‘ಜಸ್ಟ್ ಮದ್ವೇಲಿ’ ಮತ್ತು ‘ರಾಜಣ್ಣನ ಮಗ’ ಸಿನಿಮಾಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು ಇದೀಗ ಮೊದಲ ಬಾರಿಗೆ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಆಕರ್ಷಕ ಟೀಸರ್ ಮತ್ತು ‘ಬಾಯ್ಸ್ ಆಂಥೆಮ್’ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆಯಾಯಿತು.
ಮಾರಿಗೋಲ್ಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಉಜ್ವಲ ನಾಗರಾಜ ಜಲಗೆರೆ ಈ ಚಿತ್ರವನ್ನು ನಿರ್ಮಿಸಿದ್ದು, ಹರೀಶ್ ಜಲಗೆರೆ ಅವರ ಹಿಂದಿನ ಚಿತ್ರಗಳನ್ನು ನಿರ್ದೇಶಿಸಿದ್ದ ಅವರ ಆಪ್ತ ಸ್ನೇಹಿತ ಕೋಲಾರ ಸೀನು ಈ ಬಾರಿ ಸಹ-ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ.
ಕಿಚ್ಚ ಸುದೀಪ್ ಅವರಿಂದ ಟ್ರೈಲರ್ ಲಾಂಚ್
ಈ ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ ಹರೀಶ್ ಜಲಗೆರೆ, "ಇದೊಂದು ಔಟ್ ಅಂಡ್ ಔಟ್ ಹಾರರ್ ಕಾಮಿಡಿ ಜಾನರ್ ಚಿತ್ರವಾಗಿದ್ದರೂ, ಕೊನೆಯಲ್ಲಿ ಒಂದು ಉತ್ತಮ ಸಂದೇಶವಿದೆ. ತರಲೆ-ತುಂಟಾಟ ಮಾಡುವ ಕೆಲವು ಹುಡುಗರು ಅನಿವಾರ್ಯವಾಗಿ ದೆವ್ವದ ಜೊತೆ ಹೇಗೆ ಕನೆಕ್ಟ್ ಆಗುತ್ತಾರೆ, ಹುಡುಗರಲ್ಲಿರುವ ಕೆಲವು ಅವಶ್ಯಕತೆಗಳಿಗೆ ಕಾಂಪ್ರಮೈಸ್ ಆಗದಿದ್ದರೆ ಏನಾಗುತ್ತದೆ ಎಂಬುದನ್ನು ಹಾಸ್ಯಭರಿತವಾಗಿ ಹೇಳಿದ್ದೇವೆ. ಸಿನಿಮಾ ಈಗಾಗಲೇ ಸೆನ್ಸಾರ್ ಅಂಗಳದಲ್ಲಿದ್ದು, ಜುಲೈ 10ರಂದು ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಸಜ್ಜಾಗಿದ್ದೇವೆ. ಮುಂದಿನ 15 ದಿನಗಳಲ್ಲಿ ಚಿತ್ರದ ಐಟಂ ಸಾಂಗ್ ರಿಲೀಸ್ ಮಾಡಿ, ಜುಲೈ ಮೊದಲ ವಾರದಲ್ಲಿ ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಅವರ ಕೈಯಿಂದ ನಮ್ಮ ಚಿತ್ರದ ಅಧಿಕೃತ ಟ್ರೈಲರ್ ಅನ್ನು ಬಿಡುಗಡೆ ಮಾಡಿಸಲಿದ್ದೇವೆ" ಎಂದು ಮಾಹಿತಿ ನೀಡಿದರು.
Kiccha Sudeep: ಮುಂದಿನ ಯೋಜನೆಗಳ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಘೋಷಣೆ; ಫ್ಯಾನ್ಸ್ ಖುಷ್!
ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ?
ವಿಶೇಷವೆಂದರೆ ಈ ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯ ಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ ಮತ್ತು ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಬಣ್ಣ ಹಚ್ಚಿದ್ದಾರೆ. ನಟ ರಾಜೀವ್ ರೆಡ್ಡಿ ಇಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮಾಡೆಲಿಂಗ್ ಲೋಕದಿಂದ ಬಂದ ನಟಿ ನಕ್ಷತ್ರ ನಾಯಕಿಯಾಗಿ ನಟಿಸಿದ್ದಾರೆ.
Kichcha Sudeep: ಕರ್ನಾಟಕಕ್ಕೆ ಅವಮಾನ ಮಾಡಿದ ಸ್ಥಳದಲ್ಲೇ ಕನ್ನಡ ಧ್ವಜ ಹಾರಿಸಿದ ಕಿಚ್ಚ ಸುದೀಪ್!
ಚಿತ್ರಕ್ಕೆ ಲೋಕಿ ತವಸ್ಯ ಅವರ ಸಂಗೀತ ನಿರ್ದೇಶನವಿದ್ದು, ಎಂ.ಎಸ್. ತ್ಯಾಗರಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಮತ್ತು ಕಾರ್ತೀಕ್ ಈಶ್ವರಚಾರಿ ಅವರ ಸಂಕಲನ ಚಿತ್ರಕ್ಕಿದೆ. ಖ್ಯಾತ ಗಾಯಕರಾದ ಆಂಟನಿ ದಾಸನ್ ಮತ್ತು ಐಶ್ವರ್ಯ ರಂಗರಾಜನ್ ಧ್ವನಿಯಲ್ಲಿ ಮೂಡಿಬಂದಿರುವ ಚಿತ್ರದ ಮತ್ತೊಂದು ಪ್ರಮುಖ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಸಂಗೀತ ನಿರ್ದೇಶಕ ಲೋಕಿ ತವಸ್ಯ ತಿಳಿಸಿದ್ದಾರೆ.
ಸಹ-ನಿರ್ದೇಶಕ ಕೋಲಾರ ಸೀನು ಸೇರಿದಂತೆ ಚಿತ್ರತಂಡದ ಯುವ ಕಲಾವಿದರು ಶೂಟಿಂಗ್ ದಿನಗಳ ತಮ್ಮ ರೋಚಕ ಅನುಭವಗಳನ್ನು ಹಂಚಿಕೊಂಡು ಚಿತ್ರದ ಗೆಲುವಿಗೆ ವಿಶ್ವಾಸ ವ್ಯಕ್ತಪಡಿಸಿದರು.