ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ತೂಗುದೀಪ ಅಭಿನಯದ ʻದಿ ಡೆವಿಲ್ʼ ಸಿನಿಮಾವು ತೆರೆಗೆ ಬರಲು ಸಜ್ಜಾಗಿದೆ. ಡಿಸೆಂಬರ್ 12ರಂದು ರಾಜ್ಯಾದ್ಯಂತ ಈ ಚಿತ್ರ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಅಂದಹಾಗೆ, ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಹಾಗಾಗಿ, ಅವರ ಅನುಪಸ್ಥಿತಿಯಲ್ಲಿಯೇ ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಪತಿಯ ಅನುಪಸ್ಥಿತಿಯನ್ನು ಭರ್ತಿ ಮಾಡಿರುವ ಪತ್ನಿ ವಿಜಯಲಕ್ಷ್ಮೀ ʻಡೆವಿಲ್ʼ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ತಲೆ ಕೆಡಿಸಿಕೊಳ್ಳಬೇಡಿ ಎಂದು ದರ್ಶನ್ ಹೇಳಿದ್ದಾರೆ
ಈಚೆಗೆ ಡಿ ಬಾಸ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಜಯಲಕ್ಷ್ಮೀ ದರ್ಶನ್ ಅವರು, "ಅಭಿಮಾನಿಗಳೆಲ್ಲಾ ತುಂಬಾ ದೂರದ ಊರುಗಳಿಂದ ಬಂದಿದ್ದೀರಿ. ದರ್ಶನ್ ಅವರು ನನಗೆ ಹೇಳಿ ಕಳುಹಿಸಿದ್ದಾರೆ. ಯಾರು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದಂತೆ. ಈವರೆಗೂ ಹೇಗೆ ನೀವು ಪ್ರೀತಿ ಕೊಟ್ಟು ಸಪೋರ್ಟ್ ಮಾಡಿಕೊಂಡು ಬಂದಿದ್ದೀರೋ, ಈ ಸಿನಿಮಾಕ್ಕೆ ಕೊಂಚ ಜಾಸ್ತಿ ಸಪೋರ್ಟ್ ಮಾಡಬೇಕಂತೆ ಅಂತ ದರ್ಶನ್ ಅವರು ಹೇಳಿಕಳುಹಿಸಿದ್ದಾರೆ" ಎಂದು ಹೇಳಿದ್ದಾರೆ. ನವೆಂಬರ್ 16ರಂದು ಉಲ್ಲಾಳ ಬಳಿಯ ಪಾರ್ಟಿ ಹಾಲ್ ಒಂದರಲ್ಲಿ ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಭೆ ನಡೆದಿದೆ.
Devil Movie: 'ಡೆವಿಲ್' ಮೂರನೇ ಸಾಂಗ್ ಔಟ್! ದರ್ಶನ್ ಖದರ್ಗೆ ಫಿದಾ ಆದ್ರು ಫ್ಯಾನ್ಸ್
ಪ್ರೊಡಕ್ಷನ್ ಹೌಸ್ ನಮ್ಮ ಜೊತೆಗೆ ನಿಂತಿದೆ
"ನಮಗೆ ಇದು ಬೇರೆ ಪ್ರೊಡಕ್ಷನ್ ಹೌಸ್ ಅಂತ ಯಾವತ್ತೂ ಅನ್ನಿಸಿಲ್ಲ. ಇದು ನಮ್ಮ ಫ್ಯಾಮಿಲಿ ಥರ. ನಮ್ಮ ಪರಿಸ್ಥಿತಿ ಅವರಿಗೆ ಅರ್ಥ ಆಗುತ್ತಿತ್ತು. ಅವರು ನಮ್ಮ ಜೊತೆಗೆ ಯಾವಾಗಲೂ ಇದ್ದರು. ಈ ಸಿನಿಮಾದಿಂದ ನಾವು ಹಿಂದೆ ಸರಿಯುತ್ತೇವೆ, ನಾವು ಇಷ್ಟೊಂದು ದುಡ್ಡು ಹಾಕಿದ್ದೀವಿ ವಿಜಿ ಅನ್ನೋ ಒಂದೇ ಒಂದು ಮಾತು ಅವರ ಬಾಯಲ್ಲಿ ಬರಲಿಲ್ಲ. ಪ್ರಕಾಶ್ ಅವರ ಕುಟುಂಬಕ್ಕೆ ನಾವು ಗ್ರೇಟ್ಫುಲ್ ಆಗಿರುತ್ತೇವೆ" ಎಂದು ವಿಜಯಲಕ್ಷ್ಮೀ ದರ್ಶನ್ ಹೇಳಿದ್ದಾರೆ.
ತುಂಬಾ ಪ್ರೀತಿಯನ್ನು ನೀವು ತೋರಿಸಬೇಕು
ʻದಿ ಡೆವಿಲ್ʼ ಸಿನಿಮಾದ ಎಲ್ಲಾ ಹಾಡುಗಳು ಇಷ್ಟ ಎಂದು ಹೇಳಿರುವ ವಿಜಯಲಕ್ಷ್ಮೀ, ಒಂದು ಹಾಡಿನಲ್ಲಿ ಭಾರಿ ಟ್ವಿಸ್ಟ್ ಇದೆ. ಅದನ್ನ ಥಿಯೇಟರ್ನಲ್ಲೇ ನೋಡಬೇಕು ಎಂದು ಕುತೂಹಲ ಹುಟ್ಟಿಸಿದ್ದಾರೆ. "ಸಾಂಗ್ನ ಫುಲ್ ನೋಡಿದ್ರೆ ಮಜಾ ಮಾಡ್ತೀರಾ. ದರ್ಶನ್ ಅವರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಎಷ್ಟೇ ನೋವಿದ್ದರೂ, ತುಂಬಾ ಕಷ್ಟದಲ್ಲಿಯೂ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ದರ್ಶನ್ ಅವರು ಮಾಡಿದ್ದಾರೆ. ದಯವಿಟ್ಟು ಎಲ್ಲರ ಸಪೋರ್ಟ್ ಬೇಕು, ತುಂಬಾ ಪ್ರೀತಿಯನ್ನು ನೀವು ತೋರಿಸಬೇಕು" ಎಂದು ಡಿ ಬಾಸ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ವಿಜಯಲಕ್ಷ್ಮೀ.
ʼದಿ ಡೆವಿಲ್ʼ ಸಿನಿಮಾ ಟೀಮ್ ಹಂಚಿಕೊಂಡಿರುವ ಪೋಸ್ಟ್
ʻದಿ ಡೆವಿಲ್ʼ ಸಿನಿಮಾದಲ್ಲಿ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದು, ಮಹೇಶ್ ಮಾಂಜ್ರೇಕರ್, ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್, ತುಳಸಿ ಶಿವಮಣಿ, ರೋಜರ್ ನಾರಾಯಣ್, ಶರ್ಮಿಳಾ ಮಾಂಡ್ರೆ, ಶ್ರೀನಿವಾಸಪ್ರಭು ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.