ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಉದಯಪುರದಲ್ಲಿ ಮದುವೆಯಾಗಿ, ಇದೀಗ ಹೈದರಾಬಾದ್ಗೆ ಮರಳಿದ್ದಾರೆ. ಇಲ್ಲಿಗೆ ಬರುತ್ತಿದ್ದಂತೆಯೇ, ಹಲವು ಕಾಯ್ರಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಭಾನುವಾರ (ಮಾ.2) ತಿರುಪತಿಗೆ ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದ ವಿರೋಶ್ ಜೋಡಿ, ಬಳಿಕ ಅಲ್ಲು ಅರ್ಜುನ್ ಕುಟುಂಬವನ್ನು ಸೇರಿಕೊಂಡಿದೆ. ಕಾರಣವೇನು? ಅಲ್ಲು ಸಿರೀಶ್ ಮದುವೆ.
ಅಲ್ಲು ಮನೆಯಲ್ಲಿ ಕಲ್ಯಾಣ
ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಕೊನೆಗೂ ಮದುವೆಯಾಗುತ್ತಿದ್ದಾರೆ. ನೈನಿಕಾ ಎಂಬುವವರ ಜೊತೆ ಸಿರೀಶ್ ಮದುವೆ ನಡೆಯುತ್ತಿದೆ. ಅದಕ್ಕೂ ಮೊದಲು ಅಲ್ಲು ಸ್ಟುಡಿಯೋದಲ್ಲಿ ವಿವಾಹಪೂರ್ವ ಸಮಾರಂಭಗಳು ನಡೆಯುತ್ತಿವೆ. ಈ 'ಪೆಳ್ಳಿ ಕೊಡುಕು' (ವರಪೂಜೆ) ಶಾಸ್ತ್ರದ ಫಂಕ್ಷನ್ಗೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಾಗೂ ಆನಂದ್ ದೇವರಕೊಂಡ ಆಗಮಿಸಿದ್ದು ವಿಶೇಷವಾಗಿತ್ತು.
ತೆಲುಗು ವಿವಾಹಗಳಲ್ಲಿ ವರನ ಕಡೆಯವರಿಗೆ 'ಪೆಳ್ಳಿ ಕೊಡುಕು' ವಿಧಿವಿಧಾನವು ಅತ್ಯಂತ ಪ್ರಮುಖವಾದುದು. ಈ ದಿನವು ಪವಿತ್ರ 'ಮಂಗಳ ಸ್ನಾನ'ದೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಅಲ್ಲು ಶಿರೀಶ್ ಅವರಿಗೆ ಶಾಸ್ತ್ರೋಕ್ತವಾಗಿ ಸ್ನಾನ ಮಾಡಿಸಿ, ಅರಿಶಿನ ಮತ್ತು ಗಂಧದ ಲೇಪನವನ್ನು ಹಚ್ಚಲಾಯಿತು. ಈ ಆಚರಣೆಯು ಶುದ್ಧೀಕರಣ, ಆಶೀರ್ವಾದ ಮತ್ತು ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದರ ಸಂಕೇತವಾಗಿದೆ.
ಮಾರ್ಚ್ 6ಕ್ಕೆ ಮದುವೆ, ಮಾರ್ಚ್ 4ಕ್ಕೆ ಆರತಕ್ಷತೆ
ರಶ್ಮಿಕಾ ಮತ್ತು ವಿಜಯ್ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಕುಟುಂಬದ ಸದಸ್ಯರನ್ನು ಅಭಿನಂದಿಸುತ್ತಿರುವ ಫೋಟೋಗಳು ವೈರಲ್ ಆಗಿವೆ. ಈ ಸಮಾರಂಭದಲ್ಲಿ ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲ ಕೂಡ ಉಪಸ್ಥಿತರಿದ್ದರು. ಅಲ್ಲು ಶಿರೀಶ್ ಅವರು ಮಾರ್ಚ್ 6 ರಂದು ನೈನಿಕಾ ರೆಡ್ಡಿ ಅವರನ್ನು ವಿವಾಹವಾಗಲಿದ್ದಾರೆ. ವಿವಾಹಕ್ಕೂ ಮುನ್ನ, ಮಾರ್ಚ್ 4 ರಂದು ತಾಜ್ ಕೃಷ್ಣ ಹೋಟೆಲ್ನಲ್ಲಿ ಕುಟುಂಬದವರು ಆತ್ಮೀಯರು ಮತ್ತು ಗಣ್ಯರಿಗಾಗಿ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಅಲ್ಲು ಅರ್ಜುನ್.