ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಕಾನಿಕ್‌ ಊರ್ವಶಿ ಚಿತ್ರಮಂದಿರ ನೆಲಸಮ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!

ಊರ್ವಶಿ ಚಿತ್ರಮಂದಿರ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಸೆಪ್ಟೆಂಬರ್ 30ರ ಗಡುವಿಗೂ ಮುನ್ನವೇ ಭೂಮಾಲೀಕರು ಕಟ್ಟಡ ಕೆಡವಲು ಮುಂದಾಗಿದ್ದನ್ನು ಪ್ರಶ್ನಿಸಿ ಆಡಳಿತ ಮಂಡಳಿ ತುರ್ತು ಅರ್ಜಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ಊರ್ವಶಿ ಥಿಯೇಟರ್‌ ಅನ್ನು ನೆಲಸಮಗೊಳಿಸುವ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಸದ್ಯಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಸೋಮವಾರ (ಆ.24) ಚಿತ್ರಮಂದಿರದ ಕಟ್ಟಡ ಕೆಡವುವ ಕಾರ್ಯ ಏಕಾಏಕಿ ಆರಂಭವಾಗುತ್ತಿದ್ದಂತೆ ಸಿನಿಪ್ರಿಯರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿತ್ತು. ಈ ವಿಚಾರವಾಗಿ ಆಡಳಿತ ಮಂಡಳಿ ತುರ್ತಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿ ತೆರವು ಕಾರ್ಯಾಚರಣೆಗೆ ಬ್ರೇಕ್ ಹಾಕಿದೆ.

ಸಾಮಗ್ರಿಗಳಿಗೆ ಭಾರಿ ಹಾನಿ

ಚಿತ್ರಮಂದಿರದ ಜಾಗವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಈಗಾಗಲೇ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಹೀಗಿದ್ದರೂ ನಿಗದಿತ ಗಡುವಿಗೆ ಮುನ್ನವೇ ಭೂಮಾಲೀಕರು ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದ್ದು, ಕಟ್ಟಡ ಕೆಡವುದಕ್ಕೆ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಊರ್ವಶಿ ಆಡಳಿತ ಮಂಡಳಿ ಹೈಕೋರ್ಟ್‌ಗೆ ದೂರು ಸಲ್ಲಿಸಿತು. ಚಿತ್ರಮಂದಿರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, ದಿಢೀರ್ ಕಾರ್ಯಾಚರಣೆಯಿಂದಾಗಿ ಥಿಯೇಟರ್‌ನಲ್ಲಿದ್ದ ಬೆಲೆಬಾಳುವ ಪ್ರೊಜೆಕ್ಟರ್, ಸ್ಕ್ರೀನ್ ಹಾಗೂ ಆಸನಗಳು ಸೇರಿದಂತೆ ಹಲವು ಸಾಮಗ್ರಿಗಳಿಗೆ ಭಾರಿ ಹಾನಿಯಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಬೆಂಗಳೂರಿನ ಐಕಾನಿಕ್ ‘ಊರ್ವಶಿ’ ಥಿಯೇಟರ್‌ ನೆಲಸಮ; 5 ದಶಕಗಳ ಭವ್ಯ ಇತಿಹಾಸಕ್ಕೆ ತೆರೆ, ಈ ಚಿತ್ರಮಂದಿರ ಕೆಡವಲು ಕಾರಣವೇನು?

ಯಾವುದೇ ತಡೆಯಾಜ್ಞೆ ನೀಡಬಾರದು

ಮತ್ತೊಂದೆಡೆ, ಭೂಮಾಲೀಕರ ಪರ ವಕೀಲರು ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಸೂಚಿಸಿದ್ದ ನಿಯಮಗಳ ಅನ್ವಯ ಆಡಳಿತ ಮಂಡಳಿಯು ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಆದ್ದರಿಂದ ತೆರವು ಪ್ರಕ್ರಿಯೆಗೆ ಯಾವುದೇ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು. ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು, ಸುಪ್ರೀಂ ಕೋರ್ಟ್ ಸೂಚನೆಯಂತೆ ಅಗತ್ಯ ಪ್ರಮಾಣಪತ್ರವನ್ನು ಕೂಡಲೇ ಸಲ್ಲಿಸುವಂತೆ ಊರ್ವಶಿ ಆಡಳಿತ ಮಂಡಳಿಗೆ ಸ್ಪಷ್ಟ ನಿರ್ದೇಶನ ನೀಡಿತು.

'ಬುಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಊರ್ವಶಿ ಪುತ್ರಿ ತೇಜಾ; ಹೀರೋ ʻಬಿಗ್‌ ಬಾಸ್‌ʼ ಭುವನ್‌ ಹೇಳಿದ್ದೇನು?

ಸದ್ಯಕ್ಕೆ ತಾತ್ಕಾಲಿಕ ರಿಲೀಫ್

ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿರುವ ಹೈಕೋರ್ಟ್, ಅಲ್ಲಿಯವರೆಗೆ ಚಿತ್ರಮಂದಿರದ ಕಟ್ಟಡವನ್ನು ಕೆಡವಬಾರದು ಎಂದು ಭೂಮಾಲೀಕರಿಗೆ ಆದೇಶಿಸಿದೆ. ಜತೆಗೆ ಚಿತ್ರಮಂದಿರದ ಒಳಗಿರುವ ಸ್ಕ್ರೀನ್, ಆಸನಗಳು ಸೇರಿದಂತೆ ಯಾವುದೇ ಉಪಕರಣ ಅಥವಾ ವಸ್ತುಗಳನ್ನು ತೆರವುಗೊಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ಐತಿಹಾಸಿಕ ಚಿತ್ರಮಂದಿರಕ್ಕೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.