ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಡಿಎಂಕೆ ನಾಯಕ, ನಟ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯನಿಧಿ ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ವಿವಾದದ ಬಗ್ಗೆ ಮೌನ ವಹಿಸಿದ್ದ ನಟಿ ತ್ರಿಶಾ, ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ತ್ರಿಶಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಈ ವಯಸ್ಸಿನಲ್ಲಿ ನಾಟಕೀಯತೆ ಪ್ರದರ್ಶಿಸುವುದು ಮುಜುಗರದ ಸಂಗತಿ... ಹೋಗಿ ಸ್ವಲ್ಪ ಹಣ ಸಂಪಾದಿಸಿ ಮತ್ತು ಶಾಂತಿಯನ್ನು ಕಂಡುಕೊಳ್ಳಿ" ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ, ಇದು ಉದಯನಿಧಿ ಅವರ ಅಂದಿನ ಹೇಳಿಕೆಗೆ ನೀಡಿದ ಖಡಕ್ ಉತ್ತರವೆಂದೇ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, "ಒಮ್ಮೆ ನೀವು ಪ್ರಾರ್ಥಿಸಿದ್ದ ಜೀವನದಿಂದಲೇ ಇಂದು ನೀವು ರೋಮಾಂಚನಗೊಳ್ಳುತ್ತಿರುವುದು ಎಷ್ಟು ದೊಡ್ಡ ಭಾಗ್ಯ" ಎಂದು ಬರೆದುಕೊಂಡಿದ್ದಾರೆ.
Trisha Krishnan: 'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!
ತ್ರಿಶಾ ತಾಯಿಯ ಪೋಸ್ಟ್
ತ್ರಿಶಾ ಅವರ ತಾಯಿ ಉಮಾ ಕೃಷ್ಣನ್ ಗಣಪತಿ ಕೂಡ, "ಲಾಸ್ಟ್ ಒನ್ ಬೆಸ್ಟ್ ಒನ್" ಶೀರ್ಷಿಕೆಯಡಿಯಲ್ಲಿ ಪರೋಕ್ಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ವರ್ಕೌಟ್ ಮಾಡಿ, ಸ್ಕಿನ್ಕೇರ್ ಮಾಡಿ, ಸುಗಂಧದ್ರವ್ಯ ಬಳಸಿ, ನೀರು ಕುಡಿಯಿರಿ, ಹಣ ಸಂಪಾದಿಸಿ, ಜನರೊಂದಿಗೆ ಒಳ್ಳೆಯವರಾಗಿರಿ, ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ" ಎಂದು ಅವರು ಬರೆದುಕೊಂಡಿದ್ದಾರೆ.
ಅಜ್ಜಿಯ 98ನೇ ಜನ್ಮದಿನದ ಸಂಭ್ರಮ
ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯರಾದ ತ್ರಿಶಾ, ತಮ್ಮ ಅಜ್ಜಿಯ 98ನೇ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಾಯಿ ಹಾಗೂ ಸಾಕುನಾಯಿ ಇಝಿ ಜೊತೆಗಿನ ಫೋಟೋಗಳು ಜಾಲತಾಣದಲ್ಲಿ ಗಮನ ಸೆಳೆದಿವೆ. ಅಜ್ಜಿಯ ಹುಟ್ಟುಹಬ್ಬದ ಕಾರಣಕ್ಕಾಗಿ ಅವರು ಪುನಃ ಇನ್ಸ್ಟಾಗ್ರಾಮ್ನಲ್ಲಿ ಆಕ್ಟೀವ್ ಆಗಿದ್ದಾರೆ.
ಏನಿದು ಉದಯನಿಧಿ ವಿವಾದ?
ಈ ತಿಂಗಳ ಆರಂಭದಲ್ಲಿ ಕಾವೇರಿ ನದಿ ನೀರಿನ ಪ್ರತಿಭಟನೆಯಲ್ಲಿ ಕೆಲವರು ತ್ರಿಶಾ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಉದಯನಿಧಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದರು. ಇದರಿಂದ ವಿವಾದ ಸೃಷ್ಟಿಯಾಗಿ, ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಮಹಿಳಾ ಮೋರ್ಚಾ ನೀಡಿದ ದೂರಿನನ್ವಯ ತಂಜಾವೂರಿನ ಸೆಂಜಿಪಟ್ಟಿ ಪೊಲೀಸರು ಉದಯನಿಧಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆದರೆ, ಡಿಎಂಕೆ ಈ ಆರೋಪವನ್ನು ನಿರಾಕರಿಸಿದ್ದು, ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.