ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Actor Darshan) ಸೇರಿ ಏಳು ಮಂದಿ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನನ್ನು ರದ್ದು ಮಾಡಿ ಜೈಲಿಗೆ ಕಳುಹಿಸುವಂತೆ ಆದೇಶ ಹೊರಡಿಸಿದೆ. ಜಾಮೀನು ರದ್ದು ಮಾಡಿದ ನಂತರ ನಟ ದರ್ಶನ್ ತೂಗುದೀಪ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದರು. ಅಲ್ಲಿನ ಆರೋಪಿಗಳಿಂದ ಅಕ್ರಮ ಚಟುವಟಿಕೆ, ರಾಜಾತಿಥ್ಯ ಹಿನ್ನೆಲೆ ಕರ್ನಾಟಕ ಹೈಕೋರ್ಟ್ 17 ಆರೋಪಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ಜೈಲಿಗೆ ವರ್ಗಾವಣೆ ಮಾಡಿತ್ತು. ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಕಲಾಗಿತ್ತು. ಇದೀಗ ಪುನಃ ದರ್ಶನ್ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದಾರೆ.
ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವುದರಿಂದ ಜೈಲಿನಲ್ಲಿ ದರ್ಶನ್ಗೆ ವಿಚಾರಣಾಧೀನ ಕೈದಿಯ ನಂಬರ್ ನೀಡಲಾಗಿದೆ. ದರ್ಶನ್ ಅಷ್ಟೇ ಅಲ್ಲ, ಪವಿತ್ರಾ ಗೌಡ ಮತ್ತು ನಾಗರಾಜು ಆರ್ ಅನು ಕುಮಾರ್, ಲಕ್ಷ್ಮಣ್ ಎಂ, ಜಗದೀಶ್, ಪ್ರದೂಷ್ಗೆ ವಿಚಾರಣಾಧೀನ ಕೈದಿಯ ನಂಬರ್ ನೀಡಲಾಗಿದೆ. ದರ್ಶನ್ ಕೈದಿ ಸಂಖ್ಯೆ 7314, ಪ್ರದೋಷ್ 7317, ನಾಗರಾಜ್ 7315, ಲಕ್ಷ್ಮಣ 7316, A1 ಆರೋಪಿಯಾಗಿರುವ ಪವಿತ್ರ ಗೌಡಗೆ 7313 ನಂಬರ್ ನೀಡಲಾಗಿದೆ. ಕಳೆದ ಬಾರಿ ದರ್ಶನ್ ಅವರು ಬಂಧನಕ್ಕೆ ಒಳಗಾಗಾದ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿತ್ತು. ಅನೇಕ ಅಭಿಮಾನಿಗಳು ಆಗ ಈ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಈಗ ದರ್ಶನ್ಗೆ ಬೇರೆ ಸಂಖ್ಯೆ ಸಿಕ್ಕಿದೆ. ಈ ದಾರಿಯೂ ಫ್ಯಾನ್ಸ್ ಕೈದಿ ನಂಬರ್ನ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಸದ್ಯ ನಟ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು, ಜೈಲಿನಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಗೈರು ಹಾಜರಾಗಿದ್ದರು ಎನ್ನಲಾಗಿದೆ. ಅತ್ತ ಪವಿತ್ರಾ ಕೂಡ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ.
ಸಾಂಗ್ ರಿಲೀಸ್ ಮುಂದೂಡಿಕೆ
ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗಿ ಇರ್ಬೇಕು ಸಾಂಗ್ ಇಂದು ರಿಲೀಸ್ ಆಗಬೇಕಾಗಿತ್ತು. ಸಾಂಗ್ ರಿಲೀಸ್ ಕುರಿತು ಸ್ವತಃ ದರ್ಶನ್ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ನೀಡಿದ್ದರು. ಆಗಸ್ಟ್ 15ರಂದು ಬೆಳಗ್ಗೆ 10.05ಕ್ಕೆ ರಿಲೀಸ್ ಆಗಲಿದೆ ಎಂದು ದರ್ಶನ್ ಬರೆದಿದ್ದರು. ಆದರೆ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದರಿಂದ ಸಾಂಗ್ ರಿಲೀಸ್ ಮುಂದೂಡಲಾಗಿದೆ. ಚಿತ್ರತಂಡ ರಿಲೀಸ್ ಡೇಟ್ ಕುರಿತು ಯಾವುದೇ ಸುಳಿವನ್ನು ನೀಡಿಲ್ಲ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.