ʻದಳಪತಿʼ ವಿಜಯ್ ಅಭಿನಯದ ʻಜನ ನಾಯಗನ್ʼ ಸಿನಿಮಾವು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಂದು (ಜ.9) ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ, ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಇದನ್ನು ಚಿತ್ರತಂಡವಾಗಲಿ, ವಿಜಯ್ ಅಭಿಮಾನಿಗಳಾಗಲಿ ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ವಿಜಯ್ ಅವರ ಕೊನೆಯ ಸಿನಿಮಾಗೆ ಹೀಗೆ ಆಗಿದ್ದು ಫ್ಯಾನ್ಸ್ಗೆ ದೊಡ್ಡ ಆಘಾತವಾಗಿದೆ. ಅಂದಹಾಗೆ, ಜನ ನಾಯಗನ್ ಒಂದು ದೊಡ್ಡ ಬಜೆಟ್ನ ಸಿನಿಮಾ. ಈ ಚಿತ್ರಕ್ಕಾಗಿ ನಿರ್ಮಾಪಕರು ಎಷ್ಟು ಹಣ ಖರ್ಚು ಮಾಡಿದ್ದಾರೆ? ಕಲಾವಿದರಿಗೆ ಎಷ್ಟು ಸಂಭಾವನೆ ನೀಡಿದ್ದಾರ ಗೊತ್ತಾ? ಮುಂದೆ ಓದಿ.
ಕೈತುಂಬಾ ದುಡ್ಡು ಪಡೆದ ವಿಜಯ್
ತಮ್ಮ ಕೊನೆಯ ಸಿನಿಮಾಕ್ಕಾಗಿ ನಟ ವಿಜಯ್ ಅವರು ಕೈತುಂಬಾ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಅವರಿಗೆ ಈ ಚಿತ್ರದ ನಟನೆಗಾಗಿ ಸುಮಾರು 220 ಕೋಟಿ ರೂ. ಹಣ ನೀಡಲಾಗಿದೆ. ಆ ಮೂಲಕ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಖ್ಯಾತಿಗೆ ವಿಜಯ್ ಪಾತ್ರವಾಗಿದ್ದಾರೆ. ವಿಲನ್ ಪಾತ್ರ ಮಾಡಿರುವ ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ಸುಮಾರು 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಇದೆ.
Thalapathy Vijay: ಸಿನಿ ಪಯಣಕ್ಕೆ ದಳಪತಿ ವಿಜಯ್ ವಿದಾಯ; ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?
ಪೂಜಾಗೆ ಸಿಕ್ಕಿದೆ 3 ಕೋಟಿ ರೂ.
ಜನ ನಾಯಗನ್ನಲ್ಲಿ ನಾಯಕಿಯಾಗಿರುವ ನಟಿ ಪೂಜಾ ಹೆಗ್ಡೆ ಅವರು ಸುಮಾರು 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಅವರಿಗೆ ಜಾಸ್ತಿ ಸ್ಕ್ರೀನ್ ಸ್ಪೇಸ್ ಇಲ್ಲ, ಆದರೂ ಕೂಡ ದೊಡ್ಡಮೊತ್ತದ ಹಣ ಅವರಿಗೆ ಸಿಕ್ಕಿದೆ. ಇನ್ನು, ವಿಜಿ ಪಾತ್ರ ಮಾಡಿರುವ ಮಲಯಾಳಂ ನಟಿ ಮಮಿತಾ ಬೈಜುಗೆ ಸುಮಾರು 60 ಲಕ್ಷ ರೂ. ಸಂಭಾವನೆ ನೀಡಲಾಗಿದೆಯಂತೆ.
Thalapathy Vijay: ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲು: ಕೆಳಗೆ ಬಿದ್ದ ದಳಪತಿ ವಿಜಯ್
ನಿರ್ದೇಶಕರಿಗೆ ಸಿಕ್ಕಿದೆ ದೊಡ್ಡ ಮೊತ್ತ
ಇನ್ನು, ಈ ಸಿನಿಮಾವನ್ನು ನಿರ್ದೇಶಿಸಿರುವು ಎಚ್. ವಿನೋದ್. ಚದುರಂಗ ವೇಟ್ಟೈ, ಧೀರನ್ ಅಧಿಗಾರಂ ಒಂಡ್ರು, ನೇರ್ಕೊಂಡ ಪಾರ್ವೈ, ವಲಿಮೈ ಮುಂತಾದ ಸಿನಿಮಾಗಳನ್ನು ಮಾಡಿರುವ ವಿನೋದ್, ಈಗ ಜನ ನಾಯಗನ್ಗೆ ನಿರ್ದೇಶನ ಮಾಡಿದ್ದಾರೆ. ಅದಕ್ಕಾಗಿ ಅವರು, ಸುಮಾರು 25 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ. ಇನ್ನು, ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಅವರಿಗೆ ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು 13 ಕೋಟಿ ರೂ. ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ, ಈ ಸಿನಿಮಾಗೆ ಸಂಭಾವನೆ ಮತ್ತು ನಿರ್ಮಾಣ ವೆಚ್ಚ ಸೇರಿ ಸುಮಾರು 400 ಕೋಟಿ ರೂ. ಹಣ ವ್ಯಯ ಮಾಡಲಾಗಿದೆಯಂತೆ. ಕರ್ನಾಟಕ ಮೂಲದ ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಇಷ್ಟೊಂದು ಅದ್ದೂರಿಯಾಗಿ ನಿರ್ಮಾಣ ಮಾಡಿದೆ.