ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌ ಆಗಿ 2 ವರ್ಷ; ಪರಪ್ಪನ ಅಗ್ರಹಾರದಲ್ಲಿ ಮೌನಕ್ಕೆ ಜಾರಿದ ʻದಾಸʼ, ಆತ್ಮಕಥೆ ಬರೆಯೋಕೆ ಶುರು ಮಾಡಿದ ಪವಿತ್ರಾ ಗೌಡ

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಂಧನವಾಗಿ ಇಂದಿಗೆ (ಜೂನ್‌ 11) ಸರಿಯಾಗಿ ಎರಡು ವರ್ಷ ಕಳೆದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ವಜಾಗೊಂಡ ಬಳಿಕ ನಿರಾಶರಾಗಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿ ಪುಸ್ತಕ ಓದುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ (Actor Darshan) ಸೇರಿದಂತೆ ಪ್ರಮುಖ ಆರೋಪಿಗಳು ಬಂಧನವಾಗಿ ಇಂದಿಗೆ (ಜೂನ್ 11) ಸರಿಯಾಗಿ ಎರಡು ವರ್ಷಗಳು ಕಳೆದಿವೆ. 2024ರ ಜೂನ್ 11ರಂದು ಮೈಸೂರಿನ ಹೋಟೆಲ್‌ನಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಎರಡು ವರ್ಷಗಳ ಅವಧಿಯಲ್ಲಿ ಒಮ್ಮೆ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ದರ್ಶನ್, ತದನಂತರ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ.

ಜೈಲಿನಲ್ಲಿ ಸೈಲೆಂಟ್ ಆದ ದರ್ಶನ್

ಈಚೆಗೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಕನಿಷ್ಠ 1 ವರ್ಷವಾದರೂ ತಮಗೆ ಜಾಮೀನು ಸಿಗುವುದು ಕಷ್ಟ ಎಂಬ ಸತ್ಯ ಅರಿತಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಯಾರ ಜೊತೆಯೂ ಹೆಚ್ಚಾಗಿ ಮಾತನಾಡದ ಅವರು ‘ತಾನಾಯ್ತು, ತನ್ನ ಪುಸ್ತಕವಾಯ್ತು’ ಎಂದು ಕಾಲ ಕಳೆಯುತ್ತಿದ್ದಾರೆ. ವಾರಕ್ಕೊಮ್ಮೆ ಜೈಲಾಧಿಕಾರಿಗಳು ನೀಡುವ 3-4 ಪುಸ್ತಕಗಳನ್ನು ಪಡೆದು, ದರ್ಶನ್‌ ಸದಾ ಓದಿನಲ್ಲೇ ಮುಳುಗಿರುತ್ತಾರೆ ಎನ್ನಲಾಗಿದೆ.

Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ

ಒಂದೆಡೆ ದರ್ಶನ್ ಪುಸ್ತಕ ಓದಿನಲ್ಲಿ ಮಗ್ನವಾಗಿದ್ದರೆ. ಪ್ರಕರಣದ ಎ-1 ಆರೋಪಿ ಆಗಿರುವ ಪವಿತ್ರಾ ಗೌಡ ಜೈಲಿನಲ್ಲಿ ಕೆಲಸ ಆರಂಭಿಸಿದ್ದಾರೆ. ಕಂಬಿ ಎಣಿಸುತ್ತಲೇ ಅವರು ತಮ್ಮ ಆತ್ಮಚರಿತ್ರೆ ಬರೆಯಲು ಮುಂದಾಗಿದ್ದಾರೆ. ಜೈಲಾಧಿಕಾರಿಗಳಿಂದ ಪ್ರತಿದಿನ ಬಿಳಿ ಹಾಳೆಗಳನ್ನು ಪಡೆದು, ಪೆನ್ಸಿಲ್ ಮೂಲಕವೇ ತಮ್ಮ ಜೀವನದ ಕಥೆ, ತಾನ್ಯಾರು ಮತ್ತು ತಾನು ಮಾಡಿದ್ದೇನು ಎಂಬುದನ್ನು ದಾಖಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಶ್ವ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬಾರದೆ, ಕಳೆದ ಒಂದು ತಿಂಗಳಿನಿಂದ ಪವಿತ್ರಾ ಗೌಡ ಕೇವಲ ಆತ್ಮಚರಿತ್ರೆ ಬರೆಯುವುದರಲ್ಲೇ ಮಗ್ನರಾಗಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿವೆ.

ಐವರು ಆರೋಪಿಗಳಿಗೆ ಬಿಗ್ ರಿಲೀಫ್

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸಹಚರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಈಗಾಗಲೇ ಜಾಮೀನು ಪಡೆದಿರುವ ಐವರು ಆರೋಪಿಗಳ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಆದರೆ, ಈ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಪ್ರಾಸಿಕ್ಯೂಷನ್ ಮನವಿಯನ್ನು ವಜಾಗೊಳಿಸುವ ಮೂಲಕ ಐವರು ಆರೋಪಿಗಳ ಜಾಮೀನನ್ನು ಎತ್ತಿಹಿಡಿದಿದೆ.