ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಯಮ ಮೀರಿ ತಲೆ ಎತ್ತಿದ ಮದ್ಯದಂಗಡಿ ವಿರುದ್ಧ ಮುಖ್ಯಮಂತ್ರಿ ವಿಜಯ್‌ ʼಸರ್ಜಿಕಲ್‌ ಸ್ಟ್ರೈಕ್‌ʼ; ತಮಿಳುನಾಡಿನಾದ್ಯಂತ 717 ಮದ್ಯದಂಗಡಿ ಬಂದ್

Liquor shops closed: ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೋಸೆಫ್ ವಿಜಯ್ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಬಳಿ ಕಾರ್ಯನಿರ್ವಹಿಸುತ್ತಿರುವ 717 ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್

ಚೆನ್ನೈ, ಮೇ 12: ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೋಸೆಫ್ ವಿಜಯ್ (Joseph Vijay) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಬಳಿ ಕಾರ್ಯನಿರ್ವಹಿಸುತ್ತಿರುವ 717 ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ. ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ ಎಲ್ಲ ಮದ್ಯದಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚುವಂತೆ ಸೂಚಿಸಲಾಗಿದೆ.

ತಮಿಳುನಾಡು ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಒಟ್ಟು 4,765 ಟಾಸ್ಮ್ಯಾಕ್ ಮದ್ಯದಂಗಡಿಗಳಿವೆ. ಮುಚ್ಚಲು ಗುರುತಿಸಲಾದ 717 ಅಂಗಡಿಗಳಲ್ಲಿ 276 ಪೂಜಾ ಸ್ಥಳಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಇವೆ. ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಒಟ್ಟು 4,765 ಟಾಸ್ಮ್ಯಾಕ್ ಮದ್ಯದಂಗಡಿಗಳಿವೆ ಎಂದು ತಿಳಿಸಿದೆ.

ಇಬ್ಭಾಗವಾಯ್ತು ಎಐಎಡಿಎಂಕೆ; ವಿಜಯ್‌ಗೆ ಬಹಿರಂಗ ಬೆಂಬಲ ಘೋಷಿಸಿದ ಷಣ್ಮುಗಂ ನೇತೃತ್ವದ ಬಣ

ಈ ಕ್ರಮವು ವಿಜಯ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕೈಗೊಂಡ ಮೊದಲ ಪ್ರಮುಖ ನಿರ್ಧಾರ ಎನಿಸಿಕೊಂಡಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದಂಗಡಿಗಳ ಬಗ್ಗೆ ಇರುವ ಕಳವಳಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ನೂತನ ಸರ್ಕಾರದ ಪ್ರಮುಖ ಸಾಮಾಜಿಕ ಸುಧಾರಣಾ ಕ್ರಮ ಎಂದು ಬಿಂಬಿಸಲಾಗುತ್ತಿದೆ.

ಟಾಸ್ಮ್ಯಾಕ್ ರಾಜ್ಯದ ಅತಿ ಹೆಚ್ಚು ಆದಾಯ ತರುವ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಒಂದಾಗಿ ಉಳಿದಿದೆ. ಆದ್ದರಿಂದ ಅದರ ಮಳಿಗೆಗಳನ್ನು ಮುಚ್ಚುವ ನಿರ್ಧಾರವು ತಮಿಳುನಾಡು ಸರ್ಕಾರದ ಹಣಕಾಸಿನ ಸ್ಥಿತಿಗತಿ ಮತ್ತು ಕಲ್ಯಾಣ ಯೋಜನೆಗಳ ಭರವಸೆಗಳನ್ನು ಈಡೇರಿಸುವ ಅದರ ಸಾಮರ್ಥ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ.

ಅಭಿನಂದನೆ

ಈ ನಿರ್ಧಾರವನ್ನು ಹಲವು ರಾಜಕೀಯ ಪಕ್ಷಗಳು ಮತ್ತು ನಾಯಕರು ಸ್ವಾಗತಿಸಿದ್ದು, ಇದು ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸುವ ಮತ್ತು ಮದ್ಯ ನಿಯಂತ್ರಣವನ್ನು ಬಲಪಡಿಸುವತ್ತ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ವಿಜಯ್ ಅವರ ಈ ಕ್ರಮವನ್ನು ನಟ ಮತ್ತು ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅಭಿನಂದಿಸಿದ್ದಾರೆ. ಜತೆಗೆ ಇನ್ನು ಹೆಚ್ಚಿನ ಮದ್ಯದ ಮಳಿಗೆಗಳನ್ನು ಮುಚ್ಚುವಂತೆ ಮತ್ತು ಮದ್ಯದ ಹರಿವನ್ನು ನಿಯಂತ್ರಿಸುವಲ್ಲಿ ಸರ್ಕಾರವು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಮಲ್‌ ಹಾಸನ್‌ ಹೇಳಿದ್ದೇನು?

ʼʼಮದ್ಯ ಮಾರಾಟ ಮಾಡುವುದು ಯಾವತ್ತೂ ಸರ್ಕಾರದ ಕೆಲಸವಾಗಬಾರದು. ಮದ್ಯದ ಹರಿವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ತಮಿಳುನಾಡು ಸರ್ಕಾರವು ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಇಂದು 717 ಮದ್ಯದ ಅಂಗಡಿಗಳನ್ನು ಮುಚ್ಚುವ ಮೂಲಕ ಈ ಕಾರ್ಯ ಆರಂಭವಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ಈ ಕ್ರಮವು ಹೀಗೆಯೇ ಮುಂದುವರಿಯಬೇಕುʼʼ ಎಂದು ನಟ ಕಮಲ್ ಹಾಸನ್ ಹೇಳಿದರು.