ದೇಶದ ಅತ್ಯಂತ ಪ್ರಮುಖ ಮನರಂಜನಾ ಹಾಗೂ ತಂತ್ರಜ್ಞಾನ ಸಂಸ್ಥೆಯಾದ ‘ಜೀ’ (ZEE), ಭಾರತದ ಮೊಟ್ಟಮೊದಲ ಬಹುಭಾಷಾ ಕಿರುಚಿತ್ರ ಸ್ಪರ್ಧೆ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ನ ಗ್ರಾಂಡ್ ಫಿನಾಲೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ನವ ಪೀಳಿಗೆಯ ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಸಕ್ತ ಸಾಲಿನ ಆರಂಭದಲ್ಲಿ ಘೋಷಿಸಲಾಗಿದ್ದ ಈ ವಿಶಿಷ್ಟ ಸ್ಪರ್ಧೆಯು ಇದೀಗ ಅಂತಿಮ ಘಟ್ಟ ತಲುಪಿದೆ.
ದೇಶದ ಮೂಲೆ ಮೂಲೆಯ ಉದಯೋನ್ಮುಖ ಪ್ರತಿಭೆಗಳು ಕೇವಲ ತಮ್ಮ ಸ್ಮಾರ್ಟ್ಫೋನ್ಗಳನ್ನು ಬಳಸಿಕೊಂಡು ಚಿತ್ರೀಕರಿಸಿದ ವಿಶಿಷ್ಟ ಕಿರುಚಿತ್ರಗಳಿಗೆ ಈ ಸ್ಪರ್ಧೆ ವೇದಿಕೆಯಾಗಿತ್ತು. ಸಿನಿಮಾ ನಿರ್ಮಾಣ ಕೇವಲ ಕೆಲವರಿಗಷ್ಟೇ ಸೀಮಿತವಾಗಬಾರದು ಹಾಗೂ ಪ್ರಾದೇಶಿಕ ಸಂಸ್ಕೃತಿಗಳಿಗೆ ಮನ್ನಣೆ ಸಿಗಬೇಕು ಎಂಬ ಉದ್ದೇಶದಿಂದ ಒಟ್ಟು ಎಂಟು ಭಾರತೀಯ ಭಾಷೆಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್ಗಳು ಯಾವವು?
ಚಿತ್ರರಂಗದ ದಿಗ್ಗಜರ ಜ್ಯೂರಿ ಸಮಿತಿ
ಈ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲು ಭಾರತೀಯ ಚಿತ್ರರಂಗದ ಖ್ಯಾತನಾಮ ನಿರ್ದೇಶಕರನ್ನೊಳಗೊಂಡ ಪ್ರತಿಷ್ಠಿತ ಜ್ಯೂರಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಅನುರಾಗ್ ಕಶ್ಯಪ್ (ಹಿಂದಿ), ರವಿ ಜಾಧವ್ (ಮರಾಠಿ), ನಾಗ್ ಅಶ್ವಿನ್ (ತೆಲುಗು), ಸೃಜಿತ್ ಮುಖರ್ಜಿ (ಬೆಂಗಾಲಿ), ಪಿ. ಸಮುದ್ರಖಣಿ (ತಮಿಳು), ಲಿಜೋ ಜೋಸ್ ಪೆಲ್ಲಿಸ್ಸೆರಿ (ಮಲಯಾಳಂ) ಹಾಗೂ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಹೇಮಂತ್ ರಾವ್ ಭಾಗಿಯಾಗಿದ್ದಾರೆ. ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ರಾಜೀವ್ ಮಸಂದ್ ಅವರ ನೇತೃತ್ವದಲ್ಲಿ ಈ ಜ್ಯೂರಿ ಸದಸ್ಯರ ವಿಶೇಷ ಸಂವಾದವೂ ನಡೆಯಲಿದ್ದು, ಪ್ರಾದೇಶಿಕ ಸಿನಿಮಾಗಳ ಭವಿಷ್ಯದ ಕುರಿತು ಗಂಭೀರ ಚರ್ಚೆ ಜರುಗಲಿದೆ.
Zee Power: ಹಳ್ಳಿ ಪವರ್ ಸೀಸನ್ 1 ಗ್ರ್ಯಾಂಡ್ ಫಿನಾಲೆ: ಐವರು ಫೈನಲಿಸ್ಟ್ಗಳಲ್ಲಿ ಯಾರಿಗೆ ಸಿಗಲಿದೆ ಗೆಲುವಿನ ಟ್ರೋಫಿ?
ಪ್ರಶಸ್ತಿ, ಪ್ರಸಾರದ ವಿವರ
ಮುಂಬೈನ ಅದ್ಧೂರಿ ಸಮಾರಂಭದಲ್ಲಿ ಎಂಟು ಭಾಷಾ ವಿಭಾಗಗಳ ವಿಜೇತರನ್ನು ಘೋಷಿಸಲಾಗುತ್ತಿದ್ದು, ಅತ್ಯುತ್ತಮ ಚಿತ್ರ, ನಟ, ಕಥೆ, ಛಾಯಾಗ್ರಹಣ, ಸಂಕಲನ, ಸಂಗೀತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಪ್ರತಿ ಭಾಷಾ ವಿಭಾಗದ ಒಬ್ಬ ವಿಜೇತರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ವಿಶೇಷವೆಂದರೆ, ಆಯ್ಕೆಯಾದ ಅತ್ಯುತ್ತಮ ಕಿರುಚಿತ್ರಗಳ ಪ್ರಸಾರ ಹಕ್ಕುಗಳನ್ನು ಜೀ ಸಂಸ್ಥೆ ಪಡೆದುಕೊಳ್ಳಲಿದ್ದು, ಇವು ZEE5 ಒಟಿಟಿ ವೇದಿಕೆ ಸೇರಿದಂತೆ ಜೀ ಕನ್ನಡ, ಜೀ ಟಿವಿ, ಜೀ ಮರಾಠಿ, ಜೀ ತೆಲುಗು, ಜೀ ತಮಿಳು ಸೇರಿದಂತೆ ಸಂಸ್ಥೆಯ ಎಲ್ಲಾ ಪ್ರಮುಖ ವಾಹಿನಿಗಳಲ್ಲಿ ಪ್ರಸಾರವಾಗಲಿವೆ. ಇದು ಯುವ ನಿರ್ದೇಶಕರಿಗೆ ಡಿಜಿಟಲ್ ಹಾಗೂ ಟೆಲಿವಿಷನ್ ಎರಡರಲ್ಲೂ ದೊಡ್ಡ ಮೈಲೇಜ್ ನೀಡಲಿದೆ.
ನಿರ್ದೇಶಕರು ಹೇಳಿದ್ದೇನು?
ಕಿರುಚಿತ್ರ ಸ್ಪರ್ಧೆಯ ಕುರಿತು ಮಾತನಾಡಿದ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ನಾಗ್ ಅಶ್ವಿನ್, "ಇಂದಿನ ತಂತ್ರಜ್ಞಾನದ ನೆರವಿನಿಂದ ಕಿರುಚಿತ್ರಗಳು ಮುಕ್ತ ಅಭಿವ್ಯಕ್ತಿಗೆ ರಾಷ್ಟ್ರ ಮಟ್ಟದ ವೇದಿಕೆ ಕಲ್ಪಿಸಿವೆ" ಎಂದರು. ಕನ್ನಡದ ನಿರ್ದೇಶಕ ಹೇಮಂತ್ ರಾವ್ ಮಾತನಾಡಿ, "ಹೊಸ ಪ್ರಯೋಗಗಳನ್ನು ಧೈರ್ಯದಿಂದ ಬೆಂಬಲಿಸುವುದರ ಮೇಲೆ ಚಿತ್ರರಂಗದ ಭವಿಷ್ಯ ನಿಂತಿದೆ" ಎಂದು ಅಭಿಪ್ರಾಯಪಟ್ಟರು.
ಜೀ ಕನ್ನಡ ಹಾಗೂ ಜೀ5 ನ ಚೀಫ್ ಚಾನೆಲ್ ಆಫೀಸರ್ ಮತ್ತು ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, "ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜೀ ಸಂಸ್ಥೆ ಈಗಾಗಲೇ 'ಜೀ ರೈಟರ್ಸ್ ರೂಮ್'ನಂತಹ ಹೆಜ್ಜೆ ಇಟ್ಟಿತ್ತು. ಇದೀಗ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಈ ಬಹುಭಾಷಾ ಕಿರುಚಿತ್ರ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಸೃಜನಾತ್ಮಕ ವೇದಿಕೆಯನ್ನು ಸೃಷ್ಟಿಸಲು ಮಾರ್ಗದರ್ಶನ ನೀಡಿದ ಜೀ ಸಂಸ್ಥೆಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಹಾಗೂ ಇಡೀ ತಂಡಕ್ಕೆ ನನ್ನ ಕೃತಜ್ಞತೆಗಳು" ಎಂದು ತಿಳಿಸಿದ್ದಾರೆ.