ಬೆಂಗಳೂರು: ಉದಯ ಟಿವಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 27ರ ಸಂಜೆ 6 ಗಂಟೆಗೆ ಧ್ರುವ ಸರ್ಜಾ ಜತೆ ವಿಶೇಷ ಕಾರ್ಯಕ್ರಮ ʻಧ್ರುವ ದಸರಾʼ ಪ್ರಸಾರವಾಗಲಿದೆ. ಭರ್ಜರಿ ಸೆಟ್ನಲ್ಲಿ ಚಿತ್ರರಂಗದ ಪ್ರಮುಖ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿರುವ ʻಧ್ರುವ ದಸರಾʼ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಿನಿಮಾ ಪಯಣ ಮತ್ತು ಬಾಲ್ಯದಿಂದ ಇಲ್ಲಿಯವರೆಗಿನ ಜೀವನದ ಝಲಕ್ ಕೂಡ ಹೌದು. ಧ್ರುವ ದಸಾರದ ಒಂದು ವಿಶೇಷ ಎಂದರೆ, ಧ್ರುವ ಅವರಿಗೆ ಗೊತ್ತಿರದೆ ಹಲವು ವಿಶೇಷ ವ್ಯಕ್ತಿಗಳು ಆಗಮಿಸಿ ಅವರಿಗೆ ಅಚ್ಚರಿ ಮೂಡಿಸಿದರು.
ಧ್ರುವ ಬಗ್ಗೆ ಬಹಳಷ್ಟು ಕುತೂಹಲಕಾರಿ ಘಟನೆಗಳು, ಭಾವನಾತ್ಮಕ ವಿಷಯಗಳು ಇಲ್ಲಿವೆ. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೈಕಾರದ ನಡುವೆ ತಮ್ಮ ʻಕೆಡಿʼ ಚಿತ್ರದ ಹಾಡಿನೊಂದಿಗೆ ಧ್ರುವ ಎಂಟ್ರಿ ಕೊಟ್ಟಿದ್ದು ವಿಶೇಷ. ತಾನು ಸೂಪರ್ ಸ್ಟಾರ್ ಎನ್ನಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ತಾನೊಬ್ಬ ನಟ ಮಾತ್ರ ಎಂದು ವಿನಯದಿಂದ ಹೇಳಿದ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಇನ್ನು ಮುಂದೆ ಪ್ರತಿ ವರ್ಷ ಕನಿಷ್ಠ ಎರಡು ಚಿತ್ರಗಳಲ್ಲಿ ನಟಿಸುವುದಾಗಿ ಘೋಷಣೆ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಆಕಸ್ಮಿಕವಾಗಿ ವೇದಿಕೆಗೆ ಆಗಮಿಸಿ ಧ್ರುವ ಅವರಿಗೆ ಅಚ್ಚರಿ ಮೂಡಿಸಿದರು. ಅತ್ತಿಗೆಯನ್ನು ತಾಯಿಯಂತೆ ಕಾಣುವ ಧ್ರುವ ಅಣ್ಣನನ್ನು ನೆನೆದು ಭಾವುಕರಾದರು. ಮನೆಗೆ ಬಂದಾಗ ತಮ್ಮ ಮಗ ರಾಯನ್ ಜತೆ ಧ್ರುವ ಮಗುವಾಗಿ ಇರುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ಮೇಘನಾ ರಾಜ್ ವಿವರಿಸಿದ್ದಾರೆ. ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಬಗೆಗೆ ಹೇಳಬೇಕಾದರೆ ಹಿಂದಿನಿಂದ ವೇದಿಕೆಗೆ ಅವರೇ ಸ್ವತಃ ಬಂದಿದ್ದು ಅಚ್ಚರಿಯ ಕ್ಷಣಗಳಲ್ಲಿ ಒಂದು.
