ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿರುವ ನಟ ದಳಪತಿ ವಿಜಯ್, ಸದ್ಯ ಸಿಎಂ ಆಗಿ ಪ್ರಮಾಣ ವಚನ ರಚಿಸುವ ಉತ್ಸಾಹದಲ್ಲಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮಧ್ಯೆ ನಟಿ ತ್ರಿಷಾ ಕೃಷ್ಣನ್ ಅವರ ಹೆಸರು ಸಖತ್ ಟ್ರೆಂಡಿಂಗ್ನಲ್ಲಿದೆ. ಕಾರಣ, ತ್ರಿಷಾ ಮತ್ತು ವಿಜಯ್ ಗೆಳೆತನ! ಯಾವಮಟ್ಟದಲ್ಲಿ ಲೆಕ್ಕಾಚಾರದ ಮಾತುಗಳು ಕೇಳಿಬರುತ್ತಿವೆ ಎಂದರೆ, ತಮಿಳುನಾಡು ವಿಧಾನಸಭೆಗೆ ನಟಿ ತ್ರಿಷಾ ಕೊಡ್ತಾರೆ ಎನ್ನಲಾಗುತ್ತಿದೆ. "ಅರೇ, ಇದೆಲ್ಲಾ ಹೇಗೆ ಸಾಧ್ಯ" ಅಂತೀರಾ.. ಈ ಸ್ಟೋರಿ ಓದಿ.
ನಾನು ಸಿಎಂ ಆಗಬೇಕು ಎಂದಿದ್ದ ತ್ರಿಷಾ!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗ್ತಿದೆ. ಅದ್ಯಾವುದಪ್ಪ ಆ ವಿಡಿಯೋ ಅಂತೀರಾ? ಒಂದಷ್ಟು ವರ್ಷಗಳ ಹಿಂದೆ ತ್ರಿಷಾಗೆ ಭವಿಷ್ಯದಲ್ಲಿ ನೀವು ಏನಾಗಬೇಕು ಎಂದುಕೊಂಡಿದ್ದೀರಿ ಎಂಬ ನಿರೂಪಕ ಪ್ರಶ್ನೆ ಕೇಳ್ತಾರೆ. ಅದಕ್ಕೆ, ತ್ರಿಷಾ, "ನಿಜ ಹೇಳ್ಲಾ? ನನಗೆ ಸಿಎಂ ಆಗಬೇಕು ಎಂಬ ಆಸೆ ಇದೆ" ಎಂದು ಹೇಳ್ತಾರೆ. ಇದೀಗ ಆ ವಿಡಿಯೋ ಕ್ಲಿಪ್ ಅನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ಚೊಚ್ಚಲ ಪ್ರಯತ್ನದಲ್ಲೇ ತಮಿಳುನಾಡಿನಲ್ಲಿ ದಳಪತಿ ವಿಜಯ್ ಕಮಾಲ್; ಟಿವಿಕೆಗೆ ಭಾರಿ ಮುನ್ನಡೆ
ಜಯಲಲಿತಾ ನೆನಪು ಮಾಡಿದ್ದ ತ್ರಿಷಾ
ನಟ ಎಂ ಜಿ ರಾಮಚಂದ್ರನ್ ಸೂಪರ್ ಸ್ಟಾರ್ ಆಗಿದ್ದಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಿಎಂ ಆಗಿದ್ದವರು. ತಮಿಳುನಾಡು ರಾಜಕಾರಣಕ್ಕೆ ಹೊಸ ಭಾಷ್ಯ ಬರೆದರು. ನಂತರ ಎಂಜಿಆರ್ಗೆ ಆಪ್ತರಾಗಿದ್ದ ನಟಿ ಜೆ. ಜಯಲಲಿತಾ ಅವರು ತಮಿಳುನಾಡಿನ ಸಿಎಂ ಆಗಿದ್ದು ಈಗ ಇತಿಹಾಸ. ಅದೇ ಮಾದರಿಯಲ್ಲಿ ನಟ ವಿಜಯ್ ಕೂಡ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಕಾಲಿಟ್ಟು, ಮೊದಲ ಪ್ರಯತ್ನದಲ್ಲೇ ಸಿಎಂ ಆಗುವ ಸಿದ್ಧತೆಯಲ್ಲಿದ್ದಾರೆ. ವಿಜಯ್ಗೆ ಆಪ್ತರಾಗಿರುವ ನಟಿ ತ್ರಿಷಾ ಕೂಡ ರಾಜಕೀಯಕ್ಕೆ ಬರುತ್ತಾರಾ ಎಂಬ ಮಾತುಗಳು ಈಗ ಕೇಳಿಬಂದಿವೆ.
ತಮಿಳುನಾಡು ಅಸೆಂಬ್ಲಿಗೆ ತ್ರಿಷಾ ಎಂಟ್ರಿ ಹೇಗೆ?
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಅವರು ಮುನ್ನಡೆ ಸಾಧಿಸಿದ್ದು, ಬಹುತೇಕ ಗೆಲುವ ನಿಶ್ಚಯ ಎನ್ನಲಾಗಿದೆ. ಇವೆರಡೂ ಕ್ಷೇತ್ರಗಳಲ್ಲಿ ವಿಜಯ್ ವಿಜಯಶಾಲಿಯಾದರೆ, ಯಾವುದಾದರೂ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ರಾಜೀನಾಮೆ ನೀಡಿದ 6 ತಿಂಗಳೊಳಗೆ ಉಪ ಚುನಾವಣೆ ಎದುರಾಗುತ್ತದೆ. ಆಗ ಆ ಕ್ಷೇತ್ರದ ಟಿವಿಕೆ ಅಭ್ಯರ್ಥಿಯಾಗಿ ತ್ರಿಷಾ ಕೃಷ್ಣನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಹಲವು ವರ್ಷಗಳ ಹಿಂದಿನ ತ್ರಿಷಾ ಅವರ ವಿಡಿಯೋ ವೈರಲ್
ಸದ್ಯ ತಮಿಳುನಾಡು ತುಂಬೆಲ್ಲಾ ಟಿವಿಕೆ ಹವಾ ಜೋರಾಗಿ ಇರುವುದರಿಂದ, ತ್ರಿಷಾ ಗೆದ್ದೇ ಗೆಲ್ಲುತ್ತಾರೆ, ತಮಿಳುನಾಡು ಅಸೆಂಬ್ಲಿಗೆ ಕಾಲಿಡುತ್ತಾರೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಒಂದುವೇಳೆ, ಇದೆಲ್ಲಾ ನಿಜವಾದರೆ, ತಮಿಳುನಾಡು ರಾಜಕಾರಣ, ಇನ್ನಷ್ಟು ರಂಗೇರುವುದರಲ್ಲಿ ಅಚ್ಚರಿ ಇಲ್ಲ. "ಭವಿಷ್ಯದಲ್ಲಿ ಸಿಎಂ ಆಗಬೇಕು" ಎಂಬ ಆಸೆ ಹೊತ್ತಿರುವ ತ್ರಿಷಾಗೆ ಈ ಚುನಾವಣೆಯು ತಿರುವು ನೀಡಬಹುದೇ? ಕಾದುನೋಡಬೇಕು.