39 ವರ್ಷಗಳ ಹಿಂದೆ ʻಆನಂದ್ʼ ಸಿನಿಮಾಕ್ಕೆ ಖರ್ಷಾಗಿದ್ದೆಷ್ಟು? ಬಾಕ್ಸ್ ಆಫೀಸ್ ಗಳಿಕೆ ಎಷ್ಟು? ಶಿವಣ್ಣ ಕೊಟ್ಟಿದ್ರು ಪಕ್ಕಾ ಲೆಕ್ಕ!
Anand Movie Box Office: ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ 39 ವರ್ಷ ಪೂರೈಸಿರುವ ಶಿವರಾಜ್ಕುಮಾರ್, ತಮ್ಮ ಮೊದಲ ಸಿನಿಮಾ 'ಆನಂದ್' ಕುರಿತು ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದ್ದಾರೆ. 1986 ರಲ್ಲಿ ತೆರೆಕಂಡ ಈ ಸಿನಿಮಾದ ಬಜೆಟ್ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಶಿವಣ್ಣ ಮಾಹಿತಿ ನೀಡಿದ್ದ ವಿಡಿಯೋವೊಂದು ವೈರಲ್ ಆಗಿದೆ.
-
ʻಕರುನಾಡ ಚಕ್ರವರ್ತಿʼ ಶಿವರಾಜ್ಕುಮಾರ್ ಅವರು ಸ್ಯಾಂಡಲ್ವುಡ್ಗೆ ಹೀರೋ ಆಗಿ ಕಾಲಿಟ್ಟು ಭರ್ತಿ 39 ವರ್ಷಗಳಾಗಿವೆ. 1986ರಲ್ಲಿ ತೆರೆಕಂಡ ʻಆನಂದ್ʼ ಸಿನಿಮಾದ ಮೂಲಕ ಶಿವಣ್ಣ ಹೀರೋ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮೊದಲ ಚಿತ್ರದಲ್ಲೇ ಅತ್ಯುದ್ಭುತ ಗೆಲುವನ್ನು ಪಡೆದುಕೊಂಡ ಶಿವಣ್ಣ, 39 ವರ್ಷಗಳಾದರೂ ಇಂದಿಗೂ ಅದೇ ಸಕ್ಸಸ್ ರೇಟ್, ಅದೇ ಎನರ್ಜಿಯೊಂದಿಗೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅಂದಹಾಗೆ, ʻಆನಂದ್ʼ ಚಿತ್ರದ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆನಂದ್ ಮೂಲಕ ಬಂದ ಶಿವಣ್ಣ
ಡಾ. ರಾಜ್ಕುಮಾರ್ ಅವರ ಹಿರಿಮಗನಾದ ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶ ನೀಡುತ್ತಿದ್ದಾರೆ ಎಂದಾಗ, ಅವರ ಚೊಚ್ಚಲ ಚಿತ್ರದ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡವರು ಸಿಂಗೀತಂ ಶ್ರೀನಿವಾಸರಾವ್! ಅದಾಗಲೇ ಅಣ್ಣಾವ್ರಿಗೆ ಹಿಟ್ ಸಿನಿಮಾಗಳನ್ನು ನೀಡಿದ್ದ ಸಿಂಗೀತಂ, ಶಿವಣ್ಣನಿಗೆ ಒಂದು ಉತ್ತಮ ಸಿನಿಮಾವನ್ನೇ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ಆನಂದ್ ಚಿತ್ರದ ಅವಕಾಶವನ್ನು ಅವರಿಗೆ ನೀಡಲಾಯಿತು. ಆ ನಿರೀಕ್ಷೆಯನ್ನು ಸಿಂಗೀತಂ ಉಳಿಸಿಕೊಂಡರು. ಚಿ. ಉದಯ್ ಶಂಕರ್ ಅವರ ಜೊತೆಗೆ ಸೇರಿಕೊಂಡು ಬರೆದ ಸ್ಕ್ರಿಪ್ಟ್ಗೆ ಅಚ್ಚುಕಟ್ಟಾದ ನಿರ್ದೇಶನ ಮಾಡಿದ್ದರು ಸಿಂಗೀತಂ ಶ್ರೀನಿವಾಸರಾವ್. ಶಿವಣ್ಣನ ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಇದರ ಬಜೆಟ್ ಎಷ್ಟು? ಗಳಿಕೆ ಎಷ್ಟು?
ಈಚೆಗೆ ಸ್ವತಃ ಶಿವಣ್ಣ ಅವರೇ ʻಆನಂದ್ʼ ಚಿತ್ರದ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆ ಶಿವಣ್ಣ ಮಾತನಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಣ್ಣ ಹೇಳುವ ಪ್ರಕಾರ, ʻಆನಂದ್ʼ ಸಿನಿಮಾಕ್ಕೆ 1986ರಲ್ಲಿ ಸುಮಾರು 16 ಲಕ್ಷ ರೂ. ಹಣವನ್ನು ಖರ್ಚು ಮಾಡಲಾಗಿತ್ತಂತೆ. ಇವತ್ತಿಗೆ ಅದರ ಮೌಲ್ಯವು 3 ರಿಂದ 4 ಕೋಟಿ ರೂ. ಆಗುತ್ತದೆ. ಇನ್ನು, ಈ ಚಿತ್ರದಿಂದ ಸಿಕ್ಕ ಗಳಿಕೆಯು 2.50 ಕೋಟಿ ರೂ. ದಾಟಿತ್ತು. 1986ರಲ್ಲಿನ 2.50 ಕೋಟಿ ರೂಪಾಯಿ ಇಂದಿನ ಸುಮಾರು 65 - 70 ಕೋಟಿ ರೂಪಾಯಿಗಳಿಗೆ ಸಮಾನವಾಗಿರುತ್ತದೆ. ಇದು ಆನಂದ್ ಚಿತ್ರವು ಅಂದು ಮಾಡಿದ ಸಾಧನೆ ಆಗಿದೆ.
ಶಿವಣ್ಣ ಮಾಹಿತಿ ನೀಡಿದ್ದ ವಿಡಿಯೋ
ಲೇ ತಗಡು ಲೆಕ್ಕ ಹಾಕು ಸರಿಯಾಗಿ 1986 ರಲ್ಲಿ 2.5cr+ ಅಂದ್ರೆ. https://t.co/sBajlfd9Zi pic.twitter.com/H3Ueno4ffA
— 🚨 ಅಗ್ನಿ ಐಪಿಎಸ್ 🚨 (Parody) (@IPSAgni108) December 16, 2025
ಶಿವರಾಜ್ಕುಮಾರ್ ಮತ್ತು ಸುಧಾರಾಣಿ ಅವರ ಚೊಚ್ಚಲ ಸಿನಿಮಾವಾಗಿದ್ದ ʻಆನಂದ್ʼ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 38 ವಾರ ಪ್ರದರ್ಶನ ಕಂಡಿತ್ತು. ನಟಿ ಜಯಂತಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿತ್ತು. ಅದೇ ರೀತಿ, ಚಿತ್ರಕಥೆ ವಿಭಾಗದಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಮತ್ತು ಚಿ. ಉದಯಶಂಕರ್ ಅವರು ಜಂಟಿಯಾಗಿ ಅತ್ಯುತ್ತಮ ಚಿತ್ರಕಥೆ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇನ್ನು ಶಿವರಾಜ್ಕುಮಾರ್ ಅವರು ತಮ್ಮ ಅದ್ಭುತ ನಟನೆಗಾಗಿ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.