ನಟ ಪ್ರಕಾಶ್ ರಾಜ್ ತಮ್ಮ ನಟನೆಯಿಂದ ಎಷ್ಟು ಗುರುತಿಸಿಕೊಂಡಿದ್ದಾರೋ, ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಅಷ್ಟೇ ಚರ್ಚೆಯಲ್ಲಿರುತ್ತಾರೆ. ಇತ್ತೀಚೆಗೆ ರಾಮಾಯಣ ಮತ್ತು ಶ್ರೀರಾಮನ ಬಗ್ಗೆ ಅವರು ನೀಡಿದ ಹೇಳಿಕೆಗಳು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ, ನಟ ಹಾಗೂ ಜನಸೇನಾ ಎಂಎಲ್ಸಿ ನಾಗ ಬಾಬು ಅವರು ಪ್ರಕಾಶ್ ರಾಜ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರಾಜ್, ರಾಮಾಯಣದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿದೆ. ರಾಮನನ್ನು ಅವಮಾನಿಸಿರುವುದಕ್ಕೆ ಭಕ್ತರು ಆಕ್ರೋಶಗೊಂಡಿದ್ದಾರೆ. ಪ್ರಕಾಶ್ ರಾಜ್ ವಿರುದ್ಧ ಪ್ರಕರಣಗಳು ಕೂಡ ದಾಖಲಾಗುತ್ತಿವೆ.
ಧೈರ್ಯವಲ್ಲ, ಅದು ಅಹಂಕಾರ
ಈ ಮಧ್ಯೆ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿರುವ ನಟ ನಾಗ ಬಾಬು, "ಶ್ರೀರಾಮಚಂದ್ರ ಕೇವಲ ಹಿಂದೂಗಳ ದೈವ ಮಾತ್ರವಲ್ಲ, ಆತ ಧರ್ಮದ ಪ್ರತಿರೂಪ. ರಾಮನನ್ನು ಕೀಳಾಗಿ ಕಾಣುವುದು ಧೈರ್ಯವಲ್ಲ, ಅದು ಅಹಂಕಾರ. ರಾಮನ ಹೀಯಾಳಿಸುವವರು ತಮಗೆ ತಾವೇ ಗಾಯ ಮಾಡಿಕೊಳ್ಳುತ್ತಾರೆಯೇ ಹೊರತು ಧರ್ಮಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಅಧರ್ಮದ ಪರ ನಿಂತವರು ಹೇಗೆ ಕಾಲಗರ್ಭದಲ್ಲಿ ಅಳಿದುಹೋದರೋ, ರಾಮನ ವಿರುದ್ಧ ವಿಷ ಕಾರುವವರ ಗತಿಯೂ ಹಾಗೆಯೇ ಆಗಲಿದೆ" ಎಂದು ಗುಡುಗಿದ್ದಾರೆ.
Prakash Raj: ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ಕಿತ್ತು ತಿಂದ: ಪ್ರಕಾಶ್ ರಾಜ್ ಹೊಸ ರಾಮಾಯಣ
ಮತ್ತೊಂದು ಟ್ವೀಟ್ನಲ್ಲಿ ಏನಿದೆ?
"ಪ್ರಕಾಶ್ ರೈ ಅವರೇ, ನೀವು ನಿಮ್ಮನ್ನು 'ಕ್ರಿಶ್ಚಿಯನ್ ನಾಸ್ತಿಕ' ಎಂದು ಕರೆದುಕೊಂಡರೂ, ನಿಮ್ಮ ತಾಯಿಯ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಧರ್ಮದ ನಂಬಿಕೆಗಳಿಗೆ ನೀವು ನೀಡಿದ ಗೌರವವು ಒಬ್ಬ ಮಗನಾಗಿ ನಿಮ್ಮ ಕರ್ತವ್ಯವಾಗಿತ್ತು. ಆ ನಡೆಯನ್ನು ನಾವು ಗೌರವಿಸುತ್ತೇವೆ. ಅದೇ ಮನೋಭಾವದಿಂದ, ನೀವು ಕೋಟ್ಯಂತರ ಜನರ ನಂಬಿಕೆಗಳನ್ನು ಗೌರವಿಸುವುದು ಅತ್ಯಗತ್ಯ" ಎಂದು ನಾಗ ಬಾಬು ಹೇಳಿದ್ದಾರೆ.
"ನಾಸ್ತಿಕತೆ ಎಂದರೆ ದೇವರುಗಳನ್ನು ಅಥವಾ ನಂಬಿಕೆಯುಳ್ಳವರನ್ನು ಅಪಹಾಸ್ಯ ಮಾಡುವುದಲ್ಲ; ಅದು ಒಂದು ತಾರ್ಕಿಕ ಚಿಂತನಾ ಕ್ರಮ. ಹಿಂದೂ ಧರ್ಮವು ತನ್ನ ವಿವಿಧ ದರ್ಶನಗಳ ಮೂಲಕ ನಾಸ್ತಿಕ ತತ್ವಜ್ಞಾನವನ್ನೂ ಸಹ ಅಪ್ಪಿಕೊಂಡಿರುವ ಏಕೈಕ ಧರ್ಮವಾಗಿದೆ. ಇಂತಹ ಪರಂಪರೆಯನ್ನು ತಿರಸ್ಕರಿಸುವುದು ತಾರ್ಕಿಕತೆಯಲ್ಲ, ಬದಲಿಗೆ ಅದು ಅಗೌರವದ ಸಂಗತಿಯಾಗುತ್ತದೆ. ಬೇರೆ ದೇಶಗಳಲ್ಲಿ ಇಂತಹ ಮಾತುಗಳನ್ನು ಆಡಿದ್ದರೆ ನೀವು ಗಂಭೀರ ಸಂಕಷ್ಟಕ್ಕೆ ಸಿಲುಕುತ್ತಿದ್ದಿರಿ" ಎಂದು ನಾಗ ಬಾಬು ಎಚ್ಚರಿಸಿದ್ದಾರೆ.
ನಾಗ ಬಾಬು ಮಾಡಿರುವ ಟ್ವೀಟ್
"ಇದು ನಿಮ್ಮ ಬಗ್ಗೆ ನನಗಿರುವ ನೇರವಾದ ಅಭಿಪ್ರಾಯ. ಘನತೆ ಮೀರಿ ವರ್ತಿಸುವ ನಿಮ್ಮಂತಹವರ ಜೊತೆಗೆ ನಾನು ಭವಿಷ್ಯದಲ್ಲಿ ಎಂದಿಗೂ ಚರ್ಚೆಗೆ ಮಾಡುವುದಿಲ್ಲ. ವೈವಿಧ್ಯಮಯ ನಂಬಿಕೆಗಳನ್ನು ಗೌರವಿಸುವುದೇ ನಿಜವಾದ ತಾರ್ಕಿಕತೆ ಮತ್ತು ಜವಾಬ್ದಾರಿಯ ಲಕ್ಷಣವಾಗಿದೆ" ಎಂದು ನಾಗ ಬಾಬು ಪ್ರತಿಕ್ರಿಯಿಸಿದ್ದಾರೆ.