ʻಬಿಗ್ ಬಾಸ್ʼ ಮನೆಯಲ್ಲಿ ಒಂದು ಕಟ್ಟುನಿಟ್ಟಾದ ನಿಯಮವಿದೆ. ಅದೇನೆಂದರೆ, ಬಹಿರಂಗವಾಗಿ ನಾಮಿನೇಷನ್ ವಿಚಾರವನ್ನು ಚರ್ಚೆ ಮಾಡುವಂತಿಲ್ಲ. ಗುಂಪು ಕಟ್ಟಿಕೊಂಡು ಒಬ್ಬರನ್ನು ಟಾರ್ಗೆಟ್ ಮಾಡಿ, ಚರ್ಚಿಸಿ ನಾಮಿನೇಟ್ ಮಾಡುವ ಹಾಗಿಲ್ಲ. ಈ ಹಿಂದೆ ಅನೇಕ ಸ್ಪರ್ಧಿಗಳು ಇಂತಹ ತಪ್ಪುಗಳನ್ನು ಮಾಡಿ, ವಾರಾಂತ್ಯದಲ್ಲಿ ನಡೆಯುವ 'ಕಿಚ್ಚನ ಪಂಚಾಯಿತಿ'ಯಲ್ಲಿ ಸುದೀಪ್ ಅವರಿಂದ ಸರಿಯಾಗಿಯೇ ತರಾಟೆಗೆ ಒಳಗಾಗಿದ್ದರು.
ನಾಮಿನೇಷನ್ ಬಗ್ಗೆ ಬಹಿರಂಗ ಚರ್ಚೆ
ಸದ್ಯ 'ಬಿಗ್ ಬಾಸ್ ಕನ್ನಡ' ಸೀಸನ್ 13ರ ಆರಂಭದಲ್ಲೇ ಕಿಚ್ಚನ ಪಂಚಾಯಿತಿಯಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ದಟ್ಟವಾಗಿದೆ. ಕಾರಣ, ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅಂತಹದ್ದೊಂದು ನಿಯಮ ಉಲ್ಲಂಘನೆ ಮಾಡಿದ್ದಾರೆ. ಇಬ್ಬರೇ ಒಂದು ಕಡೆ ಕುಳಿತುಕೊಂಡು ನಾಮಿನೇಷನ್ ಪ್ರಕ್ರಿಯೆಗೆ ಸಂಚು ರೂಪಿಸಿದ್ದಾರೆ. "ಯಾರನ್ನು ನಾಮಿನೇಟ್ ಮಾಡಬೇಕು?" ಎಂದು ಗಗನ್ಗೆ ತಾಂಡವ್ ಕೇಳಿದ್ದಾರೆ.
ಗಿಲ್ಲಿ ಹೆಸರನ್ನು ಪ್ರಸ್ತಾಪಿಸಿದ್ದೇಕೆ?
"ನೀನು ಯಾರನ್ನು ಮಾಡಬೇಕು ಎಂದುಕೊಂಡಿದ್ದೀಯಾ?" ಎಂದು ಗಗನ್ ಮರುಪ್ರಶ್ನೆ ಹಾಕಿದ್ದಕ್ಕೆ, "ನಾನು ಮಂಜನನ್ನು ನಾಮಿನೇಟ್ ಮಾಡುತ್ತೇನೆ" ಎಂದು ತಾಂಡವ್ ನೇರವಾಗಿಯೇ ಹೇಳಿದ್ದಾರೆ. "ಮಂಜ ಒಂಥರಾ ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ" ಎಂದೂ ತಾಂಡವ್ ವ್ಯಂಗ್ಯವಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ 'ಗಿಲ್ಲಿ' ನಟನ ಹೆಸರನ್ನು ಪ್ರಸ್ತಾಪಿಸಿ, "ಅವನ ತರಹ ಇವನಿಗೆ ಆಡಲು ಬರಲ್ಲ" ಎಂದು ಲೇವಡಿ ಮಾಡಿದ್ದಾರೆ. ಇಬ್ಬರೂ ನೇರವಾಗಿ ಮಂಜನನ್ನೇ ಟಾರ್ಗೆಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, "ಮಂಜನನ್ನು ನಾಮಿನೇಟ್ ಮಾಡಿ ಎಂದು ಒಂದಿಬ್ಬರಿಗೆ ನಾವೇ ಹೇಳೋಣ" ಎಂದೂ ಗಗನ್ ಹೇಳಿದ್ದಾರೆ.
ಅವನು ಚಿಕ್ಕ ಹುಡುಗ
"ಸಂಗೀತಾ ಭಟ್ ಅವರನ್ನು ಒಪ್ಪಿಸಬಹುದು, ಜಗ್ಗಾ ಮಮ್ಮಿ ನಮ್ಮ ಕಡೆ ಇದ್ದಾನೆ" ಎಂಬ ಮಾತುಗಳನ್ನೂ ಇವರಿಬ್ಬರು ಆಡಿದ್ದಾರೆ. ಕೊನೆಗೆ ಯಶಸ್ ಕೃಷ್ಣ ಅವರ ಬಗ್ಗೆ, "ಅವನು ಚಿಕ್ಕ ಹುಡುಗ, ಚಾಕಲೇಟ್ ಕೊಟ್ಟು ನಮ್ಮ ದಾರಿಗೆ ತರಬಹುದು" ಎಂದು ಹೇಳುತ್ತಾ ತಾಂಡವ್ ಮತ್ತು ಗಗನ್ ಗಹಗಹಿಸಿ ನಕ್ಕಿದ್ದಾರೆ.
ನಾಮಿನೇಷನ್ ಬಗ್ಗೆ ಓಪನ್ ಆಗಿ ನಡೀತಿದೆ ಗೇಮ್ ಪ್ಲಾನ್!
ವೀಕೆಂಡ್ನಲ್ಲಿ ಭಾರಿ ಕ್ಲಾಸ್ ಫಿಕ್ಸ್
'ಬಿಗ್ ಬಾಸ್' ನಿಯಮದ ಪ್ರಕಾರ ನಾಮಿನೇಷನ್ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ. ಆದರೆ, ಇವರು ಗುಂಪುಗಾರಿಕೆ ಮಾಡಿಕೊಂಡು, ಮತಗಳನ್ನು ವಿಭಜಿಸಿ, ಒಬ್ಬರನ್ನು ಗುರಿಯಾಗಿಸಿ ಪ್ಲಾನ್ ಮಾಡಿ ಆಡುತ್ತಿದ್ದಾರೆ. ನಾಮಿನೇಷನ್ ಬಗ್ಗೆ ಚರ್ಚೆ ಮಾಡಬಾರದು ಎಂಬ ನಿಯಮ ತಿಳಿದಿದ್ದರೂ ಅದನ್ನು ಉಲ್ಲಂಘಿಸಿದ್ದಾರೆ. ಯಾರು ಯಾರನ್ನು ನಾಮಿನೇಟ್ ಮಾಡಬೇಕೆಂದು ಪರೋಕ್ಷವಾಗಿ ಪ್ರಭಾವ ಬೀರುವಂತಿಲ್ಲ. ಆದರೂ, ಆ ನಿಯಮವನ್ನು ಮುರಿಯುವಂತಹ ಮಾತುಗಳು ಇವರಿಬ್ಬರ ಬಾಯಿಂದ ಬಂದಿವೆ.
ಹಾಗಾಗಿ, ಮುಂಬರುವ ವಾರಾಂತ್ಯದ ಕಿಚ್ಚನ ಪಂಚಾಯಿತಿಯಲ್ಲಿ ಈ ವಿಚಾರ ಗಂಭೀರ ಚರ್ಚೆಗೆ ಬರುವುದು ಖಚಿತ. ಗಗನ್ ಮತ್ತು ತಾಂಡವ್ ರಾಮ್ಗೆ ಸುದೀಪ್ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.