದಾರೆ. ಅವರ ತಂದೆ ಹೋಟೆಲ್ ಉದ್ಯಮಿ ಸಿದ್ದಲಿಂಗಯ್ಯ ಅವರು ಚಿತ್ರಕ್ಕೆ ಹಣ ಹಾಕಿದರೆ, ಅವರ ತಾಯಿ ಅಕ್ಕಮಹಾದೇವಿ ಅವರು ʻಪ್ರೇಮಿʼ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಗನ ಕನಸಿಗೆ ಅಪ್ಪ ಮತ್ತು ಅಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಖ್ಯಾತ ಲೇಖಕಿ ಟಿ ಗಿರಿಜಾ ಅವರ ಸಹೋದರಿಯಾಗಿರುವ ಅಕ್ಕಮಹಾದೇವಿ, ಒಂದು ನೈಜ ಕಥೆ ಆಧರಿಸಿ ಈ ಚಿತ್ರವನ್ನು ಮಾಡುತ್ತಿದಾರೆ.

"ನಾನು ಜನಪ್ರಿಯ ಲೇಖಕಿ ಟಿ. ಗಿರಿಜಾ ಅವರ ಸಹೋದರಿ. ವೃತ್ತಿಯಲ್ಲಿ ಶಿಕ್ಷಕಿ. ಹಲವು ಕಥೆಗಳನ್ನು ಬರೆದಿದ್ದೇನೆ. ಪ್ರೇಮಕಥೆಗಳೆ ಹೆಚ್ಚು. ಇದು ನೈಜ ಕಥೆ. ಈ ಕಥೆ ಸಿನಿಮಾ ರೂಪ ಪಡೆದುಕೊಂಡು ನನ್ನ ಮಗನೇ ನಾಯಕನಾಗಿರುವುದು ಖುಷಿಯಾಗಿದೆ" ಎಂದು ಅಕ್ಕಮಹಾದೇವಿ ಹೇಳುತ್ತಾರೆ.‌

ನಿರ್ದೇಶಕರು ಹೇಳಿದ್ದೇನು?

"ಪ್ರೇಮಕಥೆಯೇ ಪ್ರಧಾನವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು "ಪ್ರೇಮಿ" ಚಿತ್ರದಲ್ಲಿವೆ. ಜ್ಯೋತಿಷ್ಯದ ಕುರಿತದ ವಿಷಯವೂ ಇದರಲ್ಲಿದೆ. ಐದು ಹಾಡುಗಳ ಪೈಕಿ ಮೊದಲ ಹಾಡು ಈಗ ಬಿಡುಗಡೆ ಆಗಿದೆ. ನಾನೇ ಸಂಗೀತ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿದ್ದೇನೆ. ಖಳನಾಯಕನಾಗೂ ಅಭಿನಯಿಸಿದ್ದೇನೆ" ಎನ್ನುತ್ತಾರೆ ನಿರ್ದೇಶಕ ಪ್ರದೀಪ್ ವರ್ಮ.

ಹೀರೋ ಅದ್ವಿಕ್‌ ಹೇಳಿದ್ದೇನು?

"ಬಾಲ್ಯದಿಂದಲೂ ನಟನಾಗಬೇಕೆಂಬ ಕನಸು ಇತ್ತು. ಈಗ ಅದು ಈಡೇರಿದೆ. ಅಪ್ಪ & ಅಮ್ಮ ನನ್ನ ಆಸೆಗೆ ಬೆಂಬಲವಾಗಿ ನಿಂತರು. ಪ್ರದೀಪ್ ವರ್ಮ ಅವರು ನನ್ನ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ‌. ಸಂಗೀತ ನಿರ್ದೇಶಕರು ಅವರು ಅಂತ ಮೊದಲ ತಿಳಿದಿತ್ತು. ಪ್ರದೀಪ್ ವರ್ಮ ಅವರ ನಿರ್ದೇಶನದ "ಕುರುಡು ಕಾಂಚಾಣ" ಚಿತ್ರದ ಕಥೆ ಕೇಳಿ ಈ ಚಿತ್ರವನ್ನು ಅವರಿಂದಲೇ ನಿರ್ದೇಶಿಸಬೇಕೆಂದು ತೀರ್ಮಾನ ಮಾಡಲಾಯಿತು. ಚಿತ್ರತಂಡದ ಸಹಕಾರದಿಂದ "ಪ್ರೇಮಿ" ಒಂದೊಳ್ಳೆ ಚಿತ್ರವಾಗಿ ಮೂಡಿಬಂದಿದೆ. ಸದ್ಯದಲ್ಲೇ ಬಾಕಿ ಇರುವ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ರಿಲೀಸ್‌ ಆಗಲಿದೆ" ಎನ್ನುತ್ತಾರೆ ಅದ್ವಿಕ್.

ಈ ಚಿತ್ರಕ್ಕೆ ಸಂಭಾಷಣೆ ವಿಮಲ್ ರಾಜ್ ಬರೆದಿದ್ದು, ಸಂಜೀವ್ ರೆಡ್ಡಿ ಸಂಕಲನ ಮಾಡಿದ್ದಾರೆ. ಗೌತಮ್ ಮಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಎರಡನೇ ನಾಯಕಿಯಾಗಿ ಶೋಭಿತಾ ನಟಿಸಿದ್ದು, ದ್ವಿತ ಕೆ. ಗೌಡ, ʻಪ್ರೇಮ ಲೋಕʼ ಸುರೇಶ್, ರಾಘವೇಂದ್ರ, ಕಿರಣ್ ರಾಜ್, ಹರ್ಷಿತಾ, ಹರೀಶ್ ಉಕ್ಕಡಗಾತ್ರಿ, ವೀರೇಶ್ ಹಿರೇಮಠ್, ಮಾಸ್ಟರ್ ಸಂತೃಪ್ತಿ, ಮಾಸ್ಟರ್ ಹರ್ಷಲ್ ಮುಂತಾದವರು ನಟಿಸಿದ್ದಾರೆ.