ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (TVK Vijay) ಅವರು ಇಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಸಚಿವ ಸಂಪುಟಕ್ಕೆ 23 ಶಾಸಕರನ್ನು ಸೇರಿಸಿಕೊಂಡಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷದ 21 ಶಾಸಕರು ಮತ್ತು ಮಿತ್ರಪಕ್ಷ ಕಾಂಗ್ರೆಸ್ನ 2 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡು ಪ್ರಮುಖ ಮಿತ್ರಪಕ್ಷಗಳಾದ ಐಯುಎಂಎಲ್ ಮತ್ತು ವಿಸಿಕೆ ಸಂಪುಟ ವಿಸ್ತರಣೆಯಲ್ಲಿ ಭಾಗವಹಿಸಿಲ್ಲ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಎರಡೂ ಪಕ್ಷಗಳು ಟಿವಿಕೆ ಸರ್ಕಾರದ ಸಂಖ್ಯಾಬಲಕ್ಕೆ ನಿರ್ಣಾಯಕವಾಗಿವೆ.
ಇಂದು ಪ್ರಮಾಣ ವಚನ ಸ್ವೀಕರಿಸಿದ ಶಾಸಕರಲ್ಲಿ ಶ್ರೀನಾಥ್, ಕಮಲಿ ಎಸ್, ಸಿ ವಿಜಯಲಕ್ಷ್ಮಿ, ಆರ್ ವಿ ರಂಜಿತ್ಕುಮಾರ್, ವಿನೋತ್, ರಾಜೀವ್, ಬಿ ರಾಜಕುಮಾರ್, ವಿ ಗಾಂಧಿರಾಜ್, ಮಥನ್ ರಾಜಾ ಪಿ, ಜೆಗದೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ತಿಬನ್ ಎ, ರಮೇಶ್ ಕುಮಾರ್, ಪಿ ವಿಶ್ವನಾಥಂ, ಪಿ ವಿಶ್ವನಾಥನ್, ಆರ್.ವಿ. ಫರ್ವಾಸ್ ಜೆ, ಡಿ ಶರತ್ಕುಮಾರ್, ಎನ್ ಮೇರಿ ವಿಲ್ಸನ್, ವಿಘ್ನೇಶ್ ಕೆ ಹಾಗೂ ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ತಿರು ಪಿ. ವಿಶ್ವನಾಥನ್ ಸೇರಿದ್ದಾರೆ.
ವಿಜಯ್ ಸಂಪುಟ ರಚಿಸುವಲ್ಲಿ ಬ್ಯುಸಿಯಾಗಿದ್ದರೆ ಡಿಎಂಕೆ ಸರ್ಕಾರದ ಕುರಿತು ವ್ಯಂಗ್ಯವಾಡಿದೆ. ಡಿಎಂಕೆಯ ಹಿರಿಯ ನಾಯಕ ಅನಿತಾ ರಾಧಾಕೃಷ್ಣನ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸಮ್ಮಿಶ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹೊಸ ಆಡಳಿತವು ಆರು ತಿಂಗಳೂ ಉಳಿಯುವುದಿಲ್ಲ. ಆದಾಗ್ಯೂ, ವಿಜಯ್ಗಿಂತ ಮೊದಲು ಸಿಎಂ ಆಗಿದ್ದ ಎಂ.ಕೆ ಸ್ಟಾಲಿನ್ ಶೀಘ್ರದಲ್ಲೇ ಅಧಿಕಾರಕ್ಕೆ ಮರಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಧಾಕೃಷ್ಣನ್, ಈ ಸರ್ಕಾರ ಇನ್ನೂ ನಾಲ್ಕು ತಿಂಗಳು ಮಾತ್ರ ಉಳಿಯುತ್ತದೆ. ವಿಲ್ಲಿವಕ್ಕಂ ಕ್ಷೇತ್ರದಲ್ಲಿ ಗೆದ್ದಿರುವ ಆಧವ್ ಅರ್ಜುನ್ ಅವರೇ ಧೈರ್ಯವಿದ್ದರೆ ಆ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ, ನಾನು ಕೂಡಾ ರಾಜಿನಾಮೆ ನೀಡುತ್ತೇನೆ. ತಿರುಚೆಂಡೂರಿನಲ್ಲಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದಾರೆ.