ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಈ ಹಿಂದೆ ಶಕೀಲಾ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಸದ್ದು ಮಾಡಿದ್ದರು. ಇದೀಗ ಅವರು ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಅಣಿಯಾಗಿದ್ದಾರೆ. ಹೌದು, ಅವರೀಗ 'ಜೈ ಹಿಂದ್ ಜೈ ಸಿಂಧ್' ಎಂಬ ಹಿಂದಿ ಚಿತ್ರವನ್ನು ಸದ್ದಿಲ್ಲದೇ ನಿರ್ದೇಶಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ಉತ್ತರಾಖಂಡದಲ್ಲಿ ಭರದಿಂದ ನಡೆಯುತ್ತಿದೆ.
ಮೋಷನ್ ಪೋಸ್ಟರ್ ರಿಲೀಸ್
ಡೆಹ್ರಾಡೂನ್ನಲ್ಲಿ 'ಜೈ ಹಿಂದ್ ಜೈ ಸಿಂಧ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭದ ಜೊತೆಗೆ ಚಿತ್ರದ ಮೊದಲ ಪತ್ರಿಕಾಗೋಷ್ಠಿಯು ಅದ್ದೂರಿಯಾಗಿ ನಡೆದಿದೆ. 'ಜೈ ಹಿಂದ್ ಜೈ ಸಿಂಧ್' ಚಿತ್ರವನ್ನು ಸ್ಯಾಮೀಸ್ ಎಂಟರ್ಟೇನ್ಮೆಂಟ್ ಸಂಸ್ಥೆಯಡಿ ಸ್ಯಾಮಿ ನನ್ವಾನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದ, ಉಪಾಸನಾ ಸಿಂಗ್, ಅಮಿತ್ ಬಹಲ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಇಂದ್ರಜಿತ್ ಲಂಕೇಶ್, ನಾಲ್ವರು ಹೊಸ ಪ್ರತಿಭೆಗಳನ್ನು ಬಾಲಿವುಡ್ ಚಿತ್ರರಂಗಕ್ಕೆ ಕಲಾವಿದರಾಗಿ ಪರಿಚಯಿಸುತ್ತಿದ್ದಾರೆ.
ದೇಶ ವಿಭಜನೆ ಹಿನ್ನೆಲೆಯಲ್ಲಿ ಲವ್ ಸ್ಟೋರಿ
"ಇದೊಂದು ಪ್ರೇಮಕಥೆಯಾಗಿದ್ದು, ಇದರಲ್ಲಿ ದೇಶ ವಿಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ದೇಶ ವಿಭಜನೆಯಾದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು, ಅದರಿಂದ ಹೊರಬಂದು, ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ" ಎಂದು ಮಾಹಿತಿ ಹಂಚಿಕೊಂಡರು ನಿರ್ದೇಶಕ ಇಂದ್ರಜಿತ್ ಲಂಕೇಶ್.
Kannada New Movie: ʼನಾಯಿ ಇದೆ ಎಚ್ಚರಿಕೆʼ ಚಿತ್ರದ ಟ್ರೈಲರ್, ಸಾಂಗ್ಸ್ ಬಿಡುಗಡೆ ಮಾಡಿದ ಇಂದ್ರಜಿತ್ ಲಂಕೇಶ್
ಅಂದು ದೀಪಿಕಾ ಪಡುಕೋಣೆಗೆ ಚಾನ್ಸ್ ಕೊಟ್ಟಿದ್ದ ಇಂದ್ರಜಿತ್
"ನನ್ನ ಮೊದಲ ಚಿತ್ರದಿಂದ ಇಲ್ಲಿವರೆಗೂ ಹಲವು ನಟ-ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನವನ್ನು ನಾನು ಮಾಡುತ್ತಲೇ ಬಂದಿದ್ದೇನೆ. ಗಾಯಕಿ ವಸುಂದರಾ ದಾಸ್ ಅವರನ್ನು 'ಲಂಕೇಶ್ ಪತ್ರಿಕೆ' ಚಿತ್ರದ ಮೂಲಕ ನಾಯಕಿಯನ್ನಾಗಿ ನಾನು ಪರಿಚಯಿಸಿದೆ. ದೀಪಿಕಾ ಪಡುಕೋಣೆ ಅವರನ್ನು 'ಐಶ್ವರ್ಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದೆ. ಈಗ 'ಜೈ ಹಿಂದ್ ಜೈ ಸಿಂಧ್' ಚಿತ್ರದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ" ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. 'ಜೈ ಹಿಂದ್ ಜೈ ಸಿಂಧ್' ಸಿನಿಮಾದ ಸದ್ಯದಲ್ಲೇ ಶೂಟಿಂಗ್ ಮುಗಿಯಲಿದ್ದು, 2026ರ ಮಧ್ಯಭಾಗದ ಹೊತ್ತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಆಗಲೇ ಸಿದ್ದತೆಗಳು ನಡೆಯುತ್ತಿವೆ.