ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹತ್ಯೆಗೀಡಾದ ಸುವೇಂದು ಅಧಿಕಾರಿ ಆಪ್ತ ಸಹಾಯಕನ ತಾಯಿಗೆ ನಂದಿಗ್ರಾಮ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಹತ್ಯೆಗೀಡಾದ ಆಪ್ತ ಸಹಾಯಕ ಚಂದ್ರನಾಥ್ ರಾಥ್ ಅವರ ತಾಯಿ ಹಸಿರಾಣಿ ರಾಥ್ ಅವರನ್ನು ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಸುವೇಂದು ಅಧಿಕಾರಿ ಅವರೇ ಹಸಿರಾಣಿ ರಾಥ್ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ.

ನಂದಿಗ್ರಾಮ ಉಪಚುನಾವಣೆ: ಹಸಿರಾಣಿ ರಾಥ್‌ಗೆ ಬಿಜೆಪಿ ಟಿಕೆಟ್

ಕೊಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಸುವೇಂದು ಅಧಿಕಾರಿ (CM SuvenduAdhikari) ಅವರ ಹತ್ಯೆಗೀಡಾದ ಆಪ್ತ ಸಹಾಯಕನ ತಾಯಿ ಹಸಿರಾಣಿ ರಾಥ್ ಅವರನ್ನು ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ (Nandigram Assembly Constituency) ಉಪಚುನಾವಣೆಗೆ (By-election) ಬಿಜೆಪಿ (BJP) ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಸುವೇಂದು ಅಧಿಕಾರಿ ಅವರ ವೈಯಕ್ತಿಕ ಸಹಾಯಕ ಚಂದ್ರನಾಥ್ ರಾಥ್ ಅವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವ ಮೂರು ದಿನಗಳ ಮುನ್ನ, ಮೇ 3ರಂದು ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದರು. ಮೇ 6ರಂದು ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು, 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡಿತ್ತು.

ಚಂದ್ರನಾಥ್ ರಾಥ್ ಹತ್ಯೆ ಪ್ರಕರಣದಲ್ಲಿ ಜುಲೈನಲ್ಲಿ ಕೇಂದ್ರ ತನಿಖಾ ದಳ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿತ್ತು. ಹತ್ಯೆಗೆ ಸಂಚು ರೂಪಿಸಿದ ಆರೋಪ ಅವರ ಮೇಲಿತ್ತು.

ಬಿಜೆಪಿ ನಾಯಕರು ಹಸಿರಾಣಿ ರಾಥ್ ಅವರನ್ನು ನಂದಿಗ್ರಾಮದಿಂದ ಹಾಗೂ ಸಖಾರವ್ ಸರ್ಕಾರ್ ಅವರನ್ನು ರೇಜಿನಗರ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಿದ್ದಾರೆ.

ಹಸಿರಾಣಿ ರಾಥ್ ಪರ ಸುವೇಂದು ಪ್ರಚಾರ ಸಾಧ್ಯತೆ

ನಂದಿಗ್ರಾಮ ಕ್ಷೇತ್ರವನ್ನು ತೆರವುಗೊಳಿಸಿರುವ ಸುವೇಂದು ಅಧಿಕಾರಿ, ಹಸಿರಾಣಿ ರಾಥ್ ನಾಮಪತ್ರ ಸಲ್ಲಿಸುವ ಮುನ್ನ ಹಲ್ದಿಯಾದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಸುವೇಂದು ಅಧಿಕಾರಿ ನಂದಿಗ್ರಾಮ ಮತ್ತು ಕೋಲ್ಕತ್ತಾದ ಭಬಾನಿಪುರ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಅವರು ಭಬಾನಿಪುರ ಕ್ಷೇತ್ರವನ್ನು ಪ್ರತಿನಿಧಿಸಲು ನಿರ್ಧರಿಸಿದ್ದರು. ಅಲ್ಲಿ ತಮ್ಮ ಹಿಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.

ಟೀ, ಅಪ್ಪುಗೆ, ಶೇಕ್‌ ಹ್ಯಾಂಡ್‌: ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಕ್ಷಣಗಳು; ಅಪರೂಪದ ದೃಶ್ಯ ವೈರಲ್‌

ಟಿಎಂಸಿಯಲ್ಲೂ ಎರಡು ಬಣಗಳ ನಡುವೆ ಪೈಪೋಟಿ

ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಎರಡು ಬಣಗಳು ಮುಖಾಮುಖಿಯಾಗುತ್ತಿವೆ. ಚುನಾವಣಾ ಆಯೋಗವು ಟಿಎಂಸಿಯ ಚುನಾವಣಾ ಚಿಹ್ನೆಯನ್ನು ಯಾವ ಬಣಕ್ಕೆ ನೀಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣ ಸೋಮವಾರ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭಾನುವಾರವೇ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು.

ಎರಡು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಗಳು ಅಕ್ಟೋಬರ್ 9ರಂದು ಪ್ರಕಟವಾಗಲಿವೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನವಾಗಿದೆ.

ವಿಧಾನಸಭೆಯಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿತ್ತು. ಟಿಎಂಸಿ 80 ಸ್ಥಾನಗಳನ್ನು ಪಡೆದುಕೊಂಡಿತ್ತು. ಮರುಮತದಾನ ನಡೆದ ಫಲ್ತಾ ಕ್ಷೇತ್ರವನ್ನೂ ಬಿಜೆಪಿ ಗೆದ್ದುಕೊಂಡಿದ್ದು, ಅದರ ಒಟ್ಟು ಸ್ಥಾನಗಳ ಸಂಖ್ಯೆ 208ಕ್ಕೆ ಏರಿದೆ.

ಏಪ್ರಿಲ್‌ನಲ್ಲಿ ಆಮ್ ಜನತಾ ಉನ್ನಯನ್ ಪಕ್ಷದ ಹುಮಾಯೂನ್ ಕಬೀರ್ ನೌದಾ ಮತ್ತು ರೇಜಿನಗರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಅವರು ನೌದಾ ಕ್ಷೇತ್ರವನ್ನು ಉಳಿಸಿಕೊಂಡರು.