ಕಠ್ಮಂಡು, ಆ. 27: ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ (Nepal Floods) ದುರಂತದಲ್ಲಿ ಈಶಾ ಪೌಂಡೇಶನ್ನ (Isha Foundation) 80 ಯಾತ್ರಿಕರ ಗುಂಪು ನಾಪತ್ತೆಯಾಗಿದ್ದು, ಈಶಾ ಕ್ಯಾಂಪನ್ನಲ್ಲಿ ಮೌನ ಆವರಿಸಿದೆ. ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಭಕ್ತರ ತಂಡವು ಘೋರ ವಿಕೋಪಕ್ಕೆ ಸಿಲುಕಿದ್ದುಈಶಾ ಪೌಂಡೇಷನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಭಾವುಕರಾಗಿ ಕಣ್ಣೀರು ಸುರಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೈಲಾಸ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ 80 ಜನರ ತಂಡವು ಟಿಬೆಟ್ನ ಗೈರಾಂಗ್ ಗಡಿ ಪ್ರದೇಶದಲ್ಲಿದ್ದ ಚೀನಾ ಎಮಿಗ್ರೇಷನ್ ಕಚೇರಿಯಲ್ಲಿ ತಂಗಿತ್ತು. ಬುಧವಾರ (ಆಗಸ್ಟ್ 26) ಬೆಳಗ್ಗೆ 9:5ಕ್ಕೆ ತಂಡದ ಮುಖ್ಯಸ್ಥರಿಂದ ಕೊನೆಯ ಸಂದೇಶ ಬಂದಿತ್ತು. 9: 14ರ ಸುಮಾರಿಗೆ ಬೃಹತ್ ಹಿಮಪಾತದ ಪ್ರವಾಹದಿಂದಾಗಿ ಇಡೀ ಎಮಿಗ್ರೇಷನ್ ಕಟ್ಟಡ ಹಾಗೂ ಸುತ್ತಮುತ್ತಲಿನ ಭಾಗಗಳು ಕೊಚ್ಚಿ ಹೋಗಿವೆ. ಕೇವಲ ಒಂದು ವಾರದ ಹಿಂದೆಷ್ಟೇ ತಾವು ನಿಂತಿದ್ದ ಅದೇ ಕಟ್ಟಡ ಸಂಪೂರ್ಣ ನೆಲಸಮವಾಗಿರುವುದನ್ನು ನೆನೆದು ಸದ್ಗುರು ಗದ್ಗದಿತರಾದರು. 12 ಗಂಟೆಗಳಿಗೂ ಹೆಚ್ಚು ಕಾಲ ಕಳೆದರೂ ನಾಪತ್ತೆಯಾದವರಿಂದ ಯಾವುದೇ ಸಂಪರ್ಕ ಸಿಕ್ಕಿಲ್ಲ ಎಂದು ಹೇಳಿದರು.
ಕಣ್ಣೀರಿಟ್ಟ ಸದ್ಗುರು:
ನೇರ ಪ್ರಸಾರದಲ್ಲಿ ಕಣ್ಣೀರಿಟ್ಟ ಸದ್ಗುರು
ಟಿಬೆಟ್ನ ಸಾಂಗಾ ಪ್ರದೇಶದಲ್ಲಿರುವ ಈಶಾ ಕ್ಯಾಂಪ್ನಿಂದ ಜನರನ್ನು ಉದ್ದೇಶಿಸಿ ಮಾತನಾಡಿದ ಸದ್ಗುರು, ಕೈಗಳಲ್ಲಿ ನಾಪತ್ತೆಯಾದವರ ಹೆಸರಿನ ಪಟ್ಟಿ ಹಿಡಿದು ಭಾವುಕರಾದರು. ‘ʼವಿನಾಶದ ಪ್ರಮಾಣವನ್ನು ನೋಡಿದರೆ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಇದು ಅತ್ಯಂತ ಕ್ರೂರವಾದ ವಿಕೋಪ. ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ದುರಂತದ ಚಿತ್ರಣ ನೋಡಲು ಸಾಧ್ಯವಾಗುತ್ತಿಲ್ಲ’ʼ ಎಂದು ತಿಳಿಸಿದರು.
ಗಂಡಕ್ ನದಿಯಲ್ಲಿ ನೀರಿನ ಮಟ್ಟ ಇಳಿಕೆ; ನಿಟ್ಟುಸಿರುಬಿಟ್ಟ ಬಿಹಾರ, ಉತ್ತರ ಪ್ರದೇಶದ ಜನ
ಸದ್ಗುರು ನಾಪತ್ತೆಯಾದ 80 ಜನರ ಹೆಸರು ಓದುತ್ತಿದ್ದಾಗ ಈಶಾ ಭಕ್ತರ ಆಕ್ರಂದನ ಮುಗಿಲು ಮುಟ್ಟಿತು. ಈ ಪಟ್ಟಿಯಲ್ಲಿ 22 ಜನ ಅಮೆರಿಕ, 12 ಜನ ಕೆನಡಾ, 11 ಆಸ್ಟ್ರೇಲಿಯಾ, 9 ಮಂದಿ ಬ್ರಿಟನ್ ಹಾಗೂ ಭಾರತದ 19 ಮಂದಿ ಇದ್ದಾರೆ. ಜತೆಗೆ ಮೂವರು ಸ್ವಯಂಸೇವಕರು ಮತ್ತು ಓರ್ವ ವೈದ್ಯರಿದ್ದರು.
ಭಾರತ ಮತ್ತು ಚೀನಾ ಸರ್ಕಾರಗಳಿಗೆ ಸದ್ಗುರು ಮನವಿ
ದುರಂತ ಸಂಭವಿಸಿದ ಗೈರಾಂಗ್ ಪ್ರದೇಶಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ನೆಟ್ವರ್ಕ್ ಕಡಿತಗೊಂಡಿದೆ. ಸದ್ಗುರು ಸ್ವತಃ ಗೈರಾಂಗ್ಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಯತ್ನಿಸಿದರೂ, ಭೂಕುಸಿತದ ಕಾರಣದಿಂದ ಸಾಧ್ಯವಾಗಲಿಲ್ಲ. ಸದ್ಗುರು ಈಗಾಗಲೇ ಚೀನಾ, ಭಾರತ ಹಾಗೂ ಅಮೆರಿಕ ರಾಯಭಾರ ಕಚೇರಿಗಳಿಗೆ ಪತ್ರ ಬರೆದಿದ್ದು, ಪ್ರವಾಹ ಪೀಡಿತ ಗೈರಾಂಗ್ಗೆ ತೆರಳಲು ತಮಗೆ ಮತ್ತು ರಕ್ಷಣಾ ತಂಡಕ್ಕೆ ಅನುಮತಿ ನೀಡುವಂತೆ ವಿನಂತಿಸಿದ್ದಾರೆ.
ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ, 51ಕ್ಕೂ ಅಧಿಕ ಮಂದಿ ಸಾವು
ನೇಪಾಳ ಗಡಿಯಲ್ಲಿ ಬೃಹತ್ ನಷ್ಟ
ಹಿಮಪಾತದಿಂದ ಭೋಟೆ ಕೋಶಿ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಊರಿಗೆ ಊರೇ ನಾಶವಾಗಿದ್ದು, ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಸುಮಾರು 175ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಭಾರತೀಯ ಹಾಗೂ ಚೀನಾ ಸರ್ಕಾರ ರಕ್ಷಣಾ ಪಡೆಗಳನ್ನು ನಿಯೋಜಿಸಿದ್ದು, ಕಾರ್ಯಾಚರಣೆ ತೀವ್ರಗೊಂಡಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.