ರಾಯ್ಪುರ, ಆ. 28: ಛತ್ತೀಸ್ಗಢದ ಬಿಲಾಸಪುರದಲ್ಲಿರುವ ಬಿಲಾಸಾ ದೇವಿ ಕೆವಟ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ಆಗಸ್ಟ್ 28) ಲ್ಯಾಂಡಿಂಗ್ ವೇಳೆ ಅಲಯನ್ಸ್ ಏರ್ ವಿಮಾನದ ಒಂದು ಟೈರ್ ಸ್ಫೋಟಗೊಂಡು ತಾಂತ್ರಿಕ ಸಮಸ್ಯೆ ಉಂಟಾಗಿದೆ. ಆದರೆ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನವನ್ನು ನಿಯಂತ್ರಿಸಿ ರನ್ವೇಯಲ್ಲಿ ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನದಲ್ಲಿದ್ದ 34 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 38 ಮಂದಿ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ.
ದೆಹಲಿಯಿಂದ ಬಿಲಾಸಪುರಕ್ಕೆ ಆಗಮಿಸುತ್ತಿದ್ದ ಅಲಯನ್ಸ್ ಏರ್ನ 9I613 (VT-UDA) ವಿಮಾನವು ಶುಕ್ರವಾರ ಬೆಳಗ್ಗೆ ಸುಮಾರು 10.55ಕ್ಕೆ ಬಿಲಾಸಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಈ ಘಟನೆ ನಡೆದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಲಭ್ಯವಾದ ಮಾಹಿತಿ ತಿಳಿಸಿದೆ.
ಛತ್ತೀಸ್ಗಢದ ಬಿಲಾಸಪುರ ವಿಮಾನ ನಿಲ್ದಾಣದ ದೃಶ್ಯ:
ಲ್ಯಾಂಡಿಂಗ್ ವೇಳೆ ಏಕಾಏಕಿ ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುರಕ್ಷತಾ ವ್ಯವಸ್ಥೆಗಳು ತಕ್ಷಣ ಸಕ್ರಿಯಗೊಂಡವು. ಅಧಿಕಾರಿಗಳು ಹಾಗೂ ನೆಲದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ವಿಮಾನವನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಟೈರ್ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತಾಂತ್ರಿಕ ತಂಡ ಪರಿಶೀಲನೆ ಆರಂಭಿಸಿದೆ.
ತಾಂತ್ರಿಕ ಸಮಸ್ಯೆಯ ನಡುವೆಯೂ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ರನ್ವೇಯಲ್ಲಿ ನಿಲ್ಲಿಸಿದ್ದು, ಯಾವುದೇ ಪ್ರಯಾಣಿಕ ಅಥವಾ ಸಿಬ್ಬಂದಿಗೆ ಗಾಯವಾಗಿಲ್ಲ.
ನೇಪಾಳ ಪ್ರವಾಹ: ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ ಕರ್ನಾಟಕದ ಟೆಕ್ಕಿ ನಾಪತ್ತೆ
ಪ್ರಯಾಗ್ರಾಜ್ ವಿಮಾನವೂ ರದ್ದು
ಈ ಘಟನೆ ಬಿಲಾಸಪುರದಿಂದ ಪ್ರಯಾಗ್ರಾಜ್ಗೆ ತೆರಳಬೇಕಿದ್ದ ಮುಂದಿನ ಅಲಯನ್ಸ್ ಏರ್ ವಿಮಾನ ಸೇವೆಯ ಮೇಲೂ ಪರಿಣಾಮ ಬೀರಿದೆ. ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಸದ್ಯ ವಿಮಾನ ತಾಂತ್ರಿಕ ತಪಾಸಣೆಗೆ ಒಳಪಟ್ಟಿದೆ. ಟೈರ್ ಸ್ಫೋಟಕ್ಕೆ ನಿಖರ ಕಾರಣ ಹಾಗೂ ವಿಮಾನದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯ ಸ್ವರೂಪ ತಪಾಸಣೆ ಪೂರ್ಣಗೊಂಡ ಬಳಿಕ ತಿಳಿದುಬರಲಿದೆ. ತಾಂತ್ರಿಕ ತಂಡದ ವರದಿ ಬಂದ ನಂತರ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.