ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೊಲೀಸ್ ಅಧಿಕಾರಿಯಿಂದ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಗಾದಿ ತನಕ: ಇದು ಸಿಂಗಂ ಅಣ್ಣಾಮಲೈ ಯಶೋಗಾಥೆ

ಬಿಜೆಪಿಯ ಪ್ರಮುಖ ನಾಯಕನಾಗಿ ಹೊರ ಹೊಮ್ಮಿದ ಐಪಿಎಸ್ ಮಾಜಿ ಅಧಿಕಾರಿ ಕೆ. ಅಣ್ಣಾಮಲೈ ಸದ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವ ಮೂಲಕ ಸದ್ದು ಮಾಡಿದ್ದಾರೆ. 2019ರಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಅವರು, 2021ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡರೂ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು. ‘ಎನ್ ಮಣ್ಣ್‌ ಎನ್ ಮಕ್ಕಲ್’ ಯಾತ್ರೆಯ ಮೂಲಕ ಗಮನ ಸೆಳೆದರು.

ಅಣ್ಣಾಮಲೈ (ಸಂಗ್ರಹ ಚಿತ್ರ)

ಚೆನ್ನೈ, ಜೂ. 2: ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ (K Annamalai) ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ (Tamil Nadu Politics) ಅತ್ಯಂತ ಚರ್ಚಿತ ನಾಯಕರಲ್ಲಿ ಒಬ್ಬರಾಗಿ ಹೊಮ್ಮಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದ ಅವರು, ರಾಜಕೀಯ ಪ್ರವೇಶದ ಬಳಿಕ ಬಿಜೆಪಿಯ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ದಿಢೀರ್‌ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಕೆ. ಅಣ್ಣಾಮಲೈ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದರು. ದಕ್ಷ ಹಾಗೂ ನೇರ ನುಡಿಯ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಅವರು ʼಸಿಂಗಂ ಅಣ್ಣಾಮಲೈʼ ಎಂಬ ಹೆಸರಿನಿಂದಲೂ ಜನಪ್ರಿಯರಾಗಿದ್ದರು. ಅಪರಾಧ ನಿಯಂತ್ರಣ ಹಾಗೂ ಆಡಳಿತದಲ್ಲಿ ತೋರಿದ ಕಟ್ಟುನಿಟ್ಟಿನ ನಿಲುವಿನಿಂದ ಸಾರ್ವಜನಿಕರ ಗಮನ ಸೆಳೆದಿದ್ದರು.

2019ರಲ್ಲಿ ಅಣ್ಣಾಮಲೈ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಸರ್ಕಾರಿ ಸೇವೆಯಲ್ಲಿ ಉತ್ತಮ ಭವಿಷ್ಯವಿದ್ದರೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದರು. ರಾಜೀನಾಮೆಯ ಬಳಿಕ ತವರು ರಾಜ್ಯ ತಮಿಳುನಾಡಿಗೆ ಮರಳಿದ ಅವರು ಕೃಷಿಯಲ್ಲಿ ತೊಡಗಿಕೊಳ್ಳಲು ಹಾಗೂ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುವುದಾಗಿ ಹೇಳಿದ್ದರು.

ರಾಜಕೀಯ ಪ್ರವೇಶ ಮತ್ತು ಬಿಜೆಪಿ ಸೇರ್ಪಡೆ

ಪೊಲೀಸ್ ಸೇವೆ ತೊರೆದ ಬಳಿಕ ಅಣ್ಣಾಮಲೈ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿಚಾರಧಾರೆಯಿಂದ ಪ್ರೇರಿತರಾಗಿ 2020ರಲ್ಲಿ ಬಿಜೆಪಿ ಸೇರ್ಪಡೆಯಾದರು. ರಾಜಕೀಯಕ್ಕೆ ಹೊಸಬರಾಗಿದ್ದರೂ ಅವರ ನಾಯಕತ್ವ ಗುಣ, ಭಾಷಣ ಕೌಶಲ್ಯ ಮತ್ತು ಜನಸಂಪರ್ಕ ಸಾಮರ್ಥ್ಯದಿಂದ ಬಿಜೆಪಿ ನಾಯಕರ ಗಮನ ಸೆಳೆದರು.

ತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ಮುಖ ಹಾಗೂ ಹೊಸ ಶಕ್ತಿ ನೀಡುವ ನಾಯಕನಾಗಿ ಅವರನ್ನು ಪಕ್ಷ ಬೆಳೆಸಲು ಆರಂಭಿಸಿತು. ಯುವಕರಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಶೀಘ್ರವೇ ಜನಪ್ರಿಯತೆ ಗಳಿಸಿದರು.

