ಮುಂಬೈ, ಆ. 1: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶನಿವಾರ (ಆಗಸ್ಟ್ 1) ಮಹಾರಾಷ್ಟ್ರದ ಪುಣೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರಿಗೆ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ 2026 ಅನ್ನು (Lokmanya Tilak Award) ಪ್ರದಾನ ಮಾಡಿದರು. ಈ ವೇಳೆ, ಲೋಕಮಾನ್ಯ ಬಾಲಗಂಗಾಧರ ತಿಲಕರ ನಿರ್ಭೀತ ರಾಷ್ಟ್ರವಾದಿ ದೃಷ್ಟಿಕೋನವನ್ನು ಎನ್ಎಸ್ಎ ಅಜಿತ್ ದೋವಲ್ (Ajit Doval) ರೂಪಿಸಿದ ಆಧುನಿಕ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಹೋಲಿಸಿದರು.
ತಿಲಕರ 106ನೇ ಪುಣ್ಯತಿಥಿಯಂದು ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಾ, ಭಾರತದ ಭದ್ರತೆ ಮತ್ತು ವಿದೇಶಾಂಗ ನೀತಿಗೆ ದೋವಲ್ ನೀಡಿದ ಕೊಡುಗೆಗಳು ರಾಷ್ಟ್ರದ ಇತಿಹಾಸದಲ್ಲಿ ಅವರಿಗೆ ಶಾಶ್ವತ ಸ್ಥಾನ ಗಳಿಸಿಕೊಟ್ಟಿದೆ ಎಂದು ಹೇಳಿದರು. “ಇತಿಹಾಸ ಬರೆಯುವಾಗ ಯಾರಾದರೂ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯ ಬಗ್ಗೆ ವಿಶ್ಲೇಷಣೆ ನಡೆಸಿದರೆ, ಅಜಿತ್ ದೋವಲ್ ಅವರಿಗಾಗಿ ಒಂದು ಸುವರ್ಣಪುಟವನ್ನು ಮೀಸಲಿಡಲೇಬೇಕು. ಇದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಅಮಿತ್ ಶಾ ಹೇಳಿದರು.
ಗೃಹ ಸಚಿವರು ತಮ್ಮ ಭಾಷಣವನ್ನು ತಿಲಕರಿಗೆ ಗೌರವ ಸಲ್ಲಿಸುವ ಮೂಲಕ ಪ್ರಾರಂಭಿಸಿದರು. ಸ್ವಾತಂತ್ರ್ಯ ಹೋರಾಟವನ್ನು ಪರಿವರ್ತಿಸಿದ ಯುಗದ ಪುರುಷ ಎಂದು ಬಣ್ಣಿಸಿದರು. ʼʼತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು, ಹೊಸ ಅರ್ಥವನ್ನು ನೀಡಿದರು. ಅವರು ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ದೊಡ್ಡ ಘೋಷಣೆಯನ್ನು ಮಾಡಿದರು ಎಂದು ಹೇಳಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮಿತ್ ಶಾ
ʼʼಈ ದೇಶದ ಜನರಿಗೆ ಯಾರೂ ಸ್ವರಾಜ್ಯವನ್ನು ನೀಡಲು ಸಾಧ್ಯವಿಲ್ಲ. ಈ ಹಕ್ಕು ಈ ದೇಶದ ಜನರಿಗೆ ಸೇರಿದ್ದು, ನಾವು ಅದನ್ನು ಸಾಧಿಸುತ್ತೇವೆ. ಕೋಟ್ಯಂತರ ಜನರ ಹೃದಯದಲ್ಲಿ, ಅವರು ಸ್ವರಾಜ್ಯದ ಮಂತ್ರವನ್ನು ಬೆಳಗಿಸಿದರು. ಯುಗದ ಪುರುಷ, ಮಹಾನ್ ಶಿಕ್ಷಕ, ನಿರ್ಭೀತ ಪತ್ರಕರ್ತ, ಚಿಂತಕ, ಕರ್ಮಯೋಗಿ, ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಸಂಪೂರ್ಣ ಸ್ವಾತಂತ್ರ್ಯ ಹೋರಾಟದ ಸಂಪರ್ಕವನ್ನು ಬೇರೆ ಯಾರೂ ಹೋಲಿಸಲಾಗದು. ಅವರು ಅತ್ಯಂತ ಉನ್ನತ ಸ್ಥಾನದಲ್ಲಿದ್ದರುʼʼ ಎಂದು ಶಾ ತಿಳಿಸಿದರು.
ತಿಲಕರು ಶಿಕ್ಷಕರಾಗಿದ್ದರು, ರಾಷ್ಟ್ರೀಯ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದರು ಹಾಗೂ ಉತ್ಸಾಹಭರಿತ ಪತ್ರಕರ್ತರೂ ಆಗಿದ್ದರು. ಒಬ್ಬ ಪತ್ರಕರ್ತ ಎಷ್ಟರ ಮಟ್ಟಿಗೆ ನಿರ್ಭೀತನಾಗಿರಬಹುದು ಎಂಬುದನ್ನು ಕೇಸರಿ ಪತ್ರಿಕೆಯಲ್ಲಿ ಅವರು ಬರೆದ ಲೇಖನಗಳನ್ನು ಓದಿದಾಗ ಮಾತ್ರ ಅರಿಯಬಹುದು. ಮಹಾನ್ ಚಿಂತಕರಾಗಿ ತಿಲಕ್ ಮಹಾರಾಜರು ಭಾರತದ ಆತ್ಮವನ್ನು ಜಗತ್ತಿನ ಮುಂದೆ ಅಭಿವ್ಯಕ್ತಪಡಿಸುವ ಕಾರ್ಯ ಮಾಡಿದರು. ಗಣೇಶ ಮತ್ತು ಶಿವಾಜಿ ಹಬ್ಬಗಳನ್ನು ಪ್ರಾರಂಭಿಸಿದ್ದು ತಿಲಕರು. ದೇಶವು ಇಂದಿಗೂ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.
“ನಮ್ಮ ದೇಶದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಆವೇಳೆ ನನಗೆ ಅಜಿತ್ ಅವರ ಪರಿಚಯವಿರಲಿಲ್ಲ. ಆ ಸಮಯದಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇದು ಕೇವಲ ಬಾಂಬ್ ಸ್ಫೋಟವಲ್ಲ. ಇದರ ಹಿಂದೆ ದೇಶದಾದ್ಯಂತ ನಡೆದಿರುವ ಸ್ಫೋಟಗಳಿಗೂ ಸಂಬಂಧ ಇರಬಹುದು. ಗುಜರಾತ್ ಪೊಲೀಸರು ಈ ಎಲ್ಲಾ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು. ಅಜಿತ್ ದೋವಲ್ ಅವರನ್ನು ಸಂಪರ್ಕಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ” ಎಂದು ಸೂಚಿಸಿದ್ದರು.
“ಅಜಿತ್ ಮಧ್ಯಾಹ್ನದ ವೇಳೆ ನನ್ನ ಮನೆಗೆ ಬಂದಿದ್ದರು. ಅವರು ನೀಡಿದ ಸಲಹೆಗಳ ಪರಿಣಾಮವಾಗಿ ಗುಜರಾತ್ ಪೊಲೀಸರು ಅಹಮದಾಬಾದ್ ಬಾಂಬ್ ಸ್ಫೋಟವನ್ನು ಮಾತ್ರವಲ್ಲದೆ ದೇಶಾದ್ಯಂತ ನಡೆದ 13 ಬಾಂಬ್ ಸ್ಫೋಟಗಳನ್ನು ಏಕಕಾಲದಲ್ಲಿ ಪರಿಹರಿಸುವಲ್ಲಿ ಯಶಸ್ವಿಯಾದರು. ಇದು ಬಹಳ ದೊಡ್ಡ ಸಾಧನೆ” ಎಂದು ಶಾ, ದೋವಲ್ ಅವರನ್ನು ಹೊಗಳಿದರು.