ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾದ ನಟ ನಿಹಾರ್ ಮುಕೇಶ್ (ಮುಕೇಶ್ ಗೌಡ) ಅವರು ತೆಲುಗು ಬಿಗ್ ಬಾಸ್ 10 ಶೋಗೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ತೆಲುಗು ಬಿಗ್ ಬಾಸ್ ಶೋನಲ್ಲಿ ಕರುನಾಡ ಮೂಲದ ಸ್ಪರ್ಧಿಗಳು ಇರುವುದು ಸರ್ವೇಸಾಮಾನ್ಯವಾಗಿದೆ. ಇದೀಗ ಮುಕೇಶ್ ಅವರ ಸರದಿ ಬಂದಿದೆ.
ತೆಲುಗು ಬಿಗ್ ಬಾಸ್ನಲ್ಲಿ ಮುಕೇಶ್ ಹೇಳಿದ್ದೇನು?
"ನಮ್ಮದು ಮಧ್ಯಮ ವರ್ಗದ ಕುಟುಂಬ. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ನಾನು ಚಿತ್ರರಂಗಕ್ಕೆ ಬರಬೇಕಾಯಿತು. ಮೊದಲು ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ, ಆಮೇಲೆ ನಾಯಕನಾಗಿ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದೆ" ಎಂದು ನಿರೂಪಕ ನಾಗಾರ್ಜುನ ಅವರ ಎದುರು ಮುಕೇಶ್ ಹೇಳಿಕೊಂಡಿದ್ದಾರೆ.
"ನೀವು ಇನ್ನೂ ಸಿಂಗಲ್ಲಾ?"
"ಹಾಗಾದರೆ ಇಲ್ಲಿ ನೀವು ಏನನ್ನು ಸಾಬೀತುಪಡಿಸಲು ಬಯಸುತ್ತೀರಿ?" ಎಂದು ನಾಗಾರ್ಜುನ ಕೇಳಿದಾಗ, "ನನ್ನಲ್ಲಿರುವ ಹಾಸ್ಯ ಪ್ರಜ್ಞೆ (ಕಾಮಿಡಿ ಸೆನ್ಸ್) ಯಾರಿಗೂ ತಿಳಿದಿಲ್ಲ, ಅದನ್ನೇ ಎಲ್ಲರಿಗೂ ತೋರಿಸುತ್ತೇನೆ" ಎಂದು ಉತ್ತರಿಸಿದ್ದಾರೆ. "ನೀವು ಇನ್ನೂ ಸಿಂಗಲ್ಲಾ?" ಎಂದು ನಾಗಾರ್ಜುನ ಪ್ರಶ್ನಿಸಿದಾಗ, "ನಾನು ಅನ್ಲಕ್ಕಿ ಸರ್.. ಸಿಕ್ಕಿದ ಮೇಲೂ ದೂರವಾದರು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ದೂರವಾದರೆ ನೋವಾಗುವುದು ಸಹಜವೇ, ಹಾಗಂತ ಅಮರ ಪ್ರೇಮಿಯಂತೆ ಉಳಿದುಬಿಡಬೇಡಿ" ಎಂದು ನಾಗಾರ್ಜುನ ಮುಕೇಶ್ಗೆ ಸಲಹೆ ನೀಡಿದ್ದಾರೆ.
ತೆಲುಗು ಮಾತನಾಡುವಾಗ ತಪ್ಪಾದರೆ ಕ್ಷಮಿಸಿ
ಮನೆಯೊಳಗೆ ಹೋಗುವ ಮುನ್ನ ಪ್ರೇಕ್ಷಕರಿಗೆ ಒಂದು ಮಾತು ಹೇಳಬೇಕು ಎಂದ ಮುಕೇಶ್, "ತೆಲುಗು ಚಿತ್ರರಂಗ ನನಗೆ ಅನ್ನ ನೀಡುತ್ತಿದೆ. ತೆಲುಗು ಮಾತನಾಡುವಾಗ ಏನಾದರೂ ತಪ್ಪಾದರೆ ಕ್ಷಮಿಸಿ, ನನ್ನ ತೆಲುಗು ಕೇವಲ ನಾಲಿಗೆಯ ಮೇಲಷ್ಟೇ ಅಲ್ಲ, ಹೃದಯದಲ್ಲಿದೆ" ಎಂದು ಹೇಳಿದ್ದಾರೆ.
'ಗುಪ್ಪೆಡಂತ ಮನಸು' ಧಾರಾವಾಹಿ ನಟ ಮುಕೇಶ್
ಕನ್ನಡದ ನಟ ಮುಕೇಶ್ ಗೌಡ ತೆಲುಗಿನಲ್ಲೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 'ಗುಪ್ಪೆಡಂತ ಮನಸು' ಧಾರಾವಾಹಿಯ ರಿಷಿ ಪಾತ್ರದ ಮೂಲಕ ದೊಡ್ಡ ಯಶಸ್ಸು ಗಳಿಸಿದ್ದಾರೆ. ರಿಷಿ ಪಾತ್ರ ಎಲ್ಲರಿಗೂ ಇಷ್ಟವಾದ ಕಾರಣ, ಮುಕೇಶ್ ಪ್ರತಿಯೊಬ್ಬರ ಮನೆಮಾತಾಗಿದ್ದಾರೆ. ಆದರೂ ಅವರು ಕಿರುತೆರೆಗಿಂತ ಬೆಳ್ಳಿಪರದೆಯತ್ತಲೇ ಹೆಚ್ಚು ಗಮನ ಹರಿಸಿದ್ದಾರೆ. 'ತೀರ್ಥರೂಪ ತಂದೆಯವರಿಗೆ', 'ಗೀತಾ ಶಂಕರ್' ಮುಂತಾದ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ತೆಲುಗಿನಲ್ಲೂ ಕೆಲವು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿದ್ದರೂ ಅವು ತಡವಾಗುತ್ತಿರುವ ಕಾರಣ ಸದ್ಯ ಕನ್ನಡ ಚಿತ್ರರಂಗದ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಮುಕೇಶ್ ಗೌಡ ಅವರಿಗೆ ಟ್ರಾವೆಲಿಂಗ್ ಮತ್ತು ಟ್ರೆಕ್ಕಿಂಗ್ ಎಂದರೆ ತುಂಬಾ ಇಷ್ಟ. ಸೀರಿಯಲ್ ಮೂಲಕ ಮನೆಮಾತಾಗಿದ್ದ ಮುಕೇಶ್ ಗೌಡ ಈಗ ಬಿಗ್ ಬಾಸ್ 10ನೇ ಸೀಸನ್ಗೆ ಕಾಲಿಟ್ಟಿದ್ದಾರೆ. ಈ ಶೋ ಮೂಲಕ ಅವರಿಗೆ ಎಂತಹ ಇಮೇಜ್ ಸಿಗಲಿದೆ ಮತ್ತು ಅವರ ಪಯಣ ಎಲ್ಲಿಯವರೆಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.