ಮೊದಲ ಚುನಾವಣೆಯಲ್ಲೇ ಸೋಲು

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದರು. ಕರೂರು ಜಿಲ್ಲೆಯ ಅರವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಬಲಿಷ್ಠ ಪೈಪೋಟಿ ನೀಡಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಚುನಾವಣಾ ಸೋಲು ಅವರ ರಾಜಕೀಯ ಪಯಣಕ್ಕೆ ಅಡ್ಡಿಯಾಗಲಿಲ್ಲ. ರಾಜ್ಯದಾದ್ಯಂತ ಪಕ್ಷ ಸಂಘಟನೆಯನ್ನು ಬಲಪಡಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡರು.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ

2021ರಲ್ಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆತ ಬಳಿಕ, ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತು. ಈ ಜವಾಬ್ದಾರಿ ಪಡೆದ ಬಳಿಕ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಯನ್ನು ಗ್ರಾಮ ಮಟ್ಟದವರೆಗೆ ವಿಸ್ತರಿಸಲು ಮುಂದಾದರು. ದ್ರಾವಿಡ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯ ಸ್ಥಾನ ಕಲ್ಪಿಸುವ ಗುರಿಯನ್ನು ಅವರು ಹೊಂದಿದ್ದರು.

ʼಎನ್ ಮಣ್ಣ್‌ ಎನ್ ಮಕ್ಕಲ್ʼ ಯಾತ್ರೆ

ಅಣ್ಣಾಮಲೈ ಅವರ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ಅಭಿಯಾನ ಎಂದರೆ ಅದು ʼಎನ್ ಮಣ್ಣ್‌ ಎನ್ ಮಕ್ಕಲ್ʼ (ನನ್ನ ಮಣ್ಣು, ನನ್ನ ಜನ) ಯಾತ್ರೆ. ಈ ಯಾತ್ರೆಯ ಮೂಲಕ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳವರೆಗೆ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಬಿಜೆಪಿಯ ನೆಲೆಯನ್ನು ವಿಸ್ತರಿಸಲು ಈ ಯಾತ್ರೆ ನೆರವಾಯಿತು. ತಮಿಳುನಾಡಿನ ರಾಜಕೀಯ ಭವಿಷ್ಯದಲ್ಲಿ ತಮ್ಮ ಪಾತ್ರವನ್ನು ಬಲಪಡಿಸಲು ಇದು ಪ್ರಮುಖ ಹೆಜ್ಜೆಯಾಗಿ ಪರಿಣಮಿಸಿತು.

ಬಿಜೆಪಿಗೆ ಗುಡ್‌ ಬೈ ಹೇಳಿದ ಅಣ್ಣಾಮಲೈ; ನಿತಿನ್‌ ನಬಿನ್‌ಗೆ ರಾಜೀನಾಮೆ ಪತ್ರ ಹಸ್ತಾಂತರಿಸಿದ ʼಸಿಂಗಂʼ

ಎಷ್ಟು ಆಸ್ತಿ ಹೊಂದಿದ್ದಾರೆ ಅಣ್ಣಾಮಲೈ?

2024ರ ಚುನಾವಣಾ ಪ್ರಮಾಣಪತ್ರದ ಪ್ರಕಾರ, ಕೆ. ಅಣ್ಣಾಮಲೈ ಒಟ್ಟು ಘೋಷಿತ ಆಸ್ತಿ ಸುಮಾರು 1.5 ಕೋಟಿ ರುಪಾಯಿ. ಇದರಲ್ಲಿ 49 ಲಕ್ಷ ರುಪಾಯಿ ಮೌಲ್ಯದ ಚರ ಆಸ್ತಿಗಳು ಸೇರಿದ್ದು, ಬ್ಯಾಂಕ್ ಠೇವಣಿಗಳು, ಚಿನ್ನ ಹಾಗೂ ಇತರೆ ಹೂಡಿಕೆಗಳು ಒಳಗೊಂಡಿವೆ. 1 ಕೋಟಿ ರುಪಾಯಿ ಮೌಲ್ಯದ ಸ್ಥಿರ ಆಸ್ತಿಗಳು ಮುಖ್ಯವಾಗಿ ಕರೂರು ಜಿಲ್ಲೆಯಲ್ಲಿರುವ ಪೂರ್ವಜರ ಜಮೀನು ಮತ್ತು ಆಸ್ತಿಗಳನ್ನು ಒಳಗೊಂಡಿದೆ.

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹಲವಾರು ನಾಯಕರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಸಂದರ್ಭದಲ್ಲಿ, ಅಣ್ಣಾಮಲೈ ಅವರ ಘೋಷಿತ ಆಸ್ತಿ ತುಲನಾತ್ಮಕವಾಗಿ ಕಡಿಮೆ ಪ್ರಮಾಣದಲ್ಲಿರುವುದು ಗಮನಾರ್ಹ. ಇದನ್ನು ಅವರ ಬೆಂಬಲಿಗರು ಸರಳತೆ ಮತ್ತು ಆರ್ಥಿಕ ಪಾರದರ್ಶಕತೆಯ ಸಂಕೇತವಾಗಿ ಬಿಂಬಿಸುತ್ತಾರೆ.

