ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ವಿಚಾರಣೆ

Abhishek Banerjee: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಇಡಿ ಕೋಲ್ಕತ್ತಾದಲ್ಲಿ ವಿಚಾರಣೆ ನಡೆಸಿದೆ. ಅಕ್ರಮ ಹಣ ವರ್ಗಾವಣೆ, ನೇಮಕಾತಿ ಅಕ್ರಮ ಹಾಗೂ ಹಗರಣದಿಂದ ಸಂಗ್ರಹವಾದ ಹಣದ ಜಾಡು ಕುರಿತು ತನಿಖೆ ಮುಂದುವರಿದಿದೆ.

ಅಭಿಷೇಕ್ ಬ್ಯಾನರ್ಜಿ (ಸಂಗ್ರಹ ಚಿತ್ರ)

ಕೋಲ್ಕತ್ತಾ, ಜೂ. 15: ಪಶ್ಚಿಮ ಬಂಗಾಳದ ಬಹುಚರ್ಚಿತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ (Primary School Recruitment Scam) ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (Trinamool Congress - TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರನ್ನು ಜಾರಿ ನಿರ್ದೇಶನಾಲಯ ಸೋಮವಾರ ಕೋಲ್ಕತ್ತಾದ ತನ್ನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದೆ.

ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು, ಹಣ ವರ್ಗಾವಣೆ ಹಾಗೂ ಅಕ್ರಮ ಹಣದ ವಹಿವಾಟುಗಳ ಬಗ್ಗೆ ಇಡಿ ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ಲಂಚದ ಹಣ ಪಡೆದವರಿಗೆ ಉದ್ಯೋಗ ನೀಡಲು ಸಂಘಟಿತ ಜಾಲವೊಂದು ಕಾರ್ಯನಿರ್ವಹಿಸಿದೆ ಎಂದು ಇಡಿ ಆರೋಪಿಸಿದೆ.

ಈ ಪ್ರಕರಣದ ತನಿಖೆಯನ್ನು 2022ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಆರಂಭಿಸಲಾಗಿತ್ತು. ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ನೇಮಕಾತಿ ಹಗರಣದಿಂದ ಸಂಗ್ರಹವಾದ ಹಣ ಯಾರಿಗೆ ತಲುಪಿತು, ಅದನ್ನು ಹೇಗೆ ಮರೆಮಾಚಲಾಯಿತು ಅಥವಾ ವರ್ಗಾಯಿಸಲಾಯಿತು ಎಂಬುದರ ಕುರಿತು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ.

2022ರ ಜುಲೈ 23ರಂದು ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ಈ ವೇಳೆ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ನಡೆದ ದಾಳಿಯಲ್ಲಿ 50 ಕೋಟಿ ರುಪಾಯಿಗೂ ಅಧಿಕ ನಗದು ಹಾಗೂ 4.5 ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಈ ಹಣ ನೇಮಕಾತಿ ಹಗರಣದಿಂದ ಬಂದಿರಬಹುದೆಂದು ಇಡಿ ಹೇಳಿತ್ತು.

“ಇಂದಿರಾ ಗಾಂಧಿ ಇರುತ್ತಿದ್ದರೆ ಬಿಜೆಪಿಯನ್ನು ನಿಷೇಧಿಸುತ್ತಿದ್ದರು”: ವಿವಾದ ಸೃಷ್ಟಿಸಿದ ಮಾಜಿ ಸಿಎಂ ಹೇಳಿಕೆ

ಪ್ರಕರಣದಲ್ಲಿ ಚಂದ್ರನಾಥ್ ಸಿನ್ಹಾ ಅವರನ್ನೂ ಆರೋಪಿಯಾಗಿ ಸೇರಿಸಲಾಗಿದ್ದು, 2024ರ ಮಾರ್ಚ್‌ನಲ್ಲಿ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಸುಮಾರು 41 ಲಕ್ಷ ರುಪಾಯಿ ನಗದು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರ ನಿಯಂತ್ರಣದಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಭಾರಿ ಪ್ರಮಾಣದ ಹಣ ಜಮೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಇದುವರೆಗೆ ಈ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಮಾಜಿ ಸಚಿವ ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿ ಹಾಗೂ ಮಾಜಿ ಶಾಸಕ ಮಾನಿಕ್ ಭಟ್ಟಾಚಾರ್ಯ ಸೇರಿ 54 ಮಂದಿ ಮತ್ತು ಸಂಸ್ಥೆಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಾಥಮಿಕ ಶಾಲಾ ನೇಮಕಾತಿ ಹಗರಣಕ್ಕೆ ನೇರವಾಗಿ ಸಂಬಂಧಿಸಿದ ಸುಮಾರು 154 ಕೋಟಿ ರುಪಾಯಿ ಮೌಲ್ಯದ ಆಸ್ತಿಗಳನ್ನು ಇಡಿ ಈಗಾಗಲೇ ಜಪ್ತಿ ಮಾಡಿದೆ.

ಇದರ ಜತೆಗೆ ಶಿಕ್ಷಕರ ನೇಮಕಾತಿ, ಎಸ್‌ಎಸ್‌ಸಿ ಸಹಾಯಕ ಶಿಕ್ಷಕರ ನೇಮಕಾತಿ, ಗ್ರೂಪ್-ಸಿ ಹಾಗೂ ಗ್ರೂಪ್-ಡಿ ನೇಮಕಾತಿ ಹಗರಣಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಒಟ್ಟು 641 ಕೋಟಿ ರುಪಾಯಿ ಮೌಲ್ಯದ ಆಸ್ತಿಗಳನ್ನು ಇಡಿ ಜಪ್ತಿ ಮಾಡಿರುವುದಾಗಿ ತಿಳಿಸಿದೆ.

ಕಳೆದ ವರ್ಷ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಮೂಲಕ ನೇಮಕಗೊಂಡಿದ್ದ 25,000ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ರದ್ದುಪಡಿಸಿದ್ದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಸಂಪೂರ್ಣ ಆಯ್ಕೆ ಪ್ರಕ್ರಿಯೆಯು "ಕುತಂತ್ರ ಮತ್ತು ವಂಚನೆಯಿಂದ ಕಲುಷಿತಗೊಂಡಿದೆ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.