ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾಗಳ ಸಂಖ್ಯೆ ತೀರಾ ವಿರಳ. ಇಂತಹ ಅಪರೂಪದ ಸಿನಿಮಾಗಳ ಸಾಲಿಗೆ ಈಗ 'ಪೊಲೀಸ್ ಕಂಪ್ಲೈಂಟ್' ಎಂಬ ಹೊಸ ಚಿತ್ರ ಸೇರ್ಪಡೆಯಾಗುತ್ತಿದೆ. ಇತ್ತೀಚೆಗಷ್ಟೇ ‘ಮ್ಯಾಕ್ಸ್’ ಚಿತ್ರದಲ್ಲಿ ಮಿಂಚಿದ್ದ ಬಹುಭಾಷಾ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ಕನ್ನಡದ 'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡುಗಳು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಜೂನ್ 12ರಂದು ಕರ್ನಾಟಕದಾದ್ಯಂತ ಸುಮಾರು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣುತ್ತಿದೆ.
ಕರ್ಮ ಸಿದ್ಧಾಂತದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ
ಕನ್ನಡದಲ್ಲಿ ಈ ಹಿಂದೆ ಪೂಜಾಗಾಂಧಿ ಅಭಿನಯದ ‘ಅನು’, ‘ದಂಡು’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ, ಸುಮಾರು ಹತ್ತು ವರ್ಷಗಳ ನಂತರ ‘ಪೊಲೀಸ್ ಕಂಪ್ಲೈಂಟ್’ ಮೂಲಕ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಎಂ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್ ಬ್ಯಾನರ್ನಡಿ ಈ ಸಿನಿಮಾ ನಿರ್ಮಾಣವಾಗಿದೆ.
ಥ್ರಿಲ್ಲರ್ ಮಂಜು ನಿರ್ದೇಶನದ ಸಿನಿಮಾದ ʻಡೆಡ್ಲಿ ಕಿಲ್ಲರ್ʼ ಸಿನಿಮಾಕ್ಕೆ ಸಾಥ್ ನೀಡಿದ ನಟಿ ರಾಗಿಣಿ ದ್ವಿವೇದಿ
"ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ವಿಭಿನ್ನ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಎರಡೂ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಚಿತ್ರದಲ್ಲಿದ್ದಾರೆ" ಎಂದು ನಿರ್ದೇಶಕ ಸಂಜೀವ ಮೆಗೋಟಿ ಮಾಹಿತಿ ನೀಡಿದ್ದಾರೆ.
ತಾಯಿ-ಮಗುವಿನ ಸೆಂಟಿಮೆಂಟ್ನಲ್ಲಿ ರಾಗಿಣಿ
ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ರಾಗಿಣಿ ದ್ವಿವೇದಿ, "ನನ್ನ ಕೆರಿಯರ್ನಲ್ಲೇ ಇದೊಂದು ವಿಭಿನ್ನ ಸಿನಿಮಾ. ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಮನಸ್ಸು ಮುಟ್ಟುವ ಎಮೋಷನ್ಸ್ ಕೂಡ ಸಿನಿಮಾದಲ್ಲಿದೆ" ಎಂದಿದ್ದಾರೆ.
ಮತ್ತೊಬ್ಬ ನಾಯಕಿ ವರಲಕ್ಷ್ಮೀ ಶರತ್ ಕುಮಾರ್ ಅವರು ಈ ಚಿತ್ರದಲ್ಲಿ ಪವರ್ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಇದು ಇಂದಿನ ಜನರೇಷನ್ ಆಡಿಯನ್ಸ್ಗೆ ಬಹುಬೇಗ ಕನೆಕ್ಟ್ ಆಗುವ ಸಿನಿಮಾ. ಸಮಾಜಕ್ಕೊಂದು ಉತ್ತಮ ಸಂದೇಶದ ಜೊತೆಗೆ ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ನಂತಹ ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲಿದೆ" ಎಂದು ವರಲಕ್ಷ್ಮೀ ಹೇಳಿದ್ದಾರೆ.
ನಾಯಕನಾಗಿ ಕೃಷ್ಣಸಾಯಿ ಎಂಟ್ರಿ
ಈ ಚಿತ್ರದ ಮೂಲಕ ತೆಲುಗು ನಟ ಕೃಷ್ಣಸಾಯಿ ಕನ್ನಡಕ್ಕೆ ನಾಯಕ ನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಕಥೆ ಮತ್ತು ತಮ್ಮ ಪಾತ್ರ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ನಾಯಕನಾಗಿ ನವೀನ್ ಚಂದ್ರ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಆರೋಹಣ ಸುಧೀಂದ್ರ ಸಂಗೀತ ಸಂಯೋಜಿಸಿದ್ದು, ಹರೀಶ್ ಸೊಂಡೇಕೊಪ್ಪ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.