ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಧುರಂಧರ್ 2' ನೋಡಿ ಅಲ್ಲು ಅರ್ಜುನ್ ಫಿದಾ: ʻರಣವೀರ್ ಸಿಂಗ್ ನಮ್ಮ ದೇಶದ ಹೆಮ್ಮೆʼ ಎಂದ ಐಕಾನ್ ಸ್ಟಾರ್!

'ಧುರಂಧರ್ 2' ಚಿತ್ರವು ಸಿನಿವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರವನ್ನು ವೀಕ್ಷಿಸಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್, "ಭಾರತೀಯ ಕಥೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸಲಾಗಿದೆ" ಎಂದು ಶ್ಲಾಘಿಸಿದ್ದಾರೆ. ನಟ ವಿಜಯ್ ದೇವರಕೊಂಡ ಕೂಡ ʻರಣವೀರ್ ನಟನೆಯನ್ನು ಸ್ಫೋಟಕʼ ಎಂದು ಬಣ್ಣಿಸಿದ್ದಾರೆ.

ರಣವೀರ್‌ ಸಿಂಗ್‌ ಅಭಿನಯದ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರ ಮುಂದುವರಿಸಿದೆ. ಪೇಯ್ಡ್‌ ಪ್ರೀಮಿಯರ್‌ನಲ್ಲಿ ಭಾರಿ ಪ್ರಮಾಣದ ಹಣವನ್ನು ಬಾಚಿಕೊಂಡಿರುವ ಈ ಸಿನಿಮಾವು ಮೊದಲ ದಿನವು ಅಷ್ಟೇ ಪ್ರಮಾಣದಲ್ಲಿ ಕೊಳ್ಳೆ ಹೊಡೆಯುತ್ತಿದೆ. ಇನ್ನು, ಧುರಂಧರ್‌ 2 ಸಿನಿಮಾವನ್ನು ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ ಅವರು ಮನಸಾರೆ ಹೊಗಳಿದ್ದಾರೆ.

ಹೌದು, ಅಲ್ಲು ಅರ್ಜುನ್ ಈ ಚಿತ್ರವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಸಿನಿಮಾ ನೋಡಿದ ತಕ್ಷಣವೇ ಪ್ರತಿಕ್ರಿಯಿಸಿದ ಅವರು, "ದೇಶಭಕ್ತಿಯನ್ನು ಅತ್ಯಂತ ಸ್ಟೈಲಿಶ್ ಆಗಿ ತೋರಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಿರುವ ಈ ಸಿನಿಮಾದಲ್ಲಿ ಶಿಳ್ಳೆ-ಚಪ್ಪಾಳೆ ಗಿಟ್ಟಿಸುವಂತಹ ದೃಶ್ಯಗಳು ಸಾಕಷ್ಟಿವೆ. ಇದೊಂದು ಬ್ಲಾಕ್‌ಬಸ್ಟರ್ ಬ್ಲಾಸ್ಟ್" ಎಂದು ಹೇಳಿದ್ದಾರೆ.

ರಣವೀರ್ ನಮ್ಮ ದೇಶದಲ್ಲಿ ಇರುವುದಕ್ಕೆ ಹೆಮ್ಮೆಯಿದೆ

"ಧುರಂಧರ್ 2 ಸಿನಿಮಾ ಅದ್ಭುತವಾಗಿದೆ. ಚಿತ್ರತಂಡಕ್ಕೆ ನನ್ನ ಮನಃಪೂರ್ವಕ ಅಭಿನಂದನೆಗಳು. ಮಾಧವನ್ ಸೇರಿದಂತೆ ಎಲ್ಲಾ ನಟರು ಅದ್ಭುತವಾಗಿ ನಟಿಸಿದ್ದಾರೆ. ತಾಂತ್ರಿಕವಾಗಿ ಸಿನಿಮಾ ಉನ್ನತ ಮಟ್ಟದಲ್ಲಿದೆ. ನನ್ನ ಸಹೋದರ ರಣವೀರ್ ಸಿಂಗ್ ಅವರಂತಹ ಪ್ರತಿಭಾವಂತ ಮತ್ತು ವೈವಿಧ್ಯಮಯ ನಟ ನಮ್ಮ ದೇಶದಲ್ಲಿ ಇರುವುದಕ್ಕೆ ಹೆಮ್ಮೆಯಿದೆ. ರಣವೀರ್ ತಮ್ಮ ನಟನೆಯಿಂದ ಬೆಂಕಿ ಹಚ್ಚಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರು ಸಿಕ್ಸರ್ ಬಾರಿಸಿದ್ದಾರೆ. ಅವರಂತಹ ಶ್ರೇಷ್ಠ ನಿರ್ದೇಶಕರು ನಮ್ಮ ದೇಶದಲ್ಲಿ ಇರುವುದು ನಮ್ಮ ಅದೃಷ್ಟ. ಸಿನಿಮಾ ಮಾಮೂಲಿಯಾಗಿಲ್ಲ.. ಧೂಳೆಬ್ಬಿಸಿದ್ದಾರೆ! ಒಂದು ಭಾರತೀಯ ಕಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ್ದಾರೆ! ಜೈ ಹಿಂದ್" ಎಂದು ಅಲ್ಲು ಅರ್ಜುನ್‌ ಟ್ವೀಟ್ ಮಾಡಿದ್ದಾರೆ.

ಅಲ್ಲು ಅರ್ಜುನ್‌ ಟ್ವೀಟ್‌



"ಭಾರತೀಯ ಕಥೆ.. ಅಂತರರಾಷ್ಟ್ರೀಯ ಸ್ವಾಗ್" ಎಂದು ಅಲ್ಲು ಅರ್ಜುನ್ ನೀಡಿದ ರಿವ್ಯೂ ಈಗ ವೈರಲ್ ಆಗಿದೆ. ಇನ್ನು, 'ಧುರಂಧರ್ 2: ದಿ ರಿವೆಂಜ್' ಗಳಿಕೆಯ ವಿಚಾರದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವುದು ಖಚಿತ ಎಂದು ಟ್ರೇಡ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ವಾರಾಂತ್ಯದವರೆಗೂ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ.

Dhurandhar 2 Review: ಆದಿತ್ಯ ಧರ್‌ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!

ವಿಜಯ್‌ ದೇವರಕೊಂಡ ಟ್ವೀಟ್‌



ಧುರಂಧರ್‌ 2ಗೆ ವಿಜಯ್‌ ದೇವರಕೊಂಡ ಮೆಚ್ಚುಗೆ

"ನಾಳೆಯಿಂದ ಭಾರತೀಯ ಚಿತ್ರರಂಗ ಮತ್ತು ಸಂಸ್ಕೃತಿಯಲ್ಲಿ ಏನೋ ಒಂದು ದೊಡ್ಡದು ಸಂಭವಿಸಲಿದೆ. ನಾಲ್ಕೇ ಪದಗಳು. ಭಾರತ್ ಮಾತಾ ಕೀ ಜೈ! ಚಿತ್ರದ ಇಡೀ ತಂಡಕ್ಕೆ ಅಪಾರ ಪ್ರೀತಿ ಮತ್ತು ಗೌರವಗಳು. ಆದಿತ್ಯ ಧರ್ ಒಬ್ಬ ಅಪ್ರತಿಮ ಪ್ರತಿಭಾವಂತ. ರಣವೀರ್ ಸಿಂಗ್ ಅವರ ನಟನೆ ಅತ್ಯಂತ ಸ್ಫೋಟಕವಾಗಿದೆ. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಮತ್ತು ಜಮೀಲ್ ಅಂಕಲ್ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಶಾಶ್ವತ್ ಅವರ ಹಿನ್ನೆಲೆ ಸಂಗೀತವಂತೂ ಬೆಂಕಿ" ಎಂದು ವಿಜಯ್‌ ದೇವರಕೊಂಡ ಟ್ವೀಟ್‌ ಮಾಡಿದ್ದಾರೆ.