ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ರಾಮಾಯಣ' (Ramayana: Part 1) ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರನ್ನು ಒಟ್ಟಿಗೆ ಬೆಳ್ಳಿತೆರೆ ಮೇಲೆ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಇಬ್ಬರೂ ಬಿಗ್ ಸ್ಟಾರ್ಗಳು ಇದುವರೆಗೆ ತಮ್ಮ ಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ಒಟ್ಟಿಗೆ ಮಾಡಿಲ್ಲ ಎಂಬ ಸತ್ಯ ಹೊರಬಿದ್ದಿದೆ. 'ಸ್ಯಾನ್ ಡಿಯೋಗೋ ಕಾಮಿಕ್-ಕಾನ್' ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿರುವ ರಣಬೀರ್ ಕಪೂರ್, ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಇನ್ನೂ ಬಾಕಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಲೈಮ್ಯಾಕ್ಸ್ನಲ್ಲಿ ರಣಬೀರ್-ಯಶ್ ಮುಖಾಮುಖಿ
ಚಿತ್ರದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಹಂಚಿಕೊಂಡ ರಣಬೀರ್, "ಶ್ರೀರಾಮ ಮತ್ತು ರಾವಣ ಚಿತ್ರದ ಕೊನೆಯಲ್ಲಿ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ, ಮಧ್ಯದಲ್ಲೂ ಒಂದು ಭೇಟಿ ಇರಬಹುದು. ಆದರೆ ನಾವು ಆ ಭಾಗವನ್ನು ಇನ್ನೂ ಶೂಟ್ ಮಾಡಿಲ್ಲ. ಹಾಗಾಗಿ ನಮಗೆ ಒಟ್ಟಿಗೆ ಕೆಲಸ ಮಾಡುವ ಅವಕಾಶ ಇನ್ನೂ ಸಿಕ್ಕಿಲ್ಲ" ಎಂದಿದ್ದಾರೆ.
ಅಲ್ಲದೆ ಯಶ್ ಅಭಿನಯವನ್ನು ಶ್ಲಾಘಿಸಿದ ರಣಬೀರ್, "ಯಶ್ ಅವರ ಕೆಲಸಕ್ಕೆ ನಾನು ದೊಡ್ಡ ಅಭಿಮಾನಿ. ರಾವಣನ ಪಾತ್ರಕ್ಕೆ ಅವರಂತಹ ಕಟಿಬದ್ಧತೆ ಮತ್ತು ತಾರಾಪಟ್ಟವಿರುವ ವ್ಯಕ್ತಿಯೇ ಬೇಕಿತ್ತು. ಸಾಂಪ್ರದಾಯಿಕವಾಗಿ ನೋಡಿಕೊಂಡು ಬಂದ ರಾವಣನ ಕಲ್ಪನೆಗೆ ಹೊರತಾಗಿ ಯಶ್ ತಮ್ಮದೇ ಆದ ಸ್ವ್ಯಾಗ್, ಔರಾ ಮತ್ತು ಪ್ರಾಮಾಣಿಕತೆಯಿಂದ ಈ ಪಾತ್ರಕ್ಕೆ ಮರುಜೀವ ನೀಡಿದ್ದಾರೆ" ಎಂದು ಹೊಗಳಿದ್ದಾರೆ.
ಕಥೆ ಹೇಳುವುದೇ ನಮ್ಮ ಮುಖ್ಯ ಉದ್ದೇಶ: ಯಶ್
ಈ ಬೃಹತ್ ಯೋಜನೆಯ ಸವಾಲುಗಳ ಬಗ್ಗೆ ಮಾತನಾಡಿದ ನಟ ಯಶ್, "ನಿಮ್ಮಲ್ಲಿ ಸರಿಯಾದ ಉದ್ದೇಶ ಮತ್ತು ಉತ್ತಮ ತಂಡವಿದ್ದರೆ ಎಲ್ಲವೂ ಸರಿಯಾಗುತ್ತದೆ. ತಾಂತ್ರಿಕವಾಗಿ, ಮೇಕಪ್ ಮತ್ತು ಲುಕ್ಸ್ ವಿಷಯದಲ್ಲಿ ಇದು ಸಾಕಷ್ಟು ಶ್ರಮ ಬೇಡುವ ಕೆಲಸವಾಗಿತ್ತು. ಹಲವು ಸವಾಲುಗಳಿದ್ದರೂ ಕಥೆಯನ್ನು ಅತ್ಯಂತ ಪ್ರಾಮಾಣಿಕವಾಗಿ ತರಲು ನಮ್ಮೆಲ್ಲ ಪ್ರಯತ್ನವನ್ನು ಹಾಕಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Ramayana trailer: ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು
ನಿಲೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಮತ್ತು ಸೀತಾದೇವಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದು, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಕೂಡ ಅಭಿನಯಿಸುತ್ತಿದ್ದಾರೆ. 'ರಾಮಾಯಣ: ಪಾರ್ಟ್ 1' ಸಿನಿಮಾವು ದೀಪಾವಳಿಗೆ ಬಿಡುಗಡೆಯಾಗಲು ನಿಗದಿಯಾಗಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.