ನವದೆಹಲಿ, ಮಾ.24: ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಒಂದಿಲ್ಲೊಂದು ವಿಚಾರ, ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ, ಇದೀಗ ಬಿಜೆಪಿ ನಾಯಕಿ ಕೊಂಪೆಲ್ಲಾ ಮಾಧವಿ ಲತಾ (Kompella Madhavi Latha) ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಬಾರಿ, ಅವರು ಪ್ರಾರ್ಥನಾ ಕೊಠಡಿಯಿಂದ ಹಂಚಿಕೊಂಡ ವಿಡಿಯೊ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೊವನ್ನು (viral video) ಅವರು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ಲತಾ, ದುರ್ಗಾ ಸೂಕ್ತಂ ಪಠಿಸಿದ್ದಾರೆ. ಕ್ಯಾಮರಾದಲ್ಲಿ ಬುರ್ಖಾ ಧರಿಸಿದ ಕೆಲ ಮಹಿಳೆಯರೂ ಕಂಡುಬಂದಿದ್ದಾರೆ. ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಪೋಸ್ಟ್ಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದವು. ಕೆಲವರು ಮಾಧವಿ ಲತಾ ಅವರ ಸಾರ್ವಜನಿಕ ಭಕ್ತಿ ಮತ್ತು ನಂಬಿಕೆಯನ್ನು ಹೊಗಳಿದರು. ಇನ್ನು ಕೆಲವರು ನಿಯಮವನ್ನು ಮುರಿದು ಇತರರನ್ನು ಅನಾನುಕೂಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿದೆ ವಿಡಿಯೊ:
ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ರಾಷ್ಟ್ರೀಯ ಸಂಯೋಜಕರಾದ ಮೊಹಮ್ಮದ್ ವಸೀಮ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ನಾಗರಿಕ ವಿಮಾನಯಾನ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟ್ಯಾಗ್ ಮಾಡಿ, ದಯವಿಟ್ಟು ಕ್ರಮ ಕೈಗೊಳ್ಳಿ. ಪ್ರಾರ್ಥನಾ ಕೊಠಡಿ ಮೌನ ಪ್ರಾರ್ಥನೆ ಮತ್ತು ಧ್ಯಾನಕ್ಕೆ ಮಾತ್ರ ಸೀಮಿತವಾಗಿದೆ. ಈ ಮಹಿಳೆ ಶಬ್ಧದ ಮೂಲಕ ಪ್ರಾರ್ಥನೆ ಮಾಡಿದ್ದಲ್ಲದೆ, ಕ್ಯಾಮರಾ ಬಳಸುವುದರಿಂದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಮೂಲಕ ಇತರರಿಗೆ ಅಸೌಕರ್ಯ ಉಂಟುಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊಂಪೆಲ್ಲಾ ಮಾಧವಿ ಲತಾ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ವಿರೋಧ ಪಕ್ಷದ ನಾಯಕರು ಅವರನ್ನು ಬಿಜೆಪಿಯ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಒಬ್ಬರು ಎಂದು ಕರೆದಿದ್ದಾರೆ.
ಚೈತ್ರ ನವರಾತ್ರಿಯಂದು ದೇವಿಗೆ ಟೂತ್ ಬ್ರಷ್ ನೀಡಿದ ಬಾಲಕಿ: ಕ್ಯೂಟ್ ವಿಡಿಯೊ ಇಲ್ಲಿದೆ
2024ರಲ್ಲಿ, ಹೈದರಾಬಾದ್ನ ಹಳೆಯ ನಗರ ಪ್ರದೇಶದಲ್ಲಿ ನಡೆದ ರಾಮನವಮಿ ಮೆರವಣಿಗೆಯಲ್ಲಿ ಭಾಗವಹಿಸಿದ ವೇಳೆ, ಮಸೀದಿಯತ್ತ ಬಾಣ ಬಿಡುವ ರೀತಿಯ ಸಂಕೇತ ಮಾಡುತ್ತಿರುವ ವಿಡಿಯೊದಲ್ಲಿ ಕಂಡುಬಂದ ನಂತರ ಲತಾ ಟೀಕೆಗೆ ಗುರಿಯಾಗಿದ್ದರು.
ಮಾಧವಿ ಲತಾ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ 2 ನಿಮಿಷ 29 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಮಹಿಳಾ ಪ್ರಾರ್ಥನಾ ಕೋಣೆಯೊಳಗೆ ಹೋಗುತ್ತಿರುವುದು ನಂತರ ಒಂದು ಮೂಲೆಯಲ್ಲಿ ಕಾಲುಗಳನ್ನು ಮಡಚಿ ಕುಳಿತು ದುರ್ಗಾ ಸೂಕ್ತದ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ.
ವಿಡಿಯೊದಲ್ಲಿ, ಬುರ್ಖಾ ಧರಿಸಿದ ಕನಿಷ್ಠ ಒಂದೆರಡು ಮಹಿಳೆಯರು ಪ್ರವೇಶದ್ವಾರದ ಬಳಿ ಪ್ರಾರ್ಥನಾ ಕೋಣೆಯ ಇನ್ನೊಂದು ಮೂಲೆಯಲ್ಲಿ ನಿಂತಿರುವುದು ಕಂಡುಬರುತ್ತದೆ. ಎರಡು ನಿಮಿಷಗಳ ವಿಡಿಯೊದಲ್ಲಿ, ಮಹಿಳೆಯರು ಅಲ್ಲಿಯೇ ನಿಂತಿದ್ದರು. ಮಾಧವಿ ಲತಾ ಜಪ ಮುಗಿಸಿದ ನಂತರ, ಅವರೊಂದಿಗೆ ಯಾವುದೇ ಸಂಭಾಷಣೆ ನಡೆಸದೆ ಹೊರನಡೆದರು. ಅಲ್ಲಿ ಯಾವುದೇ ವಾಗ್ವಾದ ಗೋಚರಿಸಲಿಲ್ಲ.
ಶಾಂತ ಚಿಂತನೆಗಾಗಿ ಮೀಸಲಾದ ಜಾಗದಲ್ಲಿ ಲತಾ ಅವರು ಗಟ್ಟಿಯಾಗಿ ಪಠಿಸಿ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದ ಬಳಕೆದಾರರು ಅವರನ್ನು ಟೀಕಿಸಿದರು. ಆದರೆ ಬೆಂಬಲಿಗರು, ಅವರು ಎಲ್ಲಾ ಧರ್ಮಗಳಿಗೆ ಮುಕ್ತವಾಗಿರುವ ಸೌಲಭ್ಯದಲ್ಲಿ ಹಿಂದೂ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.