ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಣಿಕೆ ದುರುಪಯೋಗ ವಿವಾದ ಇದ್ದರೂ ನಂಬಿಕೆ ಕಳೆದುಕೊಳ್ಳದ ಭಕ್ತರು; ಅಯೋಧ್ಯೆ ರಾಮ ಮಂದಿರದ ದೇಣಿಗೆ ದುಪ್ಪಟ್ಟು

Ayodhya Ram Mandir Donations: ಅಯೋಧ್ಯೆಗೆ ಭೇಟಿ ನೀಡುತ್ತಿರುವ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬ್ಯಾಂಕಿಂಗ್ ಮತ್ತು ದೇವಾಲಯ ಸಂಬಂಧಿತ ಮೂಲಗಳ ಪ್ರಕಾರ, ಏನೇ ವಿವಾದವಿದ್ದರೂ ಕಾಣಿಕೆ ಮತ್ತು ದೇಣಿಗೆಗಳಿಂದ ಪ್ರತಿದಿನ ಜಮಾ ಆಗುವ ಮೊತ್ತವು ದಿನೇ ದಿನೇ ಹೆಚ್ಚುತ್ತಿದೆ.

ಅಯೋಧ್ಯೆ ರಾಮ ಮಂದಿರ (ಸಂಗ್ರಹ ಚಿತ್ರ)

ಅಯೋಧ್ಯೆ, ಜೂ.30: ಶ್ರೀರಾಮ ಜನ್ಮಭೂಮಿ (Ayodhya Ram Mandir) ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ತೀವ್ರಗೊಂಡಿದ್ದರೂ, ರಾಮಭಕ್ತರ ಅಪಾರ ನಂಬಿಕೆ ಹಾಗೂ ಮಂದಿರಕ್ಕೆ ಹರಿದುಬರುವ ಭಕ್ತಿಯ ಕಾಣಿಕೆಗೆ ಯಾವುದೇ ಧಕ್ಕೆಯಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಇತ್ತೀಚಿನ ದಿನಗಳಲ್ಲಿ ಕಾಣಿಕೆ ಹಣದ ದುರುಪಯೋಗದ (donation controversy) ವಿವಾದಗಳು ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದರೂ, ಮಂದಿರಕ್ಕೆ ಬರುವ ದೈನಂದಿನ ದೇಣಿಗೆಯ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಅಯೋಧ್ಯೆಗೆ ಭೇಟಿ ನೀಡುತ್ತಿರುವ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬ್ಯಾಂಕಿಂಗ್ ಮತ್ತು ದೇವಾಲಯ ಸಂಬಂಧಿತ ಮೂಲಗಳ ಪ್ರಕಾರ, ಏನೇ ವಿವಾದವಿದ್ದರೂ ಕಾಣಿಕೆ ಮತ್ತು ದೇಣಿಗೆಗಳಿಂದ ಪ್ರತಿದಿನ ಜಮಾ ಆಗುವ ಮೊತ್ತವು ದಿನೇ ದಿನೇ ಹೆಚ್ಚುತ್ತಿದೆ. ಮೊದಲು ಸರಾಸರಿ ದೈನಂದಿನ ಠೇವಣಿ ಸುಮಾರು 10-12 ಲಕ್ಷ ರೂ.ಗಳಷ್ಟಿತ್ತು. ಈಗ ಅದು ದಿನಕ್ಕೆ ಸರಿಸುಮಾರು 20-24 ಲಕ್ಷ ರೂ.ಗಳಿಗೆ ಏರಿದೆ.

ದೇಶಾದ್ಯಂತ ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದೇ ದೇಣಿಗೆ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗಿದೆ. ರಜಾ ದಿನಗಳಲ್ಲಿ ರಾಮಲಲ್ಲಾ ದರ್ಶನ ಪಡೆಯಲು ಬರುವ ಯಾತ್ರಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ದೇವಾಲಯದಲ್ಲಿ ದೇಣಿಗೆ ಮತ್ತು ಕಾಣಿಕೆಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

3 ತಿಂಗಳ ಹಿಂದೆಯೇ ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪತ್ತೆ ಹಚ್ಚಿದ್ದ ಎಸ್‌ಬಿಐ; ಸಿಬ್ಬಂದಿ ವಜಾ ಶಿಫಾರಸು ತಳ್ಳಿ ಹಾಕಿದ್ದ ಟ್ರಸ್ಟ್‌ ಅಧಿಕಾರಿಗಳು

ರಾಮ ಮಂದಿರದ ಕಾಣಿಕೆ ಹಣದ ನಿರ್ವಹಣೆಯಲ್ಲಿ ಅಕ್ರಮ ಮತ್ತು ಕಳ್ಳತನ ನಡೆದಿದೆ ಎಂಬ ಆರೋಪದ ಮೇಲೆ ಇತ್ತೀಚೆಗೆ ಎಫ್‌ಐಆರ್ (FIR) ದಾಖಲಾಗಿದ್ದು, ಇದು ದೇಶಾದ್ಯಂತ ಭಾರಿ ರಾಜಕೀಯ ವಾಗ್ದಾಳಿ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಂದಿರದ ಟ್ರಸ್ಟ್‌ನ ಹಣಕಾಸು ನಿರ್ವಹಣೆ ಮತ್ತು ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದು, ಪ್ರಸ್ತುತ ತನಿಖಾ ಸಂಸ್ಥೆಗಳು ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸುತ್ತಿವೆ. ಈ ಎಲ್ಲಾ ವಿವಾದ ಮತ್ತು ಕಾನೂನು ಪ್ರಕ್ರಿಯೆಗಳ ನಡುವೆಯೂ, ಭಕ್ತರು ಮಂದಿರಕ್ಕೆ ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡುವುದನ್ನು ಮುಂದುವರಿಸಿರುವುದು ವಿಶೇಷವಾಗಿದೆ.

ಇತ್ತೀಚಿನ ದೇಣಿಗೆಯ ಅಂಕಿ-ಅಂಶಗಳನ್ನು ಗಮನಿಸಿದರೆ ಈ ವಿವಾದವು ಭಕ್ತರ ಉತ್ಸಾಹ ಅಥವಾ ನಂಬಿಕೆಯನ್ನು ಕುಗ್ಗಿಸಿಲ್ಲ ಎಂಬುದನ್ನು ತೋರಿಸಿದೆ. ಆರೋಪಗಳು ಏನೇ ಇದ್ದರೂ, ಕಾಣಿಕೆ ಪ್ರಮಾಣದಲ್ಲಿನ ಈ ಏರಿಕೆಯು ತೀರ್ಥಯಾತ್ರಿಕರು ಮಂದಿರದ ಮೇಲಿಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ದೇವಾಲಯ ಸಂಬಂಧಿತ ಮೂಲಗಳು ತಿಳಿಸಿವೆ.

ಆದರೆ, ದೈನಂದಿನ ದೇಣಿಗೆಯಲ್ಲಿ ಕಂಡುಬಂದಿರುವ ಈ ಭಾರಿ ಏರಿಕೆಯ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಈ ಪ್ರಸ್ತುತ ಅಂಕಿ-ಅಂಶಗಳು ಕೇವಲ ಬ್ಯಾಂಕಿಂಗ್ ಮತ್ತು ದೇಣಿಗೆ ಸಂಗ್ರಹ ಪ್ರಕ್ರಿಯೆಯಲ್ಲಿ ತೊಡಗಿರುವ ಇತರ ಮೂಲಗಳು ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ₹7 ಕೋಟಿ ದುರ್ಬಳಕೆ ಆರೋಪ, 8 ಮಂದಿ ಬಂಧನ

ಟ್ರಸ್ಟ್‌ನ ವಾರ್ಷಿಕ ವರದಿಯ ಪ್ರಕಾರ, 2024-25ರ ಆರ್ಥಿಕ ವರ್ಷದಲ್ಲಿ ರಾಮಮಂದಿರವು ಒಟ್ಟು ಆದಾಯ 327 ಕೋಟಿ ರೂ.ಗಳನ್ನು ದಾಖಲಿಸಿದೆ. ಇದರಲ್ಲಿ ಭಕ್ತರ ದೇಣಿಗೆಯಿಂದಲೇ 153 ಕೋಟಿ ರೂ.ಗಳು ಸಂಗ್ರಹವಾಗಿದೆ. ಹಣಕಾಸು ವರ್ಷದಲ್ಲಿ ದೇಣಿಗೆ ಅಂಕಿಅಂಶಗಳ ಪ್ರಕಾರ ದಿನಕ್ಕೆ ಸರಾಸರಿ 41.9 ಲಕ್ಷ ರೂ., ಗಂಟೆಗೆ ಸುಮಾರು 1.75 ಲಕ್ಷ ರೂ. ಮತ್ತು ಪ್ರತಿ ನಿಮಿಷಕ್ಕೆ ಸರಿಸುಮಾರು 2,912 ರೂ. ಕಾಣಿಕೆ ಹರಿದುಬಂದಿದೆ.

ದೇವಾಲಯದ ಮೂಲಗಳು ಅಂದಾಜಿನ ಪ್ರಕಾರ ಜನವರಿ 22, 2024 ರಿಂದ 2026 ರ ಮಧ್ಯಭಾಗದವರೆಗೆ ಸುಮಾರು 12 ಕೋಟಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಸರಾಸರಿ ದಿನದಲ್ಲಿ ಸುಮಾರು 50,000 ರಿಂದ 60,000 ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ ವಾರಾಂತ್ಯಗಳು, ಹಬ್ಬಗಳು ಮತ್ತು ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ನಗದು ದೇಣಿಗೆಯ ಜೊತೆಗೆ, ಭಕ್ತರು ದೇವಸ್ಥಾನಕ್ಕೆ ಚಿನ್ನ, ಬೆಳ್ಳಿ, ಆಭರಣಗಳು, ಬಟ್ಟೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಹ ಅರ್ಪಿಸಿದ್ದಾರೆ.