'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋನ ಮೊದಲ ವಾರದಲ್ಲೇ ಕೆಲ ಸ್ಪರ್ಧಿಗಳಿಗೆ ನಡುಕ ಹುಟ್ಟಿಸುವಂತಹ ದೊಡ್ಡ ತಿರುವು ನೀಡಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಕಠಿಣ ಹಾಗೂ ವಿಚಿತ್ರ ನಿಯಮ ಜಾರಿಯಾಗಿದ್ದು, ಶೋ ಆರಂಭವಾಗಿ 5 ದಿನಗಳೇ ಕಳೆದರೂ ಕೆಲ ಸ್ಪರ್ಧಿಗಳಿಗೆ ಮನೆಯೊಳಗೆ ಕಾಲಿಡುವ ಭಾಗ್ಯವೇ ಸಿಕ್ಕಿಲ್ಲ.
ಮನೆಯ ಬದಲಿಗೆ ವಿಮಾನದೊಳಗೆ ವಾಸ್ತವ್ಯ ಹೂಡಿರುವ ಸ್ಪರ್ಧಿಗಳು ಇದೀಗ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎನ್ನುವಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಈ ವಿಮಾನದಲ್ಲಿರುವ ಎಲ್ಲ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದು, ಅವರಲ್ಲಿ ಒಬ್ಬ ನತದೃಷ್ಟ ಸ್ಪರ್ಧಿ ಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಮೊದಲೇ ವಿಮಾನದಿಂದಲೇ ಎಲಿಮಿನೇಟ್ ಆಗೋದು ಖಚಿತವಾಗಿದೆ.
ವಿಮಾನದಲ್ಲಿ ಸ್ಪರ್ಧಿಗಳಿಗೆ ಸಂಕಷ್ಟ
ಈ ವಿಮಾನದಲ್ಲಿರುವ ಸ್ಪರ್ಧಿಗಳ ಸ್ಥಿತಿ ನಿಜಕ್ಕೂ ಶೋಚನೀಯವಾಗಿದ್ದು, ಅವರಿಗೆ ಅಧಿಕೃತವಾಗಿ ಬಿಗ್ ಬಾಸ್ ಮನೆಯ ಪ್ರವೇಶ ನಿರಾಕರಿಸಲಾಗಿದೆ. ಟಾಸ್ಕ್ ಆಡುವ ಸಂದರ್ಭದಲ್ಲಿ ಮಾತ್ರ ಮನೆಯ ಹೊರಗಿನ ಆವರಣಕ್ಕೆ ಬರಲು ಅವಕಾಶವಿದ್ದು, ಟಾಸ್ಕ್ ಮುಗಿದ ತಕ್ಷಣವೇ ಪುನಃ ವಿಮಾನದ ಕಿರಿದಾದ ಜಾಗಕ್ಕೆ ಮರಳಬೇಕಿದೆ. ಶೌಚಾಲಯ ಬಳಕೆಗೆ ಕೇವಲ ಆಕ್ಟಿವಿಟಿ ಏರಿಯಾದ ವಾಶ್ರೂಮ್ ಬಳಸುವ ಅನಿವಾರ್ಯತೆ ಇರಲಿದ್ದು, ರಾತ್ರಿ ವೇಳೆ ವಿಮಾನದ ಸೀಟುಗಳಲ್ಲೇ ಕುಳಿತು, ನಿದ್ದೆಗೆಟ್ಟು ಕಾಲ ಕಳೆಯುತ್ತಿದ್ದಾರೆ.
ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ?
ಪ್ರಸ್ತುತ ಮೊದಲ ವಾರದಲ್ಲೇ ಬಿಗ್ ಬಾಸ್ನಿಂದ ಹೊರಹೋಗಲು ಪ್ರಥಮಾ ಪ್ರಸಾದ್, ಸೌಂದರ್ಯ ಶೆಟ್ಟಿ, ವೈಷ್ಣವಿ ಕೌಂಡಿನ್ಯ, ಕಿರಣ್ ಶಾಸ್ತ್ರೀ, ಓಂ ಪ್ರಕಾಶ್ ರಾವ್, ಧನುಷ್, ಆಸಿಯಾ ಫಿರ್ದೋಸ್, ಅವಿನಾಶ್ ಶಠಮರ್ಷಣ್ ಹಾಗೂ ಮಹಾಕವಿ ಮಂಜ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ವಿಮಾನದೊಳಗೆ ಇರುವ ಸ್ಪರ್ಧಿಗಳಲ್ಲಿ ಒಬ್ಬರು ಮನೆಯ ಮುಖ್ಯ ದ್ವಾರವನ್ನೂ ದಾಟದೆ ನೇರವಾಗಿ ವಿಮಾನದಿಂದಲೇ ಎಕ್ಸಿಟ್ ಆಗಲಿದ್ದಾರೆ. ಸಾಮಾನ್ಯವಾಗಿ ಸ್ಪರ್ಧಿಗಳು ಮುಖ್ಯ ಬಾಗಿಲಿನ ಮೂಲಕ ಹೊರನಡೆಯುವುದನ್ನು ನೋಡಿದ್ದ ಪ್ರೇಕ್ಷಕರಿಗೆ, ಮನೆಯ ಒಳಾಂಗಣವನ್ನೇ ನೋಡದೆ ಹೊರಹೋಗಲಿರುವ ಈ ‘ಫ್ಲೈಟ್ ಸರ್ಪ್ರೈಸ್’ ಅಚ್ಚರಿ ಮೂಡಿಸಿದೆ.
ಭಾನುವಾರ ಸಿಗಲಿದೆ ಉತ್ತರ!
ಯಾವುದೇ ಸೀಸನ್ನ ಮೊದಲ ವಾರದಲ್ಲಿ ಸ್ಪರ್ಧಿಗಳು ಪರಸ್ಪರ ಪರಿಚಯ ಮಾಡಿಕೊಂಡು ಆಟದ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಈ ಬಾರಿ ಆರಂಭದಲ್ಲೇ ಇಂತಹದೊಂದು ಅನಿರೀಕ್ಷಿತ ಪರೀಕ್ಷೆ ಎದುರಾಗಿದೆ. ಭಾನುವಾರ ಪ್ರಸಾರವಾಗಲಿರುವ ಕಿಚ್ಚ ಸುದೀಪ್ ಅವರ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಈ ರಹಸ್ಯ ಅಧಿಕೃತವಾಗಿ ಬಯಲಾಗಲಿದ್ದು, ಯಾರ ಜರ್ನಿ ಮನೆಯ ಹೊಸ್ತಿಲು ತುಳಿಯುವ ಮುನ್ನವೇ ವಿಮಾನದಲ್ಲೇ ಅಂತ್ಯವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.