ಕೋಲ್ಕತ್ತಾ: ಕಳೆದ 57 ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ (Hindu Muslim) ಸಮುದಾಯದವರು ಒಟ್ಟಾಗಿ ಸಂಭ್ರಮದಿಂದ ಆಯೋಜಿಸುತ್ತಿದ್ದ ಜನ್ಮಾಷ್ಟಮಿ (Janmashtami) ಆಚರಣೆಯಲ್ಲಿ ಈ ಬಾರಿ ಮಹತ್ವದ ಬದಲಾವಣೆ ಕಂಡುಬಂದಿದೆ. ಬಿಜೆಪಿ ನಾಯಕ (BJP) ರಾಕೇಶ್ ಸಿಂಗ್ ನೇತೃತ್ವ ವಹಿಸಿಕೊಂಡ ಬಳಿಕ, ಆಯೋಜನಾ ಸಮಿತಿಯಿಂದ ಮುಸ್ಲಿಂ ಸದಸ್ಯರನ್ನು ಹೊರಗಿಟ್ಟು, ಸಮಿತಿಯಲ್ಲಿ ಹಿಂದೂಗಳು ಮಾತ್ರ ಇರಲಿದ್ದಾರೆ ಎಂದು ಘೋಷಿಸಲಾಗಿದೆ.
ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪೋರ್ಟ್ ಕ್ಷೇತ್ರದಿಂದ ಸೋತಿರುವ ಬಿಜೆಪಿ ನಾಯಕ ರಾಕೇಶ್ ಸಿಂಗ್ ಈ ವರ್ಷದ ಜನ್ಮಾಷ್ಟಮಿ ಕಾರ್ಯಕ್ರಮದ ಹೊಣೆ ಹೊತ್ತಿದ್ದು, ಮುಖ್ಯ ಅತಿಥಿಯಾಗಿಯೂ ಭಾಗವಹಿಸಲಿದ್ದಾರೆ. “ನಮ್ಮ ಧರ್ಮವನ್ನು ನಾವು ಗೌರವಿಸುವುದಕ್ಕಿಂತ ಉತ್ತಮವಾಗಿ ಬೇರೆ ಯಾರೂ ಗೌರವಿಸಲು ಸಾಧ್ಯವಿಲ್ಲ. ಕಳೆದ 15 ವರ್ಷಗಳಿಂದ ಹಿಂದೂ ಹಬ್ಬಗಳ ಹಲವು ಸಮಿತಿಗಳಲ್ಲಿ ಮುಸ್ಲಿಮರು ಪ್ರಮುಖ ಸ್ಥಾನದಲ್ಲಿರುವುದನ್ನು ನೋಡಿದ್ದೇವೆ. ಇದೀಗ ಹಿಂದೂಗಳು ತಮ್ಮ ಹಬ್ಬಗಳನ್ನು ತಮ್ಮ ಇಚ್ಛೆಯಂತೆ ಆಚರಿಸುವ ಸಮಯ ಬಂದಿದೆ. ನಾವು ಇತರ ಸಮುದಾಯಗಳ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದೇ ರೀತಿ ನಮ್ಮ ಸಂಪ್ರದಾಯಗಳಲ್ಲಿ ಇತರ ಸಮುದಾಯದ ಹಸ್ತಕ್ಷೇಪವನ್ನೂ ಅನುಮತಿಸುವುದಿಲ್ಲ,” ಎಂದು ಸಿಂಗ್ ಹೇಳಿದ್ದಾರೆ.
“ಮುಸ್ಲಿಮರು ಅಥವಾ ಮುಸ್ಲಿಂ ಟ್ರಸ್ಟ್ಗಳು ತಮ್ಮ ಮನೆಗಳಲ್ಲಿ ಶ್ರೀಕೃಷ್ಣನ ಪೂಜೆ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಕೋಲ್ಕತ್ತಾ ಪೋರ್ಟ್ ಪ್ರದೇಶದ ಯಾವುದೇ ಟ್ರಸ್ಟ್ ಅಥವಾ ಪೂಜಾ ಸಮಿತಿಯಲ್ಲಿ ಮುಸ್ಲಿಮರು ಭಾಗವಹಿಸುವುದನ್ನು ನಾವು ಖಂಡಿತವಾಗಿಯೂ ವಿರೋಧಿಸುತ್ತೇವೆ,” ಎಂದು ಅವರು ಹೇಳಿದ್ದಾರೆ. ಸಿಂಗ್ ರಚಿಸಿರುವ ಹೊಸ ಸಮಿತಿಯಲ್ಲಿ ಹಿಂದೂಗಳು ಮಾತ್ರ ಇದ್ದಾರೆ. ಈ ಹಿಂದೆ 18 ಸದಸ್ಯರ ಸಮಿತಿಯಲ್ಲಿ 16 ಮಂದಿ ಮುಸ್ಲಿಮರಾಗಿದ್ದರು ಎಂದು ಅವರು ಹೇಳಿದ್ದಾರೆ.
ತೆಲಂಗಾಣ ಸೇನಾ ನೆಲೆಯಿಂದ 4 ಎಕೆ-203 ರೈಫಲ್ ಸೇರಿ11 ಶಸ್ತ್ರಾಸ್ತ್ರಗಳ ಕಳವು
ಸ್ಥಳೀಯರ ಪ್ರಕಾರ, ಮೊಮಿನ್ಪುರದ ಭುಕೈಲಾಶ್ ರಸ್ತೆ-ಹುಸೇನ್ ಶಾ ರಸ್ತೆ ಜಂಕ್ಷನ್ನಲ್ಲಿ ನಡೆಯುವ ಈ ಜನ್ಮಾಷ್ಟಮಿ ಆಚರಣೆಯನ್ನು ಸುಮಾರು 60 ವರ್ಷಗಳ ಹಿಂದೆ ಮುಸ್ಲಿಂ ಸಮಾಜ ಸೇವಕ ಮುಹಮ್ಮದ್ ಕಾಶಿಮ್ ಅವರು ಕಿಡ್ಡರ್ಪೋರ್ ಸಮಾಜ ಕಲ್ಯಾಣ ಸಮಿತಿಯ ಹೆಸರಿನಲ್ಲಿ ಆರಂಭಿಸಿದ್ದರು. 2011ರಲ್ಲಿ ಸರ್ಕಾರ ಬದಲಾದ ಬಳಿಕ ಮುಸ್ಲಿಂ ಯುವಕರ ಗುಂಪೊಂದು ಈ ಆಚರಣೆಗೆ ಮತ್ತೆ ಜನಪ್ರಿಯತೆ ತಂದುಕೊಟ್ಟಿತ್ತು ಎಂದು ಪಿಟಿಐ ವರದಿ ತಿಳಿಸಿದೆ.
ಈ ಬೆಳವಣಿಗೆಗೆ ಆಕ್ಷೇಪ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ಹಿಂದಿನ ಪೂಜಾ ಸಮಿತಿ ಸದಸ್ಯ ಮುಹಮ್ಮದ್ ಆಲಂ, “ಹಿಂದೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಪೂಜೆಯನ್ನು ಆಯೋಜಿಸುತ್ತಿದ್ದರು. ಈ ಬಾರಿ ಮುಸ್ಲಿಂ ಸಮುದಾಯದ ಯಾರನ್ನೂ ಆಹ್ವಾನಿಸಿಲ್ಲ. ಇದು ಭವಿಷ್ಯದ ಸಮಾಜದ ದೃಷ್ಟಿಯಿಂದ ಒಳ್ಳೆಯದಲ್ಲ. ಹಿಂದೂ-ಮುಸ್ಲಿಮರ ನಡುವೆ ಉದ್ದೇಶಪೂರ್ವಕವಾಗಿ ಅಂತರ ಸೃಷ್ಟಿಸಲಾಗುತ್ತಿದೆ,” ಎಂದು ಹೇಳಿದ್ದಾರೆ.
ಮತ್ತೊಬ್ಬ ಮಾಜಿ ಸಮಿತಿ ಸದಸ್ಯ ರಾಕೇಶ್ ಕುಮಾರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಶಿಮ್ ಅವರು ಹಲವು ವರ್ಷಗಳ ಹಿಂದೆ ಈ ಜನ್ಮಾಷ್ಟಮಿ ಆಚರಣೆಯನ್ನು ಆರಂಭಿಸಿದ್ದರು. ಅವರ ನಿಧನದ ಬಳಿಕವೂ ಹಿಂದೂ-ಮುಸ್ಲಿಮರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಆದರೆ ಹೊಸ ಸಮಿತಿಯ ಸದಸ್ಯ ಶಿವಲಾಲ್ ಪಾಸ್ವಾನ್, ಮುಸ್ಲಿಮರು ಹಿಂದೆ ಆಯೋಜನಾ ಸಮಿತಿಯ ಭಾಗವಾಗಿದ್ದರು ಎಂಬುದನ್ನು ನಿರಾಕರಿಸಿದ್ದಾರೆ. ಮುಸ್ಲಿಮರು ಪೂಜೆಯಲ್ಲಿ ಭಾಗವಹಿಸುವುದಕ್ಕೆ, ದೇಣಿಗೆ ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಬಹಳ ಹಿಂದೊಮ್ಮೆ ಒಬ್ಬ ಮುಸ್ಲಿಂ ವ್ಯಕ್ತಿ ಜನ್ಮಾಷ್ಟಮಿ ಪೂಜೆಯ ಆಯೋಜನೆಯ ಜವಾಬ್ದಾರಿ ವಹಿಸಿದ್ದರು. ಅವರು ಮೃತಪಟ್ಟ ಬಳಿಕ ಸಮಿತಿಯಲ್ಲಿ ಮುಸ್ಲಿಮರು ಇರಲಿಲ್ಲ ಎಂದು ಪಾಸ್ವಾನ್ ಹೇಳಿದ್ದಾರೆ. ಈ ಬೆಳವಣಿಗೆಯು ಹಲವು ದಶಕಗಳಿಂದ ಹಿಂದೂ-ಮುಸ್ಲಿಂ ಸಮುದಾಯದವರು ಒಟ್ಟಾಗಿ ಆಚರಿಸುತ್ತಿದ್ದ ಜನ್ಮಾಷ್ಟಮಿ ಹಬ್ಬದ ಸ್ವರೂಪದ ಬಗ್ಗೆ ಚರ್ಚೆಗೆ ಕಾರಣವಾಗಿದೆ.