ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ ಲಿಟಲ್ ಚಾಂಪ್ಸ್' ಫಿನಾಲೆಯಲ್ಲಿ ಗೆಲುವುದು ಯಾರು ಎಂಬ ಕುತೂಹಲಕ್ಕೆ ಅದ್ದೂರಿ ತೆರೆಬಿದ್ದಿದ್ದು, ಪ್ರತಿಭಾವಂತ ಗಾಯಕ ಅಶ್ಮಿತ್ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದ ತಂಡದಲ್ಲಿದ್ದ ಅಶ್ಮಿತ್ಗೆ ಪ್ರಶಸ್ತಿ ಟ್ರೋಫಿ ಜೊತೆಗೆ 20 ಲಕ್ಷ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ರೋಚಕ ಫಿನಾಲೆ ಕದನ
ತೀವ್ರ ಪೈಪೋಟಿಯಿಂದ ಕೂಡಿದ್ದ ಅಂತಿಮ ಹಣಾಹಣಿಯಲ್ಲಿ ಮಂಗಳೂರಿನ ಮಿಮಿಕ್ರಿ ಮಾಸ್ಟರ್ ಗಾಯಕ ಅಚಿಂತ್ಯ ರೈ ಮೊದಲ ರನ್ನರ್ಅಪ್ ಸ್ಥಾನ ಪಡೆದುಕೊಂಡಿದ್ದು, ಟ್ರೋಫಿ ಜತೆಗೆ 15 ಲಕ್ಷ ರೂ. ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಎರಡು ಹಂತಗಳಲ್ಲಿ ನಡೆದ ಸಂಗೀತ ಮಹಾಸಂಗ್ರಾಮದಲ್ಲಿ ಅಂತಿಮವಾಗಿ ಅಶ್ಮಿತ್ ಹಾಗೂ ಅಚಿಂತ್ಯ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಬಿರುಸಿನ ಮುಖಾಮುಖಿ ನಡೆಯಿತು. ತೀರ್ಪುಗಾರರು ಮತ್ತು ವೀಕ್ಷಕರ ಮನಗೆದ್ದ ಅಶ್ಮಿತ್ ಅಂತಿಮವಾಗಿ ಜಯಭೇರಿ ಬಾರಿಸಿದರು.
Sa ri Ga Ma Pa: ಸ್ವರ ಸಂಗ್ರಾಮದ ರಣರಂಗದಲ್ಲಿ ವಿಜೇತ ಪಟ್ಟಕ್ಕಾಗಿ ಲಿಟಲ್ ಚಾಂಪ್ಸ್ ಮಹಾ ಕದನ! ಯಾರಿಗೆ ಕಿರೀಟ?
ಫಿನಾಲೆ ತಲುಪಿದ್ದ 6 ಅಪ್ರತಿಮ ಪ್ರತಿಭೆಗಳು
ಗಾಯನದ ಜೊತೆಗೆ ವಯೊಲಿನ್ ನಾದಸುಧೆ ಹರಿಸುವ ಬಹುಮುಖ ಮಂಗಳೂರಿನ ಪ್ರತಿಭೆ ಅಶ್ಮಿತ್, ಮಿಮಿಕ್ರಿ ಮತ್ತು ಗಾಯನ ಎರಡರಲ್ಲೂ ಸೈ ಎನಿಸಿಕೊಂಡ ಮಂಗಳೂರಿನ ಬಾಲಪ್ರತಿಭೆ ಅಚಿಂತ್ಯ ರೈ, ಉತ್ತರ ಕರ್ನಾಟಕದ ಅಪ್ಪಟ ಜಾನಪದ ಹಾಗೂ ಶಾಸ್ತ್ರೀಯ ಸೊಗಡಿನ ಕಂಠವನ್ನು ಹೊಂದಿರುವ ಮಹನ್ಯ ಗರು ಪಾಟೀಲ್, ತಾತ ಖ್ಯಾತ ನಟ ಶ್ರೀನಿವಾಸಮೂರ್ತಿ ಹಾಗೂ ತಂದೆ ನವೀನ್ ಕೃಷ್ಣ ಅವರ ಕಲಾ ಪರಂಪರೆ ಇದ್ದರೂ ಸ್ವಂತ ಪರಿಶ್ರಮದಿಂದ ಮಿಂಚಿದ ಪ್ರತಿಭೆ ಹರುಷ್ ನವೀನ್ಕೃಷ್ಣ, ವಿಭಿನ್ನ ಧ್ವನಿ ಹಾಗೂ ವಿಶಿಷ್ಟ ಗಾಯನದ 'ಚಿನ್ನದ ಕಂಠ' ಎನಿಸಿಕೊಂಡ ಜಯಲಕ್ಷ್ಮಿ, ಶಾಸ್ತ್ರೀಯ ಗಾಯನದ ಮೂಲಕ ವಿದ್ವತ್ ಪ್ರದರ್ಶಿಸಿದ ಬೆಂಗಳೂರಿನ ಪ್ರತಿಭಾವಂತ ಅವ್ಯುಕ್ತ್ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು, ಅಂತಿಮವಾಗಿ ಅಶ್ಮಿತ್ ಗೆಲುವಿನ ನಗೆ ಬೀರಿದ್ದಾರೆ.