ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಫೆ.26ರಂದು ಅತ್ಯಂತ ಖಾಸಗಿಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೀಗ ಅವರು ಚಿತ್ರರಂಗದ ಗಣ್ಯರು, ಆಪ್ತರು ಮತ್ತು ರಾಜಕೀಯ ಮುಖಂಡರಿಗಾಗಿ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಆದರೆ ಈ ಆರತಕ್ಷತೆಗೆ ಆಹ್ವಾನ ಪತ್ರಿಕೆ ಇಲ್ಲದವರಿಗೆ ಪ್ರವೇಶ ಇಲ್ಲ. ಬಹಳ ಭದ್ರತೆಯೊಂದಿಗೆ ನಡೆಯುತ್ತಿರುವ ಈ ಸಮಾರಂಭದ ಹಿನ್ನೆಲೆಯಲ್ಲಿ ಫ್ಯಾನ್ಸ್ಗೆ ವಿರೋಶ್ ಜೋಡಿ ಒಂದು ಮನವಿಯನ್ನು ಮಾಡಿಕೊಂಡಿದೆ. ಅದೇನು? ಮುಂದೆ ಓದಿ.
ವಿರೋಶ್ ಜೋಡಿ ಕಡೆಯಿಂದ ಬಂದಿರುವ ಮನವಿ
"ದೇಶದಾದ್ಯಂತ ಅಪಾರ ಪ್ರೀತಿ ಮತ್ತು ಗಮನ ಸೆಳೆದಿರುವ ವಿರೋಶ್ (ವಿಜಯ್-ರಶ್ಮಿಕಾ) ವಿವಾಹವು ಇತ್ತೀಚಿನ ಅತ್ಯಂತ ಸಂಭ್ರಮದ ಕ್ಷಣಗಳಲ್ಲಿ ಒಂದಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಆಪ್ತ ವಿವಾಹ ಸಮಾರಂಭದ ನಂತರ, ಮಾರ್ಚ್ 4 ರ ಸಂಜೆ ಹೈದರಾಬಾದ್ನಲ್ಲಿ ಭವ್ಯ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಯನ್ನು ಮೊದಲೇ ಯೋಜಿಸಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮತ್ತು ಆಡಳಿತ ರಂಗದ ಪ್ರಮುಖರಿಗಾಗಿ ಮಾತ್ರ ಆಯೋಜಿಸಲಾಗಿದೆ"
ಪೊಲೀಸ್ ಅಧಿಕಾರಿಗಳು ಹೇಳಿದ್ದೇನು?
"ಈ ಮದುವೆಯ ಬಗ್ಗೆ ದೇಶಾದ್ಯಂತ ಇರುವ ಅಭೂತಪೂರ್ವ ಕುತೂಹಲ ಮತ್ತು ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳ ಸಲಹೆಯಂತೆ ಅತಿಥಿಗಳ ಪಟ್ಟಿಯನ್ನು ಮತ್ತಷ್ಟು ಸೀಮಿತಗೊಳಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವುದನ್ನು ತಡೆಯಲು, ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ. ಅತಿಥಿಗಳು, ಸಾರ್ವಜನಿಕರು ಮತ್ತು ನವದಂಪತಿಗಳ ಕ್ಷೇಮವೇ ನಮಗೆ ಮೊದಲ ಆದ್ಯತೆಯಾಗಿದೆ"
ಆಹ್ವಾನ ಪತ್ರಿಕೆ ಇಲ್ಲದೆ ಪ್ರವೇಶ ಇಲ್ಲ
"ಯಾವುದೇ ಅಡೆತಡೆಯಿಲ್ಲದೆ ಮತ್ತು ಕಾರ್ಯಕ್ರಮ ರದ್ದಾಗದಂತೆ ಸಂಭ್ರಮಾಚರಣೆಯನ್ನು ಸುಗಮವಾಗಿ ನಡೆಸಲು ದಂಪತಿಗಳು ಮತ್ತು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಬಿದ್ದಲ್ಲಿ, ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗಾಗಿಯೇ ಪ್ರತ್ಯೇಕವಾಗಿ ಮತ್ತು ಸುರಕ್ಷಿತವಾಗಿ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಸಮಾರಂಭದ ಸ್ಥಳಕ್ಕೆ ಪ್ರವೇಶವನ್ನು ಕೇವಲ ಆಹ್ವಾನ ಪತ್ರಿಕೆ ಹೊಂದಿರುವ ಅತಿಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಧಿಕೃತ ಆಹ್ವಾನವಿಲ್ಲದವರು ಸಮಾರಂಭದ ಸ್ಥಳಕ್ಕೆ ಬರಬಾರದೆಂದು ಗೌರವಪೂರ್ವಕವಾಗಿ ವಿನಂತಿಸಲಾಗಿದೆ. ಏಕೆಂದರೆ ಯಾವುದೇ ಸಂದರ್ಭದಲ್ಲೂ ಆಹ್ವಾನ ಪತ್ರಿಕೆ ಇಲ್ಲದೆ ಪ್ರವೇಶ ನೀಡಲಾಗುವುದಿಲ್ಲ"
ವಿರೋಶ್ ಟೀಮ್ ಹಂಚಿಕೊಂಡಿರುವ ಪೋಸ್ಟ್
ನಿಮ್ಮ ಸುರಕ್ಷತೆಯೇ ನಮಗೆ ಮುಖ್ಯ
"ತಮ್ಮ ಮೇಲೆ ಅಪಾರ ಪ್ರೀತಿ ತೋರುತ್ತಿರುವ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ವಿಜಯ್ ಮತ್ತು ರಶ್ಮಿಕಾ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನಿಮ್ಮ ಸುರಕ್ಷತೆ ಮತ್ತು ಸಂತೋಷವೇ ನಮಗೆ ಎಲ್ಲವೂ. ನಿಮ್ಮ ಹಾರೈಕೆ ಮತ್ತು ಬೆಂಬಲಕ್ಕೆ ನಾವು ಚಿರಋಣಿಗಳು. ಈ ಸಂಭ್ರಮಾಚರಣೆಯು ಎಲ್ಲರಿಗೂ ಸುರಕ್ಷಿತವಾಗಿ ಮತ್ತು ಸಂತೋಷವಾಗಿರಲು ನಿಮ್ಮ ಸಹಕಾರವನ್ನು ನಾವು ಕೋರುತ್ತೇವೆ" ಎಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ತಂಡವು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.