ಸರಳ ಜೀವನಶೈಲಿ ಮತ್ತು ಹೂಡಿಕೆಗಳು

ಅಣ್ಣಾಮಲೈ ದೊಡ್ಡ ಪ್ರಮಾಣದ ಷೇರು ಮಾರುಕಟ್ಟೆ ಹೂಡಿಕೆಗಳನ್ನು ಹೊಂದಿಲ್ಲ. ಬ್ಯಾಂಕ್ ಠೇವಣಿಗಳು, ವಿಮಾ ಯೋಜನೆಗಳು ಹಾಗೂ ಸಾಂಪ್ರದಾಯಿಕ ಹೂಡಿಕೆಗಳಿಗೆ ಅವರು ಆದ್ಯತೆ ನೀಡಿದ್ದಾರೆ. ಯಾವುದೇ ದೊಡ್ಡ ಉದ್ಯಮ ಅಥವಾ ವ್ಯಾಪಾರಿಕ ಸಾಮ್ರಾಜ್ಯಕ್ಕೆ ಅವರು ಸಂಬಂಧ ಹೊಂದಿಲ್ಲ. ಇದರಿಂದ ಭ್ರಷ್ಟಾಚಾರ ಮತ್ತು ಪಾರದರ್ಶಕತೆ ಕುರಿತು ಮಾತನಾಡುವಾಗ ಅವರಿಗೆ ರಾಜಕೀಯವಾಗಿ ಹೆಚ್ಚಿನ ವಿಶ್ವಾಸಾರ್ಹತೆ ದೊರೆಯುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಐಐಎಂ ಶಿಕ್ಷಣದ ಪ್ರಭಾವ

ಅಣ್ಣಾಮಲೈ ಐಐಎಂ ಲಖನೌನಲ್ಲಿ ನಿರ್ವಹಣಾ ಶಿಕ್ಷಣ ಪಡೆದಿದ್ದಾರೆ. ಡೇಟಾ ಆಧಾರಿತ ರಾಜಕೀಯ ತಂತ್ರಗಳು, ಸಾಮಾಜಿಕ ಮಾಧ್ಯಮ ಬಳಕೆ ಹಾಗೂ ಆಧುನಿಕ ಚುನಾವಣಾ ಪ್ರಚಾರ ವಿಧಾನಗಳನ್ನು ಬಳಸುವಲ್ಲಿ ಅವರು ಇತರ ನಾಯಕರಿಗಿಂತ ಭಿನ್ನವಾಗಿ ಕಾಣಿಸುತ್ತಾರೆ. ಯುವಕರ ಉದ್ಯೋಗ, ಆರ್ಥಿಕ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆ ಕುರಿತ ವಿಚಾರಗಳನ್ನು ಅವರು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದಾರೆ.

ತಮಿಳುನಾಡು ರಾಜಕೀಯದ ಕೇಂದ್ರಬಿಂದು

ಪೊಲೀಸ್ ಅಧಿಕಾರಿಯಿಂದ ರಾಜಕೀಯ ನಾಯಕನಾಗಿ ಬೆಳೆದ ಅಣ್ಣಾಮಲೈ ಇಂದು ತಮಿಳುನಾಡು ರಾಜಕೀಯದ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಯುವಕರಲ್ಲಿ ಹೆಚ್ಚುತ್ತಿರುವ ಜನಪ್ರಿಯತೆ, ಸಂಘಟನಾ ಸಾಮರ್ಥ್ಯ ಮತ್ತು ನೇರ ರಾಜಕೀಯ ಶೈಲಿಯಿಂದ ಅವರು ರಾಜ್ಯ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ರಾಜೀನಾಮೆ ನೀಡಿದ್ದೇಕೆ?

ಹೀಗೆ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಇದೀಗ ಪಕ್ಷದ ಸದ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಸಿಬಿಎಸ್‌ಇ ತ್ರಿಭಾಷಾ ನೀತಿ ಸೇರಿ ಕೇಂದ್ರ ಸರ್ಕಾರದ ನಿಲುವನ್ನು ಅಣ್ಣಾಮಲೈ ವಿರೋಧಿಸಿದ್ದರು. ಅಲ್ಲದೆ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಹೀಗಾಗಿ ಅವರ ಮುಂದಿನ ನಿಲುವು ಏನು ಎಂಬ ಪ್ರಶ್ನೆ ಉದ್ಭವಿಸಿದ್ದವು. ಬಿಜೆಪಿಯಲ್ಲಿ ಅಣ್ಣಾಮಲೈ ಅವರನ್ನು ಕಡಗಣನೆ ಮಾಡಲಾಗುತ್ತಿದೆ ಎಂಬ ಮಾತುಗಳ ನಡುವೆ ತಮ್ಮ ಹೊಸ ಆಂದೋಲನದ ಮೂಲಕ ಬಿಜೆಪಿಗೆ ಶಾಕ್ ಕೊಡಲು ಅಣ್ಣಾಮಲೈ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.