ಪ್ರೇರಣಾ ಟಿವಿ ಕಾರ್ಯಕ್ರಮವೊಂದರಲ್ಲಿ ಮೊಟ್ಟಮೊದಲ ಬಾರಿ ಕಾಣಿಸಿಕೊಂಡಿದ್ದು ʻಧ್ರುವ ದಸರಾʼದ ವೈಶಿಷ್ಟ್ಯ. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಧ್ರುವ ನಡುವಿನ ಪ್ರೇಮ ಲೋಕದ ದಿನಗಳನ್ನು ಮೆಲುಕು ಹಾಕಿದರು. ಅವರು ಧ್ರುವಗೆ ಪ್ರೇಮ ಪ್ರಸ್ತಾಪ ಮಾಡಿದ್ದನ್ನು ಮರುಸೃಷ್ಟಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಮುಂಗಡವಾಗಿ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳಾದ ರುದ್ರಾಕ್ಷಿ ಹಾಗೂ ಹಯವದನ ಕೂಡ ಉಪಸ್ಥಿತರಿದ್ದುದು ವಿಶೇಷ.
ಕಲಾವಿದ, ಚಿಕ್ಕಪ್ಪ ಅರ್ಜುನ್ ಸರ್ಜಾ ವಿಡಿಯೊ ಮುಖಾಂತರ ಶುಭ ಕೋರಿದರು. ಧ್ರುವ ಅವರ ನಿಷ್ಠೆ, ಕಠಿಣ ಪರಿಶ್ರಮ, ನಟನಾ ಚಾತುರ್ಯದ ಬಗ್ಗೆ ವಿವರಿಸಿದರು. ಧ್ರುವ ಸರ್ಜಾ ಅವರಿಗೆ ನಟನೆ ಕಲಿಸಿದ ಗೌರಿ ದತ್ತು ಹಾಗೂ ಮಹಾಂತೇಶ್, ನಟನೆಯಲ್ಲಿ ಅವರಿಗಿರುವ ಶ್ರದ್ಧೆ ವಿವರಿಸಿ ನಾಟಕ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಗಾಯಕ, ನಟ ಚಂದನ್ ಶೆಟ್ಟಿ ಕಷ್ಟದ ಸಮಯದಲ್ಲಿ ಧ್ರುವ ಸಹಾಯ ಮಾಡಿದ್ದನ್ನು ನೆನೆದರು. ತಾನು ಬರೆದ ಒಂದು ಹಾಡನ್ನು ಎಂಟು ವರ್ಷ ಕಾಪಾಡಿಕೊಂಡು ʻಪೊಗರುʼ ಚಿತ್ರದಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಿದರು. ಚಂದನ್ ಶೆಟ್ಟಿ ಜತೆ ನಟಿಸಿದ ಆಲ್ಬಂ ಹಾಡೊಂದಕ್ಕೆ ಸಿಕ್ಕ 501 ರೂಪಾಯಿ ಮೊದಲ ಸಂಭಾವನೆ ಎಂದು ಧ್ರುವ ಸರ್ಜಾ ಅಚ್ಚರಿ ವ್ಯಕ್ತಪಡಿಸಿದರು.
ಗೆಳೆಯ, ನಟ ರಾಕೇಶ್ ಅಡಿಗ ಮಾತನಾಡಿ, ಧ್ರುವ ಸರ್ಜಾ ಅವರ ಬಾಲ್ಯದ ತುಂಟಾಟದ ಘಟನೆಗಳನ್ನು ಹಂಚಿಕೊಂಡರು. ಧ್ರುವ ದೈವ ಭಕ್ತರೂ ಆಗಿದ್ದು ಆಧ್ಯಾತ್ಮ ಆಸಕ್ತರೂ ಹೌದು ಎಂಬ ವಿಷಯ ಬಹಿರಂಗಪಡಿಸಿದರು. ಇದಕ್ಕೆ ತಕ್ಕಂತೆ, ಗರುಡ ಪುರಾಣದ ಕೆಲವು ವಿಷಯಗಳ ಬಗ್ಗೆ ಧ್ರುವ ಸರ್ಜಾ ನಿರರ್ಗಳವಾಗಿ ಮಾತನಾಡಿ ಅಚ್ಚರಿ ಮೂಡಿಸಿದರು.
ಧ್ರುವ ಒಬ್ಬ ʻಮೌನದಾನಿʼ ಎಂಬುದನ್ನು ಅವರಿಂದ ಉಪಕೃತರಾದ ಹಲವರು ಬಹಿರಂಗ ಪಡಿಸಿದರು. ಆಟೋ ಖರೀದಿಗೆ, ಆಪರೇಷನ್, ಕಾಲೇಜು ಅಡ್ಮಿಷನ್ ಹೀಗೆ ಅನೇಕ ಸಂದರ್ಭಗಳಲ್ಲಿ ಧ್ರುವ ಸಹಾಯ ಮಾಡಿದ್ದನ್ನು ಸ್ಮರಿಸಿದರು. ಮೂರು ವರ್ಷದ ದೃಷ್ಟಿಹೀನ ಬಾಲಕನಿಗೆ ಚಿಕಿತ್ಸೆಗೆ ನೆರವಾಗಿ ದೃಷ್ಟಿ ಮರಳಿದ್ದು ಗಮನ ಸೆಳೆಯಿತು. ತಾವು ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ವರೋ ಅಂಥ ಗುಣಮಟ್ಟದ ಆಸ್ಪತ್ರೆಗೇ ಸಹಾಯ ಕೇಳಿ ಬಂದವರನ್ನು ಕಳಿಸುವುದು ವಿಶೇಷ.
ಇದನ್ನು ಓದಿ:Dad Movie: ಶಿವರಾಜ್ಕುಮಾರ್ ಅಭಿನಯದ ‘ಡ್ಯಾಡ್ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ
ಕಲಾವಿದರಾದ ಬುಲೆಟ್ ರಕ್ಷಕ್, ಐಶ್ವರ್ಯಾ ಸಿಂಧೋಗಿ, ಯಶಸ್ವಿನಿ, ರಮೋಲಾ, ಆಸಿಯಾ ಬೇಗಂ, ಧನುಷ್ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. ಚಿಲ್ಲರ್ ಮಂಜು, ಮನೋಹರ್ ಕಾಮಿಡಿ ಎಲ್ಲರನ್ನು ನಗೆಗಡಲಿಗೆ ಕರೆದುಕೊಂಡು ಹೋಯಿತು. ನಿರ್ದೇಶಕ ಚೇತನ್ ಕುಮಾರ, ನೃತ್ಯ ಸಂಯೋಜಕ ಮುರಳಿ ಮಾಸ್ಟರ್, ಛಾಯಾಗ್ರಾಹಕ ಡೇವಿಡ್ ಮತ್ತಿತರರು ಧ್ರುವ ಜತೆ ತಮ್ಮ ಸಿನಿ ಪಯಣದ ಅನುಭವ ಹಂಚಿಕೊಂಡರು.
ಉದಯ ಟಿವಿಯ ʼಸಿಂಧು ಭೈರವಿʼ, ʼಶಾಂತಿ ನಿವಾಸʼ, ಶೀಘ್ರದಲ್ಲಿ ಪ್ರಸಾರವಾಗಲಿರುವ ʼರಥ ಸಪ್ತಮಿʼ ಧಾರಾವಾಹಿ ಕಲಾವಿದರ ನೃತ್ಯ ವರ್ಣರಂಜಿತವಾಗಿತ್ತು. ಉದಯ ಟಿವಿಯ ʼಕಾದಂಬರಿʼ ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣ ಮಾಡಿದ ಶ್ವೇತಾ ಚಂಗಪ್ಪ ಮತ್ತೆ ಹಲವು ವರ್ಷಗಳ ನಂತರ ಉದಯ ಟಿವಿಯ ಧ್ರುವ ದಸರಾ ಕಾರ್ಯಕ್ರಮ ನಿರೂಪಕರಾಗಿ ಬಂದಿದ್ದು ವಿಶೇಷ.
ಇತ್ತೀಚೆಗಷ್ಟೇ ʻಚಿತ್ತಾರ ಸ್ಟಾರ್ ಅವಾರ್ಡ್ಸ್ʼ ಕಾರ್ಯಕ್ರಮ ಹಾಗೂ ʼಮಾಂಗಲ್ಯʼ ಹೊಸ ಧಾರಾವಾಹಿ ಯೊಂದಿಗೆ ಸಂಚಲನ ಮೂಡಿಸಿರುವ ಉದಯ ಟಿವಿ ʻಧ್ರುವ ದಸರಾʼ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಸಂಶಯವಿಲ್ಲ ಎಂದು ಈ ವಾಹಿನಿಯ ಮುಖ್ಯಸ್ಥರು ಹೇಳಿದ್ದಾರೆ.