ಛಂಡೀಗಢ: ದೆಹಲಿ ವಿಧಾನಸಭಾ ಚುನಾವಣೆ(Delhi Election 2025) ಫಲಿತಾಂಶ ಶನಿವಾರ(ಫೆ.8) ಹೊರಬಿದ್ದಿದ್ದು, ಕಳೆದ ಒಂದು ದಶಕದಿಂದ ರಾಷ್ಟ್ರ ರಾಜಧಾನಿಯನ್ನು ಭದ್ರಕೋಟೆಯಾಗಿಸಿಕೊಂಡಿದ್ದ ಆಮ್ ಆದ್ಮಿ(AAP) ಹೀನಾಯವಾಗಿ ಸೋತಿದೆ. ಸ್ವತಃ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್(Aravind Kejriwal) ಮುಗ್ಗರಿಸಿದ್ದಾರೆ. ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ(Punjab CM) ಬದಲಾವಣೆಯ ಬಗ್ಗೆ ಪ್ರಸ್ತಾಪವಾಗುತ್ತಿದ್ದು, ಸದ್ಯ ಪಂಜಾಬ್ ಸಿಎಂ ಆಗಿರುವ ಭಗವಂತ್ ಮಾನ್(Bhgawant Mann) ಅಧಿಕಾರದಿಂದ ಕೆಳಗಿಳಿಯುತ್ತಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ಭಗವಂತ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರತಿಪಕ್ಷಗಳು ಬೇಕಾದ್ದೂ ಹೇಳಲಿ. ನಾವು ಮತದಾರರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದಿದ್ದಾರೆ.
ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಂಜಾಬ್ನಲ್ಲೂ ಒಂದಷ್ಟು ರಾಜಕೀಯ ಬೆಳವಣಿಗೆಗಳಾದವು. ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಅರವಿಂದ ಕೇಜ್ರಿವಾಲ್ ಪಂಜಾಬ್ ಸಿಎಂ ಕುರ್ಚಿಯಲ್ಲಿ ಕೂರಬಹುದು ಎಂಬ ಸುದ್ದಿ ಹರಡಿತ್ತು. ಪ್ರತಿಪಕ್ಷದ ನಾಯಕರು ಕೂಡ ತಮ್ಮದೇ ಪಕ್ಷ ಅಧಿಕಾರದಲ್ಲಿರುವುದರಿಂದ ಕೇಜ್ರಿವಾಲ್ ಉಪ ಚುನಾವಣೆಯಲ್ಲಿ ಸ್ಫರ್ಧಿಸುವ ಮೂಲಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾದ್ಯತೆಯಿದೆ ಎಂದು ಹೇಳಿದ್ದರು. ಇನ್ನು ಪಂಜಾಬ್ ಸಿಎಂ ಬದಲಾವಣೆಯ ಗೊಂದಲದ ನಡುವೆಯೇ ಅರವಿಂದ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ತಮ್ಮ ಪಕ್ಷದ ಶಾಸಕರೊಂದಿಗೆ ಇಂದು(ಫೆ.11) ಮಹತ್ವದ ಸಭೆ ನಡೆಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಸೋತ ನಂತರ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಪಂಜಾಬ್ ಶಾಸಕರ ಸಭೆ ಕರೆದಿದ್ದರು. ಇದೇ ವೇಳೆ ಸುದ್ದಿಗಾರರು ಪಂಜಾಬ್ ಮುಖ್ಯಮಂತ್ರಿ ಬದಲಾವಣೆಯ ಕುರಿತು ಭಗವಂತ್ ಮಾನ್ ಅವರಲ್ಲಿ ಪ್ರಶ್ನೆ ಕೇಳಿದ್ದಾರೆ. ಭಗವಂತ್ "ವಿರೋಧ ಪಕ್ಷಗಳು ಏನಾದರೂ ಹೇಳಲಿ. ಪಂಜಾಬ್ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುವ ಭರವಸೆಯನ್ನು" ಈಡೇರಿಸುತ್ತದೆ ಎಂದರು. ಇನ್ನು ಪಂಜಾಬ್ನಲ್ಲಿ 20 ಕ್ಕೂ ಹೆಚ್ಚು ಎಎಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರ ಹೇಳಿಕೆಯನ್ನು ಸುದ್ದಿಗಾರರೊಬ್ಬರು ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಭಗವಂತ್ ಮಾನ್ "ಪ್ರತಾಪ್ ಬಜ್ವಾ ಸುಮಾರು ಮೂರು ವರ್ಷಗಳಿಂದ ಇದನ್ನೇ ಹೇಳುತ್ತಿದ್ದಾರೆ. ದೆಹಲಿಯಲ್ಲಿ ಅವರ ಪಕ್ಷದ ಶಾಸಕರ ಸಂಖ್ಯೆಯನ್ನು ಮೂರನೇ ಬಾರಿಗೆ ಎಣಿಸಲು ಹೇಳಿ ಎಂದು ಹೇಳುವ ಮೂಲಕ ದೆಹಲಿ ಚುನಾವಣೆಯಲ್ಲಿನ ಕಾಂಗ್ರೆಸ್ ಶೂನ್ಯ ಸಾಧನೆಯನ್ನು ಅಣಕಿಸಿದರು.
ಈ ಸುದ್ದಿಯನ್ನೂ ಓದಿ:Aravind Kejriwal: ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕೇಜ್ರಿವಾಲ್ಗೆ ಪಂಜಾಬ್ ಸಿಎಂ ಗಾದಿ?
117 ಸದಸ್ಯ ಬಲವಿರುವ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ 93 ಶಾಸಕರನ್ನು ಮತ್ತು ಕಾಂಗ್ರೆಸ್ ಕೇವಲ 16 ಶಾಸಕರನ್ನು ಹೊಂದಿದೆ.