ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಳೆ ಬಿಡುಗಡೆಯಾಗಲಿದೆ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್‌ ಬೆಂಗಳೂರಿನ ಆ ಒಂದು ಘಟನೆ

ಸ್ವತಂತ್ರ ನಿರ್ಮಾಣ ಸಂಸ್ಥೆಯಾದ ನಮ್ಮ ಕುಡ್ಲದ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕ್ರೈಂ ಥ್ರಿಲ್ಲರ್ ವೆಬ್ ಸರಣಿ "ಬೆಂಗಳೂರಿನನ ಆ ಒಂದು ಘಟನೆ" ಬಿಡುಗಡೆಗೆ ಸಜ್ಜಾಗಿದೆ. ಈ ಕಥೆ ಅತ್ಯಾಚಾರ ಪ್ರಕರಣವೊಂದರ ತನಿಖೆಯನ್ನು ಆಧರಿಸಿದ್ದು, ನಾನ್-ಲೀನಿಯರ್ ಶೈಲಿಯಲ್ಲಿ ನಿರೂಪಿಸಲಾಗಿದೆ. ತನಿಖೆಯ ಪ್ರತಿ ಹಂತದಲ್ಲೂ ಅನಿರೀಕ್ಷಿತ ತಿರುವುಗಳು, ರೋಚಕ ಬೆಳವಣಿಗೆಗಳು ಮತ್ತು ಕುತೂಹಲವನ್ನು ಹೆಚ್ಚಿಸುವ ಘಟನೆಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡಲಿವೆ.

ಸಂಗ್ರಹ ಚಿತ್ರ

ಬೆಂಗಳೂರು: ಸ್ವತಂತ್ರ ನಿರ್ಮಾಣ ಸಂಸ್ಥೆಯಾದ ನಮ್ಮ ಕುಡ್ಲದ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕ್ರೈಂ ಥ್ರಿಲ್ಲರ್ ವೆಬ್ ಸರಣಿ "ಬೆಂಗಳೂರಿನ ಆ ಒಂದು ಘಟನೆ" ಬಿಡುಗಡೆಗೆ ಸಜ್ಜಾಗಿದೆ. ನಾಲ್ಕು ಸಂಚಿಕೆಗಳ ಈ ವೆಬ್ ಸರಣಿ ತನ್ನ ವಿಶಿಷ್ಟ ನಿರೂಪಣೆ, ಕುತೂಹಲಕಾರಿ ಕಥಾಹಂದರ ಹಾಗೂ ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ.

ಈ ಕಥೆ ಅತ್ಯಾಚಾರ ಪ್ರಕರಣವೊಂದರ ತನಿಖೆಯನ್ನು ಆಧರಿಸಿದ್ದು, ನಾನ್-ಲೀನಿಯರ್ ಶೈಲಿಯಲ್ಲಿ ನಿರೂಪಿಸಲಾಗಿದೆ. ತನಿಖೆಯ ಪ್ರತಿ ಹಂತದಲ್ಲೂ ಅನಿರೀಕ್ಷಿತ ತಿರುವುಗಳು, ರೋಚಕ ಬೆಳವಣಿಗೆಗಳು ಮತ್ತು ಕುತೂಹಲವನ್ನು ಹೆಚ್ಚಿಸುವ ಘಟನೆಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡಲಿವೆ. ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಮಾಜಕ್ಕೆ ಅಗತ್ಯವಾದ ಸಂದೇಶವೊಂದನ್ನು ತಲುಪಿಸುವ ಪ್ರಯತ್ನವೂ ಈ ವೆಬ್ ಸರಣಿಯ ವಿಶೇಷತೆಯಾಗಿದೆ.

ಈ ಯೋಜನೆಯ ಕಥೆ, ಚಿತ್ರಕಥೆ, ಸಂಭಾಷಣೆ, ಸಂಪಾದನೆ, ವಸ್ತ್ರ ವಿನ್ಯಾಸ, ಕಲಾ ವಿನ್ಯಾಸ, ಉಪಶೀರ್ಷಿಕೆಗಳು ಹಾಗೂ ನಾಯಕ ನಟನ ಜವಾಬ್ದಾರಿಯನ್ನು ಗುರುದತ್ ನಿರ್ವಹಿಸಿದ್ದಾರೆ. ಒಂದೇ ಯೋಜನೆಯಲ್ಲಿ ಹಲವು ವಿಭಾಗಗಳನ್ನು ಹೊತ್ತುಕೊಂಡಿರುವ ಅವರ ಶ್ರಮ ಈ ವೆಬ್ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ.

ವೆಬ್ ಸರಣಿಯ ಛಾಯಾಗ್ರಹಣವನ್ನು ಡಿ.ಸಿ. ಅಮಿತ್ ಕುಮಾರ್ ನಿರ್ವಹಿಸಿದ್ದು, ಸಂಗೀತ ನಿರ್ದೇಶನವನ್ನು ಸತ್ಯ ರಾಧಾಕೃಷ್ಣ ಮಾಡಿದ್ದಾರೆ. ಸಂಪಾದನೆಯನ್ನು ಗುರುದತ್ ಹಾಗೂ ದೀಪಕ್ ಹೆಗ್ಡೆ ಜಂಟಿಯಾಗಿ ನಿರ್ವಹಿಸಿದ್ದು, ಮೇಕಪ್ ವಿಭಾಗವನ್ನು ಪುರುಷೋತ್ತಮ ಮತ್ತು ಡಿಐ ಕಾರ್ಯವನ್ನು ಕಮಲ್ ಗೋಯಲ್ ನಿರ್ವಹಿಸಿದ್ದಾರೆ.

ನಟನೆಯಲ್ಲಿ ಗುರುದತ್ ನಾಯಕನಾಗಿ ಹಾಗೂ ಮೇಘನಾ ಕಾಂಚನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೀಪಕ್ ಹೆಗ್ಡೆ, ರೋಹಿತ್ ಆರ್. ನಾಯಕ್, ಮನೋಹರ್ ಎನ್., ಮಂಜುನಾಥ್ ಶ್ರೀನಿವಾಸ್ ಶಿವಕುಮಾರ್, ಸ್ವಪ್ನಶ್ರೀ ಪ್ರಸಾದ್, ಸತೀಶ್ ಬಡಿಗೇರ್ ಸೇರಿದಂತೆ ಹಲವಾರು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ವೆಬ್ ಸರಣಿಯ ಮತ್ತೊಂದು ವಿಶೇಷತೆ ಎಂದರೆ, ಬಹುತೇಕ ಎಲ್ಲಾ ಕಲಾವಿದರು ರಂಗಭೂಮಿ ಹಾಗೂ ಕಿರುಚಿತ್ರಗಳ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅವರ ಅನುಭವ ಮತ್ತು ನೈಜ ಅಭಿನಯ ಕಥೆಗೆ ಮತ್ತಷ್ಟು ಬಲ ತುಂಬಿದೆ. ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಸಲಾಗಿದ್ದು, ಪ್ರಮುಖ ಭಾಗಗಳನ್ನು ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಿರ್ಮಿಸಲಾದ ಪೊಲೀಸ್ ಠಾಣೆ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ.

ವೆಬ್ ಸರಣಿಯ ಮೊದಲ ಎರಡು ಸಂಚಿಕೆಗಳು ಜೂನ್ 26, 2026ರಂದು ಬಿಡುಗಡೆಯಾಗಲಿದ್ದು, ಅಂತಿಮ ಎರಡು ಸಂಚಿಕೆಗಳು ಜುಲೈ 3, 2026ರಂದು ಬಿಡುಗಡೆಯಾಗಲಿವೆ. ಈ ವೆಬ್ ಸರಣಿಯನ್ನು ನಮ್ಮ ಕನ್ನಡ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಬಹುದಾಗಿದೆ.

ಕನ್ನಡ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಸ್ವತಂತ್ರ ನಿರ್ಮಾಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, "ಬೆಂಗಳೂರುರಿನ ಆ ಒಂದು ಘಟನೆ" ಹೊಸ ಪ್ರತಿಭೆಗಳಿಗೆ ವೇದಿಕೆಯಾಗುವುದರ ಜೊತೆಗೆ, ಉತ್ತಮ ಕಥನಶೈಲಿ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ಮೂಡಿಬಂದಿರುವ ಮಹತ್ವದ ಪ್ರಯತ್ನವಾಗಿದೆ. ರೋಚಕ ಕಥಾಹಂದರ, ಕುತೂಹಲಕಾರಿ ತನಿಖೆ ಹಾಗೂ ಸಮಾಜಮುಖಿ ಸಂದೇಶವನ್ನು ಹೊತ್ತಿರುವ ಈ ವೆಬ್ ಸರಣಿ ಕನ್ನಡ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

Vishakha Bhat Heggar

View all posts